ಮೈಸೂರು: ಉನ್ನತ ಭಾರತ ಯೋಜನೆಯಡಿಯಲ್ಲಿ ಮೈಸೂರು ವಿವಿಯು ಗ್ರಾಮಗಳ ಅಭಿವೃದ್ಧಿಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ 6 ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದಂತೆ 6 ಗ್ರಾಮಗಳು ಮತ್ತು 10 ಶಾಲೆಗಳನ್ನು ದತ್ತು ಪಡೆದಿರುವುದಾಗಿ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ಮೈಸೂರು ವಿವಿ ಇತ್ತೀಚೆಗಷ್ಟೇ ಶತಮಾನೋತ್ಸವವನ್ನು ಆಚರಣೆ ಮಾಡಿಕೊಂಡಿದೆ. ಈ ಹಿನ್ನೆಯಲ್ಲಿ ಮೈಸೂರು ವಿವಿಯ ವ್ಯಾಪ್ತಿಯಲ್ಲಿನ ನೂರು ವರ್ಷ ಪೂರೈಸಿರುವ, ಹಲವು ಸಾಧನೆಗಳನ್ನು ಮಾಡಿ ಹೆಸರು ಪಡೆದಿರುವ ಶಾಲೆಗಳನ್ನು ಗುರುತಿಸಿ ದತ್ತು ಪಡೆಯಲಾಗಿದೆ ಎಂದು ತಿಳಿಸಿದ್ದಾರೆ. ದತ್ತು ಪಡೆದುಕೊಂಡಿರುವ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚು ಬಲಪಡಿಸುವ ಮತ್ತು ಮೂಲಸೌಕರ್ಯಗಳನ್ನು ಅಭಿವೃದ್ಧಿ ಮಾಡುವ ಉದ್ದೇಶದಿಂದ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಮಿತಿಯೊಂದನ್ನು ರಚನೆ ಮಾಡಲಾಗಿದ್ದು, ಆ ಸಮಿತಿಯ ಅಧ್ಯಕ್ಷರೂ ಸೇರಿದಂತೆ ಎಲ್ಲಾ ಸದಸ್ಯರು ಸಹ ದತ್ತು ತೆಗೆದುಕೊಂಡಿರುವ ಶಾಲೆಗೆ ತೆರಳಿ ಅಲ್ಲಿನ ಪರಿಸ್ಥಿತಿ, ಅಭಿವೃದ್ಧಿ ಕಾಮಗಾರಿ ಮೊದಲಾದವುಗಳನ್ನು ಗಮನಿಸಲಿರುವುದಾಗಿಯೂ ಮಾಹಿತಿ ನೀಡಿದ್ದಾರೆ. ಈ ಸಮಿತಿ ಈಗಾಗಲೇ ಶಾಲೆಗಳಲ್ಲಿರುವ ಸಮಸ್ಯೆಗಳನ್ನು, ನ್ಯೂನ್ಯತೆಗಳನ್ನು ಪಟ್ಟಿ ಮಾಡಿದೆ. ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಆರಂಭಿಕ ಹೆಜ್ಜೆ ಇರಿಸಲಾಗುವುದು ಎಂದು ತಿಳಿಸಿದ್ದಾರೆ.
ವಿವಿ ದತ್ತು ಪಡೆದಿರುವ ಹಳ್ಳಿಗಳು
ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮ ಪಂಚಾಯತ್ನಿಂದ ಸೇಬಿನ ಕೋಟೆ, ಪಿ. ಜಿ. ಪಾಳ್ಯ ಗ್ರಾ. ಪಂ ನಿಂದ ಹುಯಿಲ್ನತ್ತ, ಎಂಎಂ ಹಿಲ್ಸ್ ಗ್ರಾಮ ಪಂಚಾಯತ್ ವ್ಯಾಪ್ತಿಯಿಂದ ಒಡಕೆ ಹಳ್ಳ, ಪೊನ್ನಾಚಿ ಗ್ರಾಮ ಪಂಚಾಯತ್ನಿಂದ ರಾಮೇಗೌಡನ ಹಳ್ಳಿ, ಮಿಣ್ಯಂ ಗ್ರಾಮ ಪಂಚಾಯತ್ನಿಂದ ಸೂಳೇಕೋಟೆ, ಹುತ್ತೂರು ಗ್ರಾಮ ಪಂಚಾಯತ್ನಿಂದ ಗುಳ್ಳದ ಬಯಲು ಗ್ರಾಮಗಳನ್ನು ಅಭಿವೃದ್ಧಿಯ ಆಶಯದ ಜೊತೆಗೆ ದತ್ತು ಸ್ವೀಕಾರ ಮಾಡಿದೆ.
ವಿವಿ ದತ್ತು ಪಡೆದಿರುವ ಶಾಲೆಗಳು
ಚಾಮರಾಜನಗರದ ಡಾ. ಬಿ. ಆರ್. ಅಂಬೇಡ್ಕರ್ ಸ್ನಾಥಕೋತ್ತರ ಕೇಂದ್ರದ ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಯಳಂದೂರು ತಾಲೂಕಿನ ಕೊಮಾರನಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹನೂರು ತಾಲೂಕಿನ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ತೂಬಿನ ಕೆರೆಯ ಸರ್. ಎಂ. ವಿಶ್ವೇಶ್ವರಯ್ಯ ಸ್ನಾಥಕೋತ್ತರ ಕೇಂದ್ರದ ಪಾಂಡವಪುರ ತಾಲೂಕಿನ ಲಕ್ಷ್ಮೀಸಾಗರ ಹಿರಿಯ ಪ್ರಾಥಮಿಕ ಶಾಲೆ, ಮಂಡ್ಯ ತಾಲೂಕಿನ ಎಲೆಚಾಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಸನ ಹೇಮಗಂಗೋತ್ರಿ ಸ್ನಾಥಕೋತ್ತರ ಕೇಂದ್ರದ ಹೊಳೆನರಸೀಪುರ ತಾಲೂಕಿನ ಯಲ್ಲೇಶಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೈಸೂರು ವಿವಿಯ ಮೈಸೂರು ತಾಲೂಕಿನ ಮಾರ್ಬಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಂಗ್ರಾಲ್ ಛತ್ರದ ಸರ್ಕಾರಿ ಪ್ರೌಢಶಾಲೆ, ಕೆ. ಆರ್. ಮಿಲ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಎಚ್. ಡಿ. ಕೋಟೆಯ ಕ್ಯಾತನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮೈಸೂರ ವಿವಿ ದತ್ತು ಪಡೆದಿರುವುದಾಗಿ ವಿವಿಯ ಮೂಲಗಳು ಮಾಹಿತಿ ನೀಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.