ಬೆಂಗಳೂರು: ಕೊರೋನಾ ವ್ಯಾಕ್ಸಿನ್ ಅನ್ನು ಭಾರತದ ಭಾರತ್ ಬಯೋಟೆಕ್ ಕಂಪೆನಿ ಅಭಿವೃದ್ಧಿಪಡಿಸಿದೆ. ವಿಪಕ್ಷಗಳು ಈ ಲಸಿಕೆಗೆ ಸಂಬಂಧಿಸಿದಂತೆ ತಪ್ಪುಗಳನ್ನು ಭಿತ್ತುವ ಕೆಲಸವನ್ನು ಮಾಡುತ್ತಿವೆ. ಸೂಕ್ತ ಕಾರಣಗಳಿಲ್ಲದೆ ವ್ಯಾಕ್ಸಿನ್ಗೆ ಸಂಬಂಧಿಸಿದಂತೆ ಜನರಲ್ಲಿ ತಪ್ಪು ಅಭಿಪ್ರಾಯಗಳನ್ನು ಸೃಷ್ಟಿಸುವ ಅಥವಾ ವಿನಾಕಾರಣ ಟೀಕೆಗಳನ್ನು ಮಾಡುವ ಮೂಲಕ ಲಸಿಕೆ ಸಂಶೋಧನೆ ಮಾಡಿರುವ ವಿಜ್ಞಾನಿಗಳಿಗೆ ಅಗೌರವ ತೋರಿಸುವುದು ತಪ್ಪು ಎಂದು ಸಚಿವ ಡಾ. ಸುಧಾಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತ್ ಬಯೋಟೆಕ್ ಸಂಸ್ಥೆಯು ದೇಶದಲ್ಲೇ ಅತ್ಯಂತ ಹೆಚ್ಚು ನಂಬಿಕೆಗೆ ಅರ್ಹವಾದ ಸಂಸ್ಥೆಯಾಗಿದೆ. ಕೊರೋನಾ ಸಂಕಷ್ಟದ ಅವಧಿಯಲ್ಲಿಯೂ ತ್ವರಿತಗತಿಯಲ್ಲಿ ಕಾರ್ಯಾಚರಣೆ ನಡೆಸಿ ಲಸಿಕೆ ಅಭಿವೃದ್ಧಿ ಮಾಡಿದೆ. ಇದೇ ಸಂಸ್ಥೆ ಈ ಹಿಂದೆ ರೇಬಿಸ್, ಎಚ್1ಎನ್1, ಚಿಕುನ್ಗುನ್ಯಾ, ಝೀಕಾ ಮೊದಲಾದ ಕಾಯಿಲೆಗಳಿಗೂ ಸೂಕ್ತ ಲಸಿಕೆಗಳನ್ನು ಅಭಿವೃದ್ಧಿ ಮಾಡಿ ಜನರನ್ನು ಸಂಕಷ್ಟದಿಂದ ಪಾರು ಮಾಡುವ ಕೆಲಸವನ್ನು ಮಾಡಿದೆ. ಸಂಸ್ಥೆಯ ಲಸಿಕೆಯ ಬಗ್ಗೆ ನಂಬಿಕೆ ಇರಿಸುವಂತೆಯೂ ಅವರು ಮನವಿ ಮಾಡಿದ್ದಾರೆ. ಜೊತೆಗೆ ಈ ಸಂಬಂಧ ಜನರಲ್ಲಿ ಯಾವುದೇ ರೀತಿಯ ತಪ್ಪು ಅಭಿಪ್ರಾಯಗಳನ್ನು ಹುಟ್ಟುಹಾಕದಂತೆಯೂ ಅವರು ಮನವಿ ಮಾಡಿದ್ದಾರೆ.
ಯಾವುದೇ ಲಸಿಕೆಯ ಬಳಕೆಗೆ ಕೇಂದ್ರ ಸರ್ಕಾರ ಅಧಿಕೃತವಾಗಿ ಒಪ್ಪಿಗೆ ಸೂಚಿಸಿದ ಬಳಿಕವೇ ಅವುಗಳನ್ನು ಜನರಿಗೆ ನೀಡಲಾಗುತ್ತದೆ. ಭಾರತ್ ಬಯೋಟೆಕ್ ಅಭಿವೃದ್ಧಿ ಮಾಡಿದ ಈ ಲಸಿಕೆಯು ಸುರಕ್ಷಿತವಾಗಿದೆ. ಸಚಿವ ಎಂಬ ನೆಲೆಯಲ್ಲಿ ಮಾತ್ರವಲ್ಲದೆ ಒಬ್ಬ ವೃತ್ತಿಪರ ವೈದ್ಯನಾಗಿಯೂ ಈ ಲಸಿಕೆಗೆ ಸಂಬಂಧಿಸಿದಂತೆ ಮನವಿ ಮಾಡುತ್ತಿದ್ದು, ವಿನಾಕಾರಣ ಲಸಿಕೆಯ ಬಗ್ಗೆ ಟೀಕೆ ಮಾಡುವುದರ ಜೊತೆಗೆ ಅದನ್ನು ಅಭಿವೃದ್ಧಿ ಪಡಿಸಿದ ವಿಜ್ಞಾನಿಗಳ ಪರಿಶ್ರಮಕ್ಕೆ ಅಗೌರವ ತೋರದಿರಿ ಎಂದು ಡಾ. ಸುಧಾಕರ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.