ಕೊಡಗು: ಕೊರೋನಾ ಮಹಾಮಾರಿ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ ವಿಚಾರ. ಈ ಸೋಂಕು ಆರಂಭವಾದ ಮೊದಮೊದಲು ಇದಕ್ಕೆ ಚಿಕಿತ್ಸೆ ನೀಡುತ್ತಿದ್ದ ವೈದ್ಯಕೀಯ ಸಿಬ್ಬಂದಿಗಳನ್ನು ಸಹ ಬಿಡದಂತೆ ಕಾಡಿತ್ತು. ಅನೇಕ ಜನರು ಜೀವ ಕಳೆದುಕೊಳ್ಳುವುದಕ್ಕೂ ಕೊರೋನಾ ಕಾರಣವಾಗಿತ್ತು. ಇದೀಗ ಕೊರೋನಾ ಸೋಂಕಿಗೆ ನೀಡುವ ಚಿಕಿತ್ಸೆಗೆ ಪೂರಕವಾಗುವಂತೆ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ಮೆಡಿಕಲ್ ರೋಬೋ ಕಂಡುಹಿಡಿಯುವ ಮೂಲಕ ಗಮನ ಸೆಳೆದಿದ್ದಾರೆ.
ಮೂಲತಃ ಹುಬ್ಬಳ್ಳಿಯವರಾದ ಸದ್ಯ ಕೊಡಗಿನ ಪೊನ್ನಂಪೇಟೆಯ ನಿವಾಸಿಯಾಗಿರುವ ಮಣಿಕಂಠ ಅವರೇ ಈ ರೋಬೋ ತಯಾರಿಸಿ ಮೆಚ್ಚುಗೆ ಗಳಿಸಿದವರು. ಇವರು ಮಂಡ್ಯದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಪದವಿ ಅಭ್ಯಾಸ ಮಾಡುತ್ತಿದ್ದಾರೆ. ಐಇಇಇ ಇಂಡಿಯಾ ಸಂಸ್ಥೆ ಕೊರೋನಾ ಸಂಬಂಧಿಸಿದಂತೆ ಪ್ರಾಜೆಕ್ಟ್ ತಯಾರಿಸಲು ಆಸಕ್ತಿ ಇರುವ ವಿದ್ಯಾರ್ಥಿಗಳು ತಮ್ಮ ಯೋಜನೆಗಳ ವರದಿ ಕಳುಹಿಸಿಕೊಡುವಂತೆ ಈ ಹಿಂದೆ ಸೂಚಿಸಿತ್ತು. ಇದಕ್ಕೆ ಮಣಿಕಂಠ ಅವರೂ ತಮ್ಮ ಮೆಡಿಕಲ್ ರೋಬೋ ಯೋಜನಾ ವರದಿಯನ್ನು ಕಳುಹಿಸಿದ್ದರು. ಈ ಪ್ರಾಜೆಕ್ಟ್ ಗೆ ಮಣಿಕಂಠ ಅವರಿಗೆ 12 ಸಾವಿರ ರೂ. ನೀಡಿದ್ದ ಸಂಸ್ಥೆ ರೋಬೋಟ್ ತಯಾರಿಸುವಂತೆ ಸೂಚಿಸಿತ್ತು. ಅದರಂತೆ ಸಿ ಪ್ರೋಗ್ರಾಂ ಬಳಸಿ ಮಣಿಕಂಠ ಅವರು ಈ ರೋಬೋ ಸಿದ್ಧಪಡಿಸಿದ್ದಾರೆ.
ಇನ್ನು ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಈ ರೋಬೋ ಬಳಕೆ ಮಾಡಬಹುದಾಗಿದ್ದು, ಇದನ್ನು ಮೊಬೈಲ್ ಮೂಲಕ ನಿಯಂತ್ರಣ ಮಾಡಬಹುದು. ಇದು ಕೊರೋನಾ ರೋಗಿಗೆ ಔಷಧ ವಿತರಿಸುವಲ್ಲಿ ಪೂರಕ ಕೆಲಸ ಮಾಡಲಿದೆ. ಜೊತೆಗೆ ರೋಗಿಗಳ ದೇಹದ ಉಷ್ಣತೆ, ತಾಪಮಾನ, ಹೃದಯ ಬಡಿತದ ಪರೀಕ್ಷೆ ಮಾಡುತ್ತದೆ. ವಾರ್ಡ್ಗಳಿಂದ ಹಿಂತಿರುಗುವ ಈ ರೋಬೋಟ್ಗಳು ಬ್ಲೂರೇಸ್ ಗಳ ಮೂಲಕ ತನ್ನನ್ನು ತಾನೇ ಸ್ಕ್ಯಾನ್ ಮಾಡಿ ರಕ್ಷಣೆ ಮಾಡಿಕೊಳ್ಳುತ್ತದೆ.
ಈ ರೋಬೋ ಕಂಡುಹಿಡಿದಿರುವ ಮಣಿಕಂಠ ಅವರಿಂದ ಐಜೆಡಬ್ಲ್ಯೂಎಂಟಿ ಸಂಸ್ಥೆ ಇವರಿಂದ ಸಂಶೋಧನ ಲೇಖನ ಬರೆಸಿದ್ದು, ಅದನ್ನು ಪ್ರಕಟಿಸಿದೆ. ಅದರೊಂದಿಗೆ ಪ್ರಶಸ್ತಿ ಪತ್ರ ಸಹ ನೀಡಿ ಗೌರವಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.