ಕೊಪ್ಪಳ: ರಾಜ್ಯದ ಕೊಪ್ಪಳ ಜಿಲ್ಲೆಯಲ್ಲಿ ಏಕಸ್ ಕಂಪೆನಿಯಿಂದ ನಿರ್ಮಾಣವಾಗಲಿರುವ ದೇಶದ ಮೊದಲ, ವಿಶ್ವದ ಅತೀ ದೊಡ್ಡ ಟಾಯ್ಸ್ ಕ್ಲಸ್ಟರ್ ಗೆ ಇಂದು ಸಿಎಂ ಯಡಿಯೂರಪ್ಪ ಅವರ ಅಡಿಗಲ್ಲು ಹಾಕಿ ಭೂಮಿಪೂಜೆಯನ್ನು ನೆರವೇರಿಸಿದರು.
ಜಿಲ್ಲೆಯ ಕುಕನೂರು ತಾಲೂಕಿನ ತಳಬಾಳ ಗ್ರಾಮದ ಸಮೀಪದಲ್ಲಿನ 450 ಎಕರೆ ಪ್ರದೇಶದಲ್ಲಿ ಈ ಆಟಿಕೆ ವಲಯ ನಿರ್ಮಾಣವಾಗಲಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯದ ಆತ್ಮನಿರ್ಭರದ ಭಾಗವಾಗಿದೆ. ಹಾಗೆಯೇ ಚೀನಾದ ಆಟಿಕೆ ಮಾರುಕಟ್ಟೆಗೆ ಸೆಡ್ಡುಹೊಡೆದು, ಸ್ವದೇಶಿ ಆಟಿಕೆಗಳನ್ನು ನಿರ್ಮಿಸಿ ದೇಶಕ್ಕೆ ಪೂರೈಕೆ ಮಾಡುವ ನಿಟ್ಟಿನಲ್ಲಿಯೂ ಈ ಕ್ಲಸ್ಟರ್ ಮಹತ್ವ ಪಡೆಯಲಿದೆ. ಮುಂದಿನ ಒಂದು ವರ್ಷದಲ್ಲಿ ಈ ವಲಯ ನಿರ್ಮಾಣ ಕಾರ್ಯ ಸಂಪೂರ್ಣಗೊಳ್ಳುವ ಸಾಧ್ಯತೆ ಇದೆ. ಈ ಕ್ಲಸ್ಟರ್ ಸುಮಾರು 40 ಸಾವಿರ ಜನರಿಗೆ ನೇರವಾಗಿ ಉದ್ಯೋಗ ಕಲ್ಪಿಸುವ ಮತ್ತು ಸುಮಾರು 1 ಲಕ್ಷ ಜನರಿಗೆ ಪರೋಕ್ಷ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿಯೂ ಪ್ರಾಮುಖ್ಯತೆ ಪಡೆಯಲಿದೆ.
ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಸಿಎಂ ಯಡಿಯೂರಪ್ಪ, ಪಾರಂಪರಿಕ ಆಟಿಕೆಗಳಿಗೆ ಹೆಸರಾಗಿರುವ ಕೊಪ್ಪಳದಲ್ಲಿ ಆಟಿಕೆ ನಿರ್ಮಾಣ ಕೇಂದ್ರ ಆರಂಭವಾಗುತ್ತಿರುವುದು ಹೆಮ್ಮೆಯ ವಿಷಯ. ಮುಂದಿನ ಒಂದು ವರ್ಷದಲ್ಲೇ ಈ ಕಾರ್ಯ ಸಂಪೂರ್ಣವಾದರೆ ಪ್ರಧಾನಿ ಮೋದಿ ಅವರಿಂದಲೇ ಉದ್ಘಾಟಿಸುವ ನಿಟ್ಟಿನಲ್ಲಿ ಪ್ರಯತ್ನ ಕೈಗೊಳ್ಳಲಾಗುವುದು. ಈ ಕ್ಷೇತ್ರದಲ್ಲಿ ವಿಶೇಷವಾಗಿ ಮಹಿಳೆಯರಿಗೂ ಹೆಚ್ಚಿನ ಉದ್ಯೋಗ ಸೃಷ್ಟಿಸುವಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ. ರಾಜ್ಯದಲ್ಲಿ ಉದ್ಯಮ ಸ್ನೇಹಿ ವಾತಾವರಣವನ್ನು ನಿರ್ಮಾಣ ಮಾಡಲಾಗಿದ್ದು, ದೇಶ ವಿದೇಶಗಳ ಹೂಡಿಕೆಗಳನ್ನು ಸೆಳೆಯುವಲ್ಲಿ ರಾಜ್ಯ ಮುಂಚೂಣಿಯಲ್ಲಿದೆ ಎಂಬುದು ರಾಜ್ಯಕ್ಕೆ ಹೆಮ್ಮೆಯಾಗಿದೆ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸುದ್ದಿಗಾರರ ಜೊತೆಗೂ ಮಾತನಾಡಿದ ಅವರು, ರಾಜ್ಯದಲ್ಲಿ ಈ ಬಾರಿ ಕೊರೋನಾ ಸೋಂಕು, ಅತಿವೃಷ್ಟಿ ಮೊದಲಾದ ಹತ್ತು ಹಲವು ಸಮಸ್ಯೆಗಳ ಕಾರಣದಿಂದಾಗಿ ಆರ್ಥಿಕ ಹಿನ್ನೆಡೆಯಾಗಿದೆ. ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಸಹ ಕುಂಟಿತವಾಗಿದೆ. 2020 ರ ಈ ಎಲ್ಲಾ ಪರಿಸ್ಥಿತಿಗಳೂ 2021 ರ ಆರ್ಥಿಕ ವರ್ಷದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀಳಲಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಈ ಬಾರಿ ಅನುದಾನದ ಕೊರತೆ ಇತ್ತು ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಈ ಸಾರಿಯ ಬಜೆಟ್ನಲ್ಲಿಯೂ 40% ದಿಂದ 50% ವರೆಗಿನ ಅನುದಾನ ಈ ಸಮಸ್ಯೆಗಳ ಪರಿಹಾರಕ್ಕಾಗಿಯೇ ಬಳಕೆಯಾಗುವ ಸಾಧ್ಯತೆ ಇರಲಿದೆ. ಹಾಗಾಗಿ ಎಲ್ಲಾ ಅಭಿವೃದ್ಧಿ ಕಾರ್ಯಗಳು ನಿಧಾನಗತಿಯನ್ನು ಪಡೆದಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.