ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಷ್ಟ್ರ ರಾಜಧಾನಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಗೆ ಈಗ ವಿದೇಶಗಳ ಕೆಲವು ಸೆಲೆಬ್ರಿಟಿಗಳು ಸಾಮಾಜಿಕ ಜಾಲ ತಾಣದ ಮೂಲಕ ಬೆಂಬಲ ನೀಡುತ್ತಿದ್ದಾರೆ. ಹ್ಯಾಶ್ಟ್ಯಾಗ್ ಟ್ರೆಂಡ್ ಮಾಡುತ್ತಿದ್ದಾರೆ. ಈ ಬೆಳವಣಿಗೆಗಳ ಬಗ್ಗೆ ಕೇಂದ್ರ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯೆ ನೀಡಿದೆ.
ಕೇಂದ್ರ ವಿದೇಶಾಂಗ ಸಚಿವಾಲಯ ನೀಡಿರುವ ಹೇಳಿಕೆಯ ಸಾರಾಂಶ ಇಲ್ಲಿದೆ.
“ಸಂಪೂರ್ಣ ಚರ್ಚೆ ಮತ್ತ ಮಾತುಕತೆಯ ಬಳಿಕ ಭಾರತದ ಸಂಸತ್ತು ಕೃಷಿ ವಲಯಕ್ಕೆ ಸಂಬಂಧಿಸಿದ ಸುಧಾರಣಾತ್ಮಕ ಕಾನೂನುಗಳನ್ನು ಅನುಮೋದಿಸಿದೆ. ಈ ಸುಧಾರಣೆಗಳು ವಿಸ್ತೃತ ಮಾರುಕಟ್ಟೆ ಪ್ರವೇಶ ಮತ್ತು ರೈತರಿಗೆ ಅತ್ಯುತ್ತಮ ಅವಕಾಶಗಳನ್ನು ಒದಗಿಸುತ್ತದೆ. ಆರ್ಥಿಕವಾಗಿ ಮತ್ತು ಪರಿಸರಾತ್ಮಕವಾಗಿ ಇದು ಸುಸ್ಥಿರ ಕೃಷಿಗೆ ದಾರಿಮಾಡಿಕೊಡುತ್ತದೆ. ದೇಶದ ಕೆಲವು ಭಾಗದ ರೈತರ ಸಣ್ಣ ವರ್ಗ ಈ ಸುಧಾರಣೆಗಳ ಬಗ್ಗೆ ಕೆಲವು ಅನುಮಾನಗಳನ್ನು ಹೊಂದಿದೆ. ಪ್ರತಿಭಟನಾಕಾರರ ಭಾವನೆಗಳನ್ನು ಗೌರವಿಸುತ್ತಾ, ಭಾರತ ಸರಕಾರವು ಅವರ ಪ್ರತಿನಿಧಿಗಳೊಂದಿಗೆ ಸರಣಿ ಮಾತುಕತೆಗಳನ್ನು ಆಯೋಜಿಸಿದೆ. ಕೇಂದ್ರ ಸಚಿವರುಗಳು ಈ ಸಮಾಲೋಚನೆಯ ಭಾಗವಾಗಿದ್ದಾರೆ ಮತ್ತು 11 ಸುತ್ತುಗಳ ಮಾತುಕತೆಗಳು ಈಗಾಗಲೇ ನಡೆದಿವೆ. ಕಾನೂನನ್ನು ತಡೆಹಿಡಿಯುವ ಆಫರ್ ಅನ್ನು ಕೂಡ ಸರಕಾರ ಅವರಿಗೆ ನೀಡಿತ್ತು, ಸ್ವತಃ ಭಾರತದ ಪ್ರಧಾನ ಮಂತ್ರಿಗಳೇ ಈ ಆಫರ್ ನೀಡಿದ್ದರು.
ಆದರೂ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ಪ್ರತಿಭಟನೆಯ ಅಜೆಂಡಾವನ್ನು ಅತಿಕ್ರಮಿಸಲು ಮತ್ತು ಹಾದಿ ತಪ್ಪಿಸಲು ಪ್ರಯತ್ನಿಸುತ್ತಿರುವುದು ದುರಾದೃಷ್ಟಕರ. ಜನವರಿ 26ರ ಗಣರಾಜ್ಯೋತ್ಸವದಂದು ಈ ಷಡ್ಯಂತ್ರ ಸಾಬೀತಾಗಿದೆ ಕೂಡ. ಇವರ ಕೃತ್ಯದಿಂದ ರಾಷ್ಟ್ರೀಯ ಸ್ಮಾರಕ, ಭಾರತದ ಸಂವಿಧಾನ ಅನುಷ್ಠಾನಗೊಂಡ ದಿನ ಕಳಂಕಿತವಾಯಿತು ಮತ್ತು ಹಿಂಸೆ ಹಾಗೂ ದಾಂಧಲೆ ರಾಷ್ಟ್ರರಾಜಧಾನಿಯಲ್ಲಿ ನಡೆದು ಹೋಯಿತು.
ಈ ಕೆಲವು ಪಟ್ಟಭದ್ರ ಹಿತಾಸಕ್ತಿ ಗುಂಪುಗಳು ಭಾರತದ ವಿರುದ್ಧ ಅಂತರಾಷ್ಟ್ರೀಯ ಬೆಂಬಲವನ್ನು ಸಂಗ್ರಹಿಸುವ ಪ್ರಯತ್ನವನ್ನು ಕೂಡ ಮಾಡುತ್ತಿವೆ. ಅಂತಹ ದುಷ್ಟಶಕ್ತಿಗಳಿಂದ ಪ್ರೇರಣೆಯನ್ನು ಪಡೆದು ಜಗತ್ತಿನ ವಿವಿಧ ಭಾಗಗಳಲ್ಲಿನ ಮಹಾತ್ಮ ಗಾಂಧಿ ಪ್ರತಿಮೆಯನ್ನು ವಿರೂಪಗೊಳಿಸಲಾಗಿದೆ. ಇದು ಭಾರತಕ್ಕೆ ಮತ್ತು ನಾಗರಿಕ ಸಮಾಜಕ್ಕೆ ನಿಜವಾಗಲು ಆಘಾತಕಾರಿಯಾಗಿದೆ. ಅತೀವ ಸಂಯಮದೊಂದಿಗೆ ಭಾರತೀಯ ಪೊಲೀಸ್ ಪಡೆ ಈ ಪ್ರತಿಭಟನೆಯನ್ನು ನಿರ್ವಹಿಸಿದೆ. ಪೊಲೀಸ್ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಲವಾರು ಪುರುಷರು ಮತ್ತು ಮಹಿಳೆಯರು ದೈಹಿಕವಾಗಿ ಈ ವೇಳೆ ಹಲ್ಲೆಗೆ ಒಳಪಟ್ಟರು ಮತ್ತು ಕೆಲವರಿಗೆ ಖಡ್ಗದಿಂದ ಇರಿಯಲಾಯಿತು, ಅನೇಕರು ಗಂಭೀರವಾಗಿ ಗಾಯಗೊಂಡರು.
ಈ ಪ್ರತಿಭಟನೆಗಳನ್ನು ಮತ್ತು ಬಿಕ್ಕಟ್ಟನ್ನು ಪರಿಹರಿಸಲು ಸರ್ಕಾರ ಮತ್ತು ಸಂಬಂಧಪಟ್ಟ ರೈತರ ಗುಂಪಿನ ಪ್ರಯತ್ನವನ್ನು ಭಾರತದ ಪ್ರಜಾಸತ್ತಾತ್ಮಕ ಆಶಯ ಮತ್ತು ರಾಜಕೀಯ ಆಯಾಮದಲ್ಲಿ ನೋಡಬೇಕು ಎಂದು ನಾವು ಒತ್ತಿ ಹೇಳಲು ಬಯಸುತ್ತೇವೆ.
ಇಂತಹ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುವ ಮುನ್ನ, ಸತ್ಯಾಸತ್ಯತೆಗಳನ್ನು ಅರಿತುಕೊಳ್ಳಬೇಕು ಮತ್ತು ವಿಷಯವನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳಬೇಕು ಎಂಬುದು ನಮ್ಮ ಮನವಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ, ಅದರಲ್ಲೂ ವಿಶೇಷವಾಗಿ ಸೆಲೆಬ್ರಿಟಿಗಳು ಮತ್ತು ಇತರರ ಸೆನ್ಸೇಷನ್ ಸೃಷ್ಟಿಸುವ ಹಪಹಪಿಯ ಹ್ಯಾಶ್ಟ್ಯಾಗ್ ಮತ್ತು ಕಾಮೆಂಟುಗಳಿಗೆ ನಿಖರತೆ ಅಥವಾ ಹೊಣೆಗಾರಿಕೆ ಇರುವುದಿಲ್ಲ.”
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.