ಬೆಂಗಳೂರು: ಕೃಷಿಗೆ ಸಂಬಂಧಿಸಿದಂತೆ ಕೀಟಬಾಧೆ, ಮಣ್ಣು ಪರೀಕ್ಷೆ, ನೀರು ಪರೀಕ್ಷೆ ಮೊದಲಾದ ತಾಂತ್ರಿಕ ನೆರವನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ‘ಕೃಷಿ ಸಂಜೀವಿನಿ’ ಹೆಸರಿನಲ್ಲಿ ಸಂಚಾರಿ ಕೃಷಿ ವಾಹನಗಳ ಲೋಕಾರ್ಪಣೆ ಜ. 7 ರಂದು ನಡೆಯಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಧಾನಸೌಧದ ಪೂರ್ವದ್ವಾರದ ಮುಂಭಾಗದಲ್ಲಿ ಈ ವಾಹನಗಳ ಲೋಕಾರ್ಪಣೆ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ಕೃಷಿ ಸಚಿವ ಬಿ. ಸಿ. ಪಾಟೀಲ್ ಅವರು ಪರೀಕ್ಷಾ ಉಪಕರಣಗಳಿಗೆ ಚಾಲನೆ ನೀಡಲಿದ್ದಾರೆ. ರಾಜ್ಯದ ಚಿಕ್ಕ ಜಿಲ್ಲೆಗೆ ಸಂಬಂಧಿಸಿದಂತೆ ಒಂದು ವಾಹನ ಮತ್ತು ದೊಡ್ಡ ಮಟ್ಟದಲ್ಲಿ ವ್ಯಾಪ್ತಿಯನ್ನು ಹೊಂದಿರುವ ಜಿಲ್ಲೆಗಳಿಗೆ ಎರಡರಂತೆ ಒಟ್ಟು 40 ಸಂಚಾರಿ ಕೃಷಿ ಸಂಜೀವಿನಿ ವಾಹನಗಳು ಸಂಚರಿಸಲಿವೆ ಎಂದು ಮೂಲಗಳು ಮಾಹಿತಿ ನೀಡಿವೆ.
ಕೃಷಿ ಸಂಜೀವಿನಿಯ ಮೂಲಕ ಸುಧಾರಿತ ಕೃಷಿ ಉತ್ಪಾದನಾ ತಾಂತ್ರಿಕತೆ, ಗುಣಮಟ್ಟದ ಕೃಷಿ ಉಪಕರಣಗಳ ಪೂರೈಕೆ, ಶಿಫಾರಸ್ಸು ಮಾಡಲಾದ ರಸಗೊಬ್ಬರಗಳ ಸಮರ್ಪಕ ಪೂರೈಕೆ, ಬಳಕೆ, ರೋಗಕಾರಕ ಕೀಟಗಳ ನಿಯಂತ್ರಣ, ಮಣ್ಣಿನಲ್ಲಿ ಲಭ್ಯವಿರುವ ಪೋಷಕಾಂಶಗಳ ಬಗ್ಗೆ ಮಾಹಿತಿ ನೀಡುವುದು, ಸೂಕ್ತ ಬೆಳೆ ಬೆಳೆಯುವುದಕ್ಕೆ ಅಗತ್ಯ ಮಾಹಿತಿಗಳನ್ನು ರೈತರಿಗೆ ಒದಗಿಸುವುದಕ್ಕೆ ಸರ್ಕಾರ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಮುಂದಾಗಿದೆ.ರೈತರ ಕೃಷಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅವರ ಕೃಷಿ ಭೂಮಿಯಲ್ಲಿಯೇ ಅವರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿಯೂ ಈ ಯೋಜನೆ ಮಹತ್ವ ಪಡೆಯಲಿದೆ.
ಟೋಲ್ ಪ್ರೀ ಸಂಖ್ಯೆ 155313 ಸಂಖ್ಯೆಗೆ ಕರೆ ಮಾಡುವ ಮೂಲಕ ಕೃಷಿ ಸಂಜೀವಿನಿಯ ಸಂಪೂರ್ಣ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಯಾವ ಜಿಲ್ಲೆಯಿಂದ ಕರೆ ಮಾಡಿದರೂ, ಕರೆ ಮಾಡಿದ ಜಿಲ್ಲೆಗೆ ಸಂಬಂಧಿಸಿದ ಜಂಟಿ ಕೃಷಿ ನಿರ್ದೇಶಕರಿಗೆ ಕರೆ ತಲುಪುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಅವರೊಂದಿಗೆ ಮಾತನಾಡುವ ಮೂಲಕ ತಮ್ಮ ಸಮಸ್ಯೆಗಳಿಗೆ ರೈತರು ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಮೂಲಗಳು ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.