ಶಿವಮೊಗ್ಗ: ಎಮ್ಮೆಗಳ ಚಿತ್ರಗಳನ್ನು ಹೊಂದಿರುವ ತುರುಗೋಳ್ ವೀರಗಲ್ಲು ಶಿವಮೊಗ್ಗ ತಾಲೂಕಿನ ಗುಡ್ಡದ ಅರಕೆರೆ ಗ್ರಾಮದ ಯಶೋಧಮ್ಮ ಎಂಬವರ ಜಮೀನಿನಲ್ಲಿ ಪತ್ತೆಯಾಗಿದೆ.
ಈ ವೀರಗಲ್ಲನ್ನು ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ಆರ್. ಶೇಜೇಶ್ವರ, ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಿ ಪೂರ್ಣಿಮಾ ಅವರು ಪತ್ತೆ ಹಚ್ಚಿದ್ದಾರೆ. ಇವರ ಕ್ಷೇತ್ರ ಕಾರ್ಯದ ಸಂದರ್ಭದಲ್ಲಿ 10 ನೇ ಶತಮಾನದ ರಾಷ್ಟ್ರಕೂಟರ ಆಳ್ವಿಕೆಯ ಕನ್ನರ ದೇವನ ಕಾಲದ ತುರುಗೋಳ್ ವೀರಗಲ್ಲು ಪತ್ತೆಯಾಗಿದೆ.
ತುರುಗೋಳ್ ವೀರಗಲ್ಲುಗಳ ಶಾಸನವು ಗೋವುಗಳಿಗೆ ಸಂಬಂಧಿಸಿದಂತವುಗಳಾಗಿವೆ. ರಾಜ್ಯದಲ್ಲಿ ಈವರೆಗೆ ಎಮ್ಮೆಯ ಚಿತ್ರಗಳಿರುವ 3 ವೀರಗಲ್ಲು ಶಾಸನಗಳು ದೊರೆತಿವೆ. ಶಿವಮೊಗ್ಗದಲ್ಲಿ ಪತ್ತೆಯಾದ ಈ ಶಾಸನ 262 ಸೆಂ.ಮೀ. ಉದ್ದ, 95 ಸೆಂ.ಮೀ. ಅಗಲವಾಗಿದೆ ಎಂದು ಈ ಶಾಸನವನ್ನು ಪತ್ತೆ ಹಚ್ಚಿದ ತಂಡ ಮಾಹಿತಿ ನೀಡಿದೆ. ಈ ಶಾಸನದ ಕೆಳ ಭಾಗದಲ್ಲಿ ಅರಿಗೆರೆಯ ನಾಡಗಾವುಂಡನ ತಮ್ಮ ಬೆಟ್ಟಗನ ಹಿಂದೆ ಐದು ಎಮ್ಮೆಗಳ ಶಿಲ್ಪಗಳಿವೆ. ಈತ ಬಿಲ್ಲು ಬಾಣಗಳನ್ನು ಹಿಡಿದು ಆರು ಮಂದಿ ಶತ್ರುಗಳ ಜೊತೆಗೆ ಹೋರಾಟ ನಡೆಸುತ್ತಿರುವುದು ಕಂಡು ಬರುತ್ತಿದೆ. ಎರಡನೇಯ ಭಾಗದಲ್ಲಿ ವೀರ ಬೆಟ್ಟಗನನ್ನು ಮರಣಾನಂತರ ಅಪ್ಸರೆಯರು ಸಂಗೀತ ವಾದ್ಯಗಳ ಜೊತೆಗೆ ಸ್ವರ್ಗಕ್ಕೆ ಕರೆದುಕೊಂಡು ಹೋಗುವುದನ್ನು ಚಿತ್ರಿಸಲಾಗಿದೆ.
ಆಗಿನ ಕಾಲಘಟ್ಟದಲ್ಲಿಯೂ ಗೋವುಗಳು ರಾಜ್ಯದ ಸಂಪತ್ತಿನ ಪ್ರತೀಕವಾಗಿದ್ದವು. ಅವುಗಳನ್ನು ಕಳ್ಳತನ ಮಾಡುವ ಕೆಲಸಕ್ಕೆ ಶತ್ರುಗಳು ಸದಾ ಪ್ರಯತ್ನ ನಡೆಸುತ್ತಿದ್ದರು. ಇಂತಹ ಒಂದು ಸಂದರ್ಭದಲ್ಲಿ ಬೆಟ್ಟುಗ ಶತ್ರುಗಳ ವಿರುದ್ಧ ಹೋರಾಡಿ, ಮೃತಪಟ್ಟಿದ್ದು, ಅವನ ಸಾಧನೆಗಾಗಿ ಗೋವಿಂದ ಗಾವುಂಡನು ಈ ವೀರಗಲ್ಲನ್ನು ನಿಲ್ಲಿಸಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.