ಬೆಂಗಳೂರು: ದೇಶದ 600 ಕ್ಕೂ ಅಧಿಕ ಅಗರಬತ್ತಿ ಬ್ರ್ಯಾಂಡ್ಗಳ ಫೆಸಿಲಿಟೇಟರ್ ಆಗಿರುವ ಬೆಂಗಳೂರು ಮೂಲದ ಅಖಿಲ ಭಾರತ ಅಗರಬತ್ತಿ ತಯಾರಿಕಾ ಸಂಘವು ರಾಜ್ಯದಲ್ಲಿ ಅರೋಮಾಥೆರಪಿ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯವನ್ನು ಸ್ಥಾಪಿಸಲು ಸಿದ್ಧತೆ ನಡೆಸಿದೆ.
ಈ ಸಂಬಂಧ ಸಂಘದ ಅಧ್ಯಕ್ಷ ಅರ್ಜುನ್ ರಂಗ ಅವರು ಮಾಹಿತಿ ನೀಡಿದ್ದು, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಈ ವಾಸನೆ ಯಾವ ಬಗೆಯ ಪರಿಣಾಮ ಬೀರಲಿದೆ ಎಂಬುದರ ಕುರಿತು ಅಧ್ಯಯನ ನಡೆಸಲು ಈ ಪ್ರಯೋಗಾಲಯವನ್ನು ಆರಂಭ ಮಾಡಲು ಮುಂದಾಗಿರುವುದಾಗಿ ತಿಳಿಸಿದ್ದಾರೆ. ಅಗರಬತ್ತಿಯಲ್ಲಿ ಮುಖ್ಯವಾಗಿ ಬಳಕೆ ಮಾಡುವ ಜಾಕ್ಸ್ ಪುಡಿಯನ್ನು ಸ್ಥಳೀಯವಾಗಿ ತಯಾರಿಸಲು ಸಂಬಂಧಿಸಿದಂತೆ ತೋಟಗಳನ್ನು ಸ್ಥಾಪಿಸುವ ಯೋಜನೆಯೂ ಇದೆ. ಜಾಕ್ಸ್ ಅನ್ನು ಪೊದೆ ಸಸ್ಯವಾದ ಲಿಥಿಯಾ ತೊಗಟೆಯಿಂದ ತೆಗೆಯಲಾಗುತ್ತದೆ. ಈ ಲಿಥಿಯಾವನ್ನು ಬೆಳೆಯುವುದಕ್ಕೆ ಸಂಬಂಧಿಸಿದಂತೆ ರೈತರು ಮತ್ತು ಬೇರೆ ಬೇರೆ ರಾಜ್ಯಗಳ ಅರಣ್ಯ ಇಲಾಖೆಯ ಜೊತೆಗೆ ಮಾತುಕತೆಯನ್ನು ನಡೆಸಿದ ಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಲಿಥಿಯಾ ಮರಗಳನ್ನು ಮಣ್ಣಿನ ಸವೆತವನ್ನು ತಪ್ಪಿಸುವ ಸಲುವಾಗಿಯೂ ಬೆಳೆಯಬಹುದಾಗಿದೆ. ಒಂದು ಬಾರಿ ಇದರಲ್ಲಿನ ಅಗರಬತ್ತಿಗೆ ಅಗತ್ಯವಾದ ಅಂಶವನ್ನು ಸಂಗ್ರಹಿಸಿದ ಬಳಿಕ ಆ ಮರವನ್ನು ಕಟ್ಟಿಗೆಯ ರೂಪದಲ್ಲಿಯೂ ಬಳಕೆ ಮಾಡಲು ಸಾಧ್ಯವಿದೆ ಎಂದು ಅರ್ಜುನ್ ರಂಗ ತಿಳಿಸಿದ್ದಾರೆ. ಈ ಸಂಘ, ಮೂರು ಕೃಷಿ ವಿವಿಗಳ ಜೊತೆಗೆ ಸಂಪರ್ಕ ಸಾಧಿಸಿದ್ದು, ರೈತರನ್ನು ಗುರುತಿಸುವ ಕೆಲಸವೂ ನಡೆಯುತ್ತಿದೆ. ಜೊತೆಗೆ ಕರ್ನಾಟಕ ಹೊರತುಪಡಿಸಿದಂತೆ ಮಧ್ಯಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರದ ಅರಣ್ಯ ಇಲಾಖೆಗಳ ಜೊತೆಗೂ ಮಾತುಕತೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಉತ್ತರ ಕರ್ನಾಟಕ, ಶಿವಮೊಗ್ಗ, ಭದ್ರಾ ಮೀಸಲು ಪ್ರದೇಶಗಳಲ್ಲಿ ತೋಟಗಳನ್ನು ಗಮನಿಸಲಾಗಿದ್ದು, ಅಲ್ಲಿನ ರೈತರ ಜೊತೆಗೆ ಒಪ್ಪಂದ ನಡೆಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅರ್ಜುನ್ ಮಾಹಿತಿ ನೀಡಿದ್ದಾರೆ. ಅಂದಾಜಿನ ಪ್ರಕಾರ ಈ ಉದ್ಯಮದ ಚಿಲ್ಲರೆ ಮೌಲ್ಯ 7 ಸಾವಿರ ಕೋಟಿ ಮತ್ತು ರಫ್ತುಗಳ ವ್ಯವಹಾರ 9 ಸಾವಿರ ಕೋಟಿ ರೂ. ಇರಲಿದೆ ಎಂದು ಅರ್ಜುನ್ ರಂಗ ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.