ಬೆಂಗಳೂರು: ರಾಜ್ಯದ ಗೌರವಾನ್ವಿತ ವ್ಯಕ್ತಿ ಸಾಲು ಮರದ ತಿಮ್ಮಕ್ಕ ಅವರ ಉಪಸ್ಥಿತಿಯಲ್ಲಿ ಮರಗಳ ಎಣಿಕೆ ಕಾರ್ಯ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ರಸ್ತೆ ಅಗಲೀಕರಣದ ಸಂದರ್ಭದಲ್ಲಿ ತಿಮ್ಮಕ್ಕ ಅವರು ನೆಟ್ಟ ಮರಗಳನ್ನು ಲೋಕೋಪಯೋಗಿ ಇಲಾಖೆ ಉರುಳಿಸಿದೆ ಎಂದು ಅವರು ಈ ಹಿಂದೆ ಹೇಳಿದ್ದರು. ಜೊತೆಗೆ ಮಾಧ್ಯಮಗಳಲ್ಲಿಯೂ ಈ ಸಂಬಂಧ ವರದಿಗಳು ಪ್ರಕಟವಾಗಿತ್ತು. ಕುದೂರು ಹುಲಿಕಲ್ ರಸ್ತೆ ಬದಿಗಳಲ್ಲಿ ಸಾಲು ಮರದ ತಿಮ್ಮಕ್ಕ ಅವರು ಬೆಳೆಸಿದ್ದ ಮರಗಳ ಬುಡವನ್ನು ಅಗೆಯಲಾಗಿದೆ ಎಂದು ವರದಿಗಳು ಪ್ರಕಟವಾಗಿದ್ದವು.
ರಸ್ತೆ ಕಾಮಗಾರಿ ವೇಳೆ ಮರಗಳಿಗೆ ಯಾವುದೇ ರೀತಿಯ ಆಪಾಯವಾಗದಂತೆ ಎಚ್ಚರ ವಹಿಸಬೇಕು ಎಂದು ಸರ್ಕಾರ ಸಹ ಸೂಚಿಸಿತ್ತು. ಆದರೆ ಕಾಮಗಾರಿ ಸಂದರ್ಭದಲ್ಲಿ ಮರಗಳಿಗೆ ಹಾನಿಯಾಗಿತ್ತು. ಇದರ ವಿರುದ್ಧ ಮುಖ್ಯಮಂತ್ರಿ, ಸರ್ಕಾರಕ್ಕೆ ದೂರು ನೀಡುವುದಾಗಿಯೂ ತಿಮ್ಮಕ್ಕ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಕಾಮಗಾರಿ ಸ್ಥಗಿತಗೊಳಿಸಿ ತಿಮ್ಮಕ್ಕ ಅವರ ಉಪಸ್ಥಿತಿಯಲ್ಲಿಯೇ ಮರಗಳ ಎಣಿಕೆ ಕಾರ್ಯ ನಡೆಸಲು ತಹಶೀಲ್ದಾರ್ ಬಿ. ಜಿ. ಶ್ರೀನಿವಾಸ್ ಪ್ರಸಾದ್ ಮುಂದಾಗಿದ್ದಾರೆ. ಜೊತೆಗೆ ಬುಡ ಅಗೆದ ಮರಗಳ ಬುಡಕ್ಕೆ ಮತ್ತೆ ಮಣ್ಣು ಹಾಕಿರುವುದಾಗಿಯೂ ಅಧಿಕಾರಿಗಳು ತಿಳಿಸಿದ್ದಾರೆ.
1950-70 ರ ನಡುವೆ ತಿಮ್ಮಕ್ಕ ಕುದೂರು, ಹುಲಿಕಲ್ಗಳಲ್ಲಿ ಸುಮಾರು 385 ಮರಗಳನ್ನು ಬೆಳೆಸಿದ್ದಾರೆ. ಇವುಗಳನ್ನು ಪರಂಪರೆಯ ಮರಗಳೆಂದು ಘೋಷಿಸಲು ಕರ್ನಾಟಕ ಅರಣ್ಯ ಇಲಾಖೆ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಮುಂದಾಗಿರುವ ಬೆನ್ನಲ್ಲೇ, ಲೋಕೋಪಯೋಗಿ ಇಲಾಖೆ ಮರಗಳನ್ನು ಕಡಿದಿರುವ ಆರೋಪಕ್ಕೆ ತುತ್ತಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.