ಬೆಂಗಳೂರು: ಈ ಬಾರಿಯ ಚಳಿಗಾಲದ ಅಧಿವೇಶನ ಪೂರ್ಣಗೊಂಡ ಬಳಿಕ ರೈತರಿಗೆ ನೂತನ ಕೃಷಿ ಕಾಯ್ದೆಗಳ ಮಾಹಿತಿ ನೀಡಿ, ಜಾಗೃತಿ ಮೂಡಿಸಲು ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ ಕೃಷಿ ಸಚಿವ ಬಿ. ಸಿ. ಪಾಟೀಲ್ ತಿಳಿಸಿದ್ದಾರೆ.
ರಾಜ್ಯದ ಪಶುಸಂಗೋಪನ ಸಚಿವರು, ಕಂದಾಯ ಸಚಿವರ ಜೊತೆಯಲ್ಲಿ ಈ ಪ್ರವಾಸ ಕೈಗೊಳ್ಳಲಾಗುವುದು. ರೈತರ ಕಾಯ್ದೆ ತಿದ್ದುಪಡಿಯ ಅನುಕೂಲತೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ರೈತರ ಅಭಿವೃದ್ಧಿಯ ಹಿನ್ನೆಲೆಯಲ್ಲಿಯೇ ಕೇಂದ್ರ ಸರ್ಕಾರ ಈ ಕಾಯ್ದೆ ಜಾರಿ ಮಾಡಿದೆ. ಬಾರು ಕೋಲು ಹಿಡಿದು ಪ್ರತಿಭಟಿಸುವಂತಹದ್ದೇನಾಗಿಲ್ಲ. ನೂತನ ಕೃಷಿ ಕಾಯ್ದೆ ಯಿಂದ ರೈತರಿಗೆ ಆಯ್ಕೆ, ಅವಕಾಶ, ಆದಾಯ ಹೆಚ್ಚಾಗುವುದಲ್ಲದೇ ಯಾವುದೇ ರೀತಿಯ ತೊಂದರೆ ಉಂಟಾಗಲಾರದು ಎಂದು ಅವರು ತಿಳಿಸಿದ್ದಾರೆ.
ಈ ಹಿಂದಿನ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ನ ಪ್ರಣಾಳಿಕೆಯನ್ನು ಗಮನಿಸಿದರೆ ಅದರಲ್ಲಿಯೂ ಈ ಕಾಯ್ದೆಗಳ ಅನುಷ್ಠಾನದ ಭರವಸೆ ನೀಡಿರುವುದನ್ನು ಕಾಣಬಹುದು. ಈ ಹಿಂದೆ ತಾವೇ ನೀಡಿದ್ದ ಭರವಸೆಯನ್ನು ಈಗ ಅವರೇ ವಿರೋಧ ಮಾಡುತ್ತಿದ್ದಾರೆ ಎಂದು ಬಿ ಸಇ ಪಾಟೀಲ್ ನುಡಿದರು. ಈ ಸಂದರ್ಭದಲ್ಲಿ ಈ ಹಿಂದೆ 2013 ರಲ್ಲಿ ಸಿದ್ದರಾಮಯ್ಯ ಅವರು ಇದೇ ಕಾಯ್ದೆಗೆ ಸಂಬಂಧಿಸಿದಂತೆ ಬರೆದ ಪತ್ರವನ್ನು ಸಹ ಉಲ್ಲೇಖ ಮಾಡಿದರು. ಹಾಗಾದರೆ ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರೆ ಈ ಕಾಯ್ದೆಯನ್ನು ಅನುಷ್ಠಾನ ಮಾಡುತ್ತಿರಲಿಲ್ಲವೇ. ಹಾಗಾದರೆ ಅವರು ನೀಡುವ ಭರವಸೆಗಳು ಪೊಳ್ಳೆಂದಾಯಿತಲ್ಲವೇ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇಶದ ನಿಜವಾದ ರೈತರು ಬುದ್ಧಿವಂತರಿದ್ದಾರೆ. ಅವರಿಗೆ ಸರಿ ತಪ್ಪುಗಳನ್ನು ಆಲೋಚಿಸುವ ಶಕ್ತಿ ಇದೆ. ರಾಜ್ಯದಲ್ಲಿ ತಾವು ಅನೇಕ ರೈತರನ್ನು ಭೇಟಿ ಮಾಡಿದ್ದು, ಈ ಸಂದರ್ಭದಲ್ಲಿ ಅವರ್ಯಾರೂ ಈ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿದ್ದು ಕಂಡುಬಂದಿಲ್ಲ. ಕಾಂಗ್ರೆಸ್ ಹೊಲಸು ರಾಜಕೀಯದಲ್ಲಿ ತೊಡಗಿದೆ ಎಂದು ಅವರು ತಿಳಿಸಿದರು. ಇಂತಹ ದ್ವಿಮುಖ ನೀತಿ ಬಿಡಬೇಕು ಎಂದು ಕಾಂಗ್ರೆಸ್ಗೆ ಅವರು ಸೂಚಿಸಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ಮಾತನಾಡಿದ ಬಿ. ಸಿ. ಪಾಟೀಲ್, ಅವರು ಹೊಲಕ್ಕೆ ಇಳಿದಿಲ್ಲ. ಕೆಸರು ತುಳಿದಿಲ್ಲ. ಅವರಿಗೆ ಕೃಷಿಗೆ ಸಂಬಂಧಿಸಿದಂತೆ ಏನೂ ತಿಳಿದಿಲ್ಲ. ಹಾಲು ಎಲ್ಲಿಂದ ಬರುತ್ತದೆ, ಅಕ್ಕಿ ಬೆಳೆಯುವುದು ಹೇಗೆ ಎಂದರೂ ಅವರಿಗೆ ಮಾಹಿತಿ ಇರಲಾರದು. ಅವರೆದುರಲ್ಲಿ ಬೆಳೆಗಳನ್ನಿಟ್ಟು ಅವುಗಳನ್ನು ಗುರುತಿಸಲು ಹೇಳಿದರೆ ಅದಕ್ಕೂ ಅವರು ಶಕ್ತರಿಲ್ಲ. ರೈತರ ಕಷ್ಟ ತಿಳಿಯದವರು ಅವರ ಅಭಿವೃದ್ಧಿಗೆ ಕೇಂದ್ರ ಮೋದಿ ಸರ್ಕಾರ ತಂದಿರುವ ಕಾಯ್ದೆಗಳ ಬಗ್ಗೆ ತಪ್ಪು ಮಾಹಿತಿ ಬಿತ್ತುತ್ತಿವೆ ಎಂದು ಅವರು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.