ನವದೆಹಲಿ: ದೇಶದಲ್ಲಿ ಕೊರೋನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರೀಯವಾಗಿ ಸಂರಕ್ಷಿತ ಸ್ಮಾರಕಗಳು, ವಸ್ತು ಸಂಗ್ರಹಾಲಯಗಳು ಮತ್ತು ಭಾರತೀಯ ಪುರಾತತ್ವ ಇಲಾಖೆ (ಎಎಸ್ಐ)ಯಡಿಯಲ್ಲಿನ ತಾಣಗಳನ್ನು ಮೇ 15 ರವರೆಗೆ ತಕ್ಷಣ ಜಾರಿಗೆ ಬರುವಂತೆ ಮುಚ್ಚಲಾಗಿದೆ.
ಈ ಕುರಿತು ಎಎಸ್ಐ ಆದೇಶ ಹೊರಡಿಸಿದ್ದು, ಇದನ್ನು ಸಾಂಸ್ಕೃತಿಕ ಸಚಿವ ಪ್ರಹ್ಲಾದ್ ಪಟೇಲ್ ಅವರು ಗುರುವಾರ ಸಂಜೆ ಟ್ವೀಟ್ ಮಾಡಿದ್ದಾರೆ.
“ಚಾಲ್ತಿಯಲ್ಲಿರುವ ಕೋವಿಡ್ ಪರಿಸ್ಥಿತಿಯಿಂದಾಗಿ, ಎಎಸ್ಐ ಅಡಿಯಲ್ಲಿರುವ ಎಲ್ಲಾ ಕೇಂದ್ರೀಯಸಂರಕ್ಷಿತ ಸ್ಮಾರಕಗಳು, ತಾಣಗಳು ಮತ್ತು ವಸ್ತು ಸಂಗ್ರಹಾಲಯಗಳನ್ನು ತಕ್ಷಣದಿಂದ ಮೇ 15 ರವರೆಗೆ ಅಥವಾ ಮುಂದಿನ ಆದೇಶದವರೆಗೆ ಜಾರಿಗೆ ಬರುವಂತೆ ಮಚ್ಚಲು ನಿರ್ಧರಿಸಲಾಗಿದೆ” ಎಂದು ಎಎಸ್ಐ ತಿಳಿಸಿದೆ.
ಇವುಗಳಲ್ಲಿ 3,693 ಸ್ಮಾರಕಗಳು ಮತ್ತು 50 ವಸ್ತು ಸಂಗ್ರಹಾಲಯಗಳಿವೆ. ಪುರಿ ಜಗನ್ನಾಥ ದೇವಸ್ಥಾನ ಮತ್ತು ಸೋಮನಾಥ ದೇವಾಲಯದಂತಹ ಸ್ಮಾರಕಗಳಲ್ಲಿ ಪ್ರತಿದಿನ ‘ಪೂಜೆ’ ನಡೆಸಲಾಗುವುದು ಆದರೆ ಯಾವುದೇ ಸಾರ್ವಜನಿಕ ಕೂಟಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಸಚಿವಾಲಯದ ಮಾಧ್ಯಮ ಸಲಹೆಗಾರ ನಿತಿನ್ ತ್ರಿಪಾಠಿ ಹೇಳಿದ್ದಾರೆ.
ಕಳೆದ ವರ್ಷ, ಮಾರ್ಚ್ 17 ರಂದು ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಎಎಸ್ಐ ನಿರ್ವಹಿಸುತ್ತಿದ್ದ ಎಲ್ಲಾ ಸ್ಮಾರಕಗಳು ಮತ್ತು ತಾಣಗಳನ್ನು ಮುಚ್ಚಲಾಗಿತ್ತು. ನಂತರ ಕಡ್ಡಾಯ ಮುಖಗವಸು, ಸಂದರ್ಶಕರ ಸಂಖ್ಯೆಯ ಮೇಲೆ ನಿರ್ಬಂಧ, ಮತ್ತು ಸಾಮಾಜಿಕ ಅಂತರ ಮುಂತಾದ ಕಟ್ಟುನಿಟ್ಟಿನ ನಿರ್ಬಂಧಗಳೊಂದಿಗೆ ಜುಲೈನಲ್ಲಿ ಅವು ಮತ್ತೆ ತೆರೆಯಲ್ಪಟ್ಟವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.