ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ರಾಜ್ಯದ ಹೂವು ಬೆಳೆಗಾರರು ಸಹ ಸಂಕಷ್ಟ ಅನುಭವಿಸುವಂತಾಗಿತ್ತು. ಶುಭ ಸಮಾರಂಭಗಳ ಕೊರತೆಯಿಂದ ಬೆಳೆದ ಹೂವಿಗೆ ಬೇಡಿಕೆ ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಹೂವು ಬೆಳೆಯುವ ರೈತರು, ಹೂವಿಗೆ ಪರ್ಯಾಯವಾಗಿ ತರಕಾರಿ ಬೆಳೆಯುವತ್ತ ಗಮನ ನೆಟ್ಟಿದ್ದರು. ಆದರೆ ಇದೀಗ ಪರಿಸ್ಥಿತಿ ಕೊಂಚ ಮಟ್ಟಿಗೆ ಸುಧಾರಣೆಯಾಗಿರುವುದರಿಂದ ಹೂವಿಗೆ ಮತ್ತೆ ಬೇಡಿಕೆ ಹೆಚ್ಚಿದ್ದು, ಬೆಳೆಗಾರರಲ್ಲಿ ಸಂತಸ ಮನೆ ಮಾಡಿದೆ. ರೈತರು ಪಾಲಿ ಹೌಸ್ಗಳಲ್ಲಿ ಮತ್ತೆ ಹೂವಿನ ಬೆಳೆ ಬೆಳೆಯುವುದಕ್ಕೆ ಆರಂಭಿಸಿದ್ದಾರೆ.
ಈ ಸಂಬಂಧ ಮಾಹಿತಿ ನೀಡಿರುವ ಸೌತ್ ಇಂಡಿಯಾ ಪ್ಲೋರಿಕಲ್ಚರ್ ಅಸೋಸಿಯೇಷನ್ ಸದಸ್ಯ ಪ್ರಭುನಾಥ್, ಕೊರೋನಾ ಪೂರ್ವದಲ್ಲಿ ಬೆಂಗಳೂರು ನಗರದ 2,500 ಎಕರೆಗಳಷ್ಟು ಪಾಲಿಹೌಸ್ಗಳಲ್ಲಿ ರೈತರು ಹೂವಿನ ಬೆಳೆಯನ್ನು ಬೆಳೆಯುತ್ತಿದ್ದರು. ಕೊರೋನಾ ಹಿನ್ನಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಹೂಗಳಿಗೆ ಬೇಡಿಕೆ ಕಡಿಮೆಯಾಗುವ ಜೊತೆಗೆ, ಅಂತರರಾಷ್ಟ್ರೀಯ ಮಟ್ಟದ ರಫ್ತು ವ್ಯವಸ್ಥೆ ಸಹ ಸ್ಥಗಿತವಾಗಿತ್ತು. ಪರಿಣಾಮ ಹೂವುಗಳ ಬೆಳೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಕೃಷಿಕರು ಸಂಕಷ್ಟ ಅನುಭವಿಸುವಂತಾಗಿತ್ತು. ಇದೀಗ ಹೂವಿನ ಮಾರುಕಟ್ಟೆಯಲ್ಲಿ ಹೂಗಳಿಗೆ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಕೃಷಿಕರು ಪಾಲಿಹೌಸ್ಗಳಲ್ಲಿ ಹೂವುಗಳನ್ನು ಬೆಳೆಯುವತ್ತ ಮತ್ತೆ ಮನಸ್ಸು ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ಬೆಂಗಳೂರು ನಗರದಲ್ಲಿ ಬೆಳೆದ ಹೂವುಗಳನ್ನು ದೇಶದ ಇತರ ರಾಜ್ಯಗಳ ಪ್ರಮುಖ ಮಾರುಕಟ್ಟೆಗೂ ರವಾನೆ ಮಾಡಲಾಗುತ್ತಿದೆ. ನವದೆಹಲಿ, ಕಲ್ಕತ್ತಾ, ಹೈದರಾಬಾದ್, ಮುಂಬಯಿಗಳಿಗೂ ಕರ್ನಾಟಕದಿಂದ ಹೂವುಗಳನ್ನು ರಫ್ತು ಮಾಡಲಾಗುತ್ತಿದೆ. ಜೊತೆಗೆ ವಿದೇಶಗಳಿಗೂ ಹೂವುಗಳು ರಫ್ತಾಗುತ್ತಿವೆ. ಕೊರೋನಾ ಅಬ್ಬರ ಇಳಿಮುಖವಾಗುತ್ತಿದ್ದಂತೆ ದೇಶ-ವಿದೇಶಗಳಿಂದ ಹೂವಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ ಎಂದು ಪ್ರಭುನಾಥ್ ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.