ಉಡುಪಿ: ಆಂಧ್ರಪ್ರದೇಶದಲ್ಲಿ ಹಿಂದೂ ದೇವಾಲಯಗಳ ಮೇಲಾಗುತ್ತಿರುವ ದಾಳಿಯನ್ನು ಖಂಡಿಸಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡುವಂತೆಯೂ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಆಂಧ್ರದ ವಿಜಯನಗರಂ ಜಿಲ್ಲೆಯ ರಾಮತೀರ್ಥಂನ ಬೋಡಿಕೊಂಡ ಬೆಟ್ಟದ ಮೇಲಿನ ಪುರಾತನ ಸೀತಾ ಲಕ್ಷ್ಮಣ ಕೋದಂಡರಾಮ ದೇಗುಲದ 400 ವರ್ಷಗಳ ಪುರಾತನ ರಾಮ ವಿಗ್ರಹವನ್ನು ಧ್ವಂಸಗೊಳಿಸಿದ್ದಾರೆ. ವಿಗ್ರಹದ ತುಂಡರಿಸಲ್ಪಟ್ಟ ಭಾಗವು ಸಮೀಪದ ಕೊಳದಲ್ಲಿ ಪತ್ತೆಯಾಗಿದೆ. ಈ ಘಟನೆ ನಡೆದು ಸುಮಾರು 20 ದಿನಗಳೇ ಕಳೆದು ಹೋಗಿದ್ದರೂ ಈ ವರೆಗೆ ಅಲ್ಲಿನ ಸರ್ಕಾರ ಆರೋಪಿಗಳ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಅಲ್ಲಿನ ಸರ್ಕಾರ ಇಂತಹ ವಿಧ್ವಂಸಕ ಘಟನೆಗಳ ಬಗ್ಗೆ ದಿವ್ಯ ಮೌನ ತಾಳಿದೆ ಎಂದು ಶ್ರೀಗಳು ಪತ್ರದಲ್ಲಿ ತಿಳಿಸಿದ್ದಾರೆ.
ಆಂದ್ರಪ್ರದೇಶದಲ್ಲಿ ಕಳೆದ ಒಂದೂವರೆ ವರ್ಷಗಳಿಂದೀಚೆಗೆ ಇಂತಹ ಕುಕೃತ್ಯಗಳು ನಡೆಯುತ್ತಲೇ ಬಂದಿದೆ. ಇವೆಲ್ಲವೂ ದುರುದ್ದೇಶಪೂರಿತ ಕೆಲಸಗಳಾಗಿವೆ. ಈ ದಾಳಿಗಳು ಪೂರ್ವಯೋಜಿತ ಸಂಚಿನಂತೆ ಕಂಡು ಬರುತ್ತಿದೆ. ಅಲ್ಲಿನ ಸರ್ಕಾರದ ನಿರ್ಲಕ್ಷ್ಯದ ಕಾರಣದಿಂದಲೇ ಇಂತಹ ಘಟನೆಗಳು ಹೆಚ್ಚು ಹೆಚ್ಚು ನಡೆಯುತ್ತಿವೆ. ದೇವಾಲಯಗಳ ರಕ್ಷಣೆಗೆ ಅಲ್ಲಿನ ಸರ್ಕಾರ ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದೂ ಶ್ರೀಗಳು ತಮ್ಮ ಪತ್ರದಲ್ಲಿ ಅಮಿತ್ ಶಾ ಅವರಿಗೆ ಹೇಳಿದ್ದಾರೆ. ಆದ್ದರಿಂದ ಆಂಧ್ರಪ್ರದೇಶದಲ್ಲಿ ದೇವಾಲಯಗಳ ರಕ್ಷಣೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೆಶಿಸುವಂತೆಯೂ ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.