ಮಂಗಳೂರು : 69ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಬೆಸೆಂಟ್ ಮಹಿಳಾ ಕಾಲೇಜು, ಕೊಡಿಯಾಲ್ಬೈಲ್, ಮಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ, ಮಂಗಳೂರು ವಕೀಲರ ಸಂಘ ಮತ್ತು ಜಿಲ್ಲಾ ಕಾರಾಗೃಹ, ದಕ್ಷಿಣ ಕನ್ನಡ, ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಭಾವೈಕ್ಯತಾ ಪ್ರೇರಣಾ ಕಾರ್ಯಕ್ರಮವಾದ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ ನಡೆಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಗಣೇಶ್ ಬಿ., ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು, ಬಂಧೀಖಾನೆಯ ನಿವಾಸಿಗಳು ಇಂದಿನ ಕಾರ್ಯಕ್ರಮದಿಂದ ಪ್ರೇರಣೆ ಪಡೆದುಕೊಂಡು ಮುಂದೆ ಬಿಡುಗಡೆ ಹೊಂದಿದ ಸಂದರ್ಭದಲ್ಲಿ ಜೀವನವನ್ನು ಸಫಲವಾಗಿ ಕಳೆಯಲು ಎಲ್ಲಾ ರೀತಿಯಲ್ಲಿ ಸಜ್ಜುಗೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ, ಉಡುಪಿ, ಇದರ ಅಧ್ಯಕ್ಷರಾದ ಡಾ. ರವೀಂದ್ರನಾಥ ಶಾನುಭಾಗ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ನಿವಾಸಿಗಳನ್ನು ಕುರಿತು ವಕೀಲರ ಅಲಭ್ಯತೆಯಿಂದಾಗಿ ಬಹಳಷ್ಟು ಕೈದಿಗಳು ಅನಾವಶ್ಯಕವಾಗಿ ಕಾನೂನಿನ ಕೈಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ.
ಸಮರ್ಪವಾಕದ ವಕೀಲರ ಸಹಾಯದಿಂದಾಗಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯಬಹುದಾಗಿದೆ. ಈ ಬಗ್ಗೆ ತಮ್ಮ ಪ್ರತಿಷ್ಠಾನದ ವತಿಯಿಂದ ಹೊರದೇಶಗಳಲ್ಲಿ ಶಿಕ್ಷೆ ವಿಧಿಸಲಾದ ಭಾರತೀಯರನ್ನು ಕಾನೂನು ಪ್ರಕಾರವಾಗಿ ನಿರಪರಾಧಿಗಳೆಂದು ಸಾಬೀತು ಮಾಡಲಾದ ಉದಾಹರಣೆ ಕೊಟ್ಟರು. ವಿದೇಶಗಳಲ್ಲಿ ಕಾರಾಗೃಹದೊಳಗೆ ಉತ್ತಮ ಗ್ರಂಥಾಲಯ ಹಾಗೂ ಶೈಕ್ಷಣಿಕ ತರಬೇತಿಗಳು ಲಭ್ಯವಾಗಿದ್ದು ಭಾರತದಲ್ಲಿಯೂ ಮುಂದೆ ಕಾರಾಗೃಹಗಳು ತಪ್ಪು ತಿದ್ದಿಕೊಳ್ಳುವ ಕೇಂದ್ರಗಳಾಗಿ ಮಾರ್ಪಡಬೇಕು ಎಂದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇದೇ ಕಾರಾಗೃಹದಲ್ಲಿ ತಮ್ಮ ಜೈಲುವಾಸವನ್ನು ನೆನಪಿಸಿಕೊಳ್ಳುತ್ತಾ ಅಂದು ಕೈದಿಗಳೊಂದಿಗೆ ತಾವು ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ತಿಳಿದುಕೊಂಡಿದ್ದು ಅಲ್ಲದೇ ವೈದ್ಯಶಾಸ್ತ್ರದೊಂದಿಗೆ ಕಾನೂನು ಪದವಿ ಪಡೆದುಕೊಂಡಿದ್ದು ಇಂದು ಮಾನವ ಹಕ್ಕುಗಳ ಬಗ್ಗೆ ಹೋರಾಡಲು ಸಹಾಯಕವಾಗಿದೆ ಎಂದರು.
ವಕೀಲರ ಸಂಘದ ಉಪಾಧ್ಯಕರಾದ ಯಶೋಧರ ಕರ್ಕೆರಾ ಕೈದಿಗಳಿಗೆ ಶುಭ ಕೋರಿದರು. ಡಬ್ಲೂ.ಎನ್.ಇ.ಎಸ್ ಅಧ್ಯಕ್ಷರು ಕುಡ್ಪಿ ಜಗದೀಶ್ ಶೆಣ್ಯೆ ಅಧ್ಯಕ್ಷೀಯ ಭಾಷಣದಲ್ಲಿ ಎಲ್ಲಾ ನಿವಾಸಿಗಳಿಗೂ ವಿದ್ಯಾರ್ಥಿಗಳಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳನ್ನು ತಿಳಿಸಿದರು. ೮ ತಂಡಗಳು ದೇಶಪ್ರೇಮ ಗೀತೆಗಳನ್ನು ಹಾಡಿದರು. ಒಬ್ಬರು ಆರಕ್ಷಕರು ಹಾಗೂ ಇಬ್ಬರು ಕೈದಿಗಳೂ ಹಾಡಿದರು. ಸ್ಪರ್ಧೆಯಲ್ಲಿ ಪ್ರೀತಿಕಾ ಮತ್ತು ತಂಡ ಪ್ರಥಮ, ಸಂಕೇತ ಮತ್ತು ತಂಡ ದ್ವಿತೀಯ ಹಾಗೂ ಅಪೇಕ್ಷಾ ಮತ್ತು ತಂಡದವರು ತೃತೀಯ ಬಹುಮಾನ ಪಡೆದರು.
ಡಾ. ಮೀನಾಕ್ಷಿ ರಾಮಚಂದ್ರ ಸ್ವಾಗತಿಸಿದರು. ಪ್ರಾಂಶುಪಾಲೆ ಡಾ. ಸುಧಾ ಕೆ ವಂದಿಸಿದರು. ಕುಮಾರಿ ಪ್ರೀತಮಾ ನಿರೂಪಿಸಿದರು. ಕಾರಾಗೃಹದ ಮೇಲ್ವಿಚಾರಕರಾದ ಶ್ರೀ ಓಬಳೇಶಪ್ಪ, ವಕೀಲರ ಸಂಘದ ಕಾರ್ಯದರ್ಶಿ ಎಂ. ಎ. ರಾಘವೇಂದ್ರ, ಕಾಲೇಜಿನ ಸಂಚಾಲಕರಾದ ಶ್ರೀ ಕೆ. ದೇವಾನಂದ ಪೈ, ಡಬ್ಲೂ.ಎನ್.ಇ.ಎಸ್ ಕಾರ್ಯದರ್ಶಿ ಶ್ಯಾಮ್ ಸುಂದರ್ ಕಾಮತ್, ಕಾರ್ಯಕ್ರಮದ ಸಂಯೋಜಕರಾದ ಪ್ರೊ.ಗಣೇಶ್ ಪೈ ಎನ್. ವ್ಯವಸ್ಥಾಪಕ ಮಂಡಳಿಯ ಸದಸ್ಯರಾದ ನಗರ ನಾರಾಯಣ್ ಶೆಣ್ಯೆ ಮತ್ತಿತರರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.