ವಾರಣಾಸಿ: ನೂತನ ಕೃಷಿ ಸುಧಾರಣೆಗಳು ರೈತಾಪಿ ವರ್ಗಕ್ಕೆ ಹೊಸ ಆಯ್ಕೆಗಳನ್ನು ಮತ್ತು ಕಾನೂನಾತ್ಮಕ ರಕ್ಷಣೆಯನ್ನು ಒದಗಿಸಲು ಪೂರಕವಾಗಿದೆ. ಅದರೊಂದಿಗೆ ಹಳೆಯ ವ್ಯವಸ್ಥೆಯನ್ನು ರೈತರು ಬಯಸಿದರೆ ಅದನ್ನು ಮುಂದುವರೆಸಿಕೊಂಡು ಹೋಗುವ ಅವಕಾಶವೂ ಇರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
ಅವರು ತಮ್ಮ ಸಂಸದೀಯ ಕ್ಷೇತ್ರ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದ ಸಭೆಯಲ್ಲಿ ನೂತನ ಕೃಷಿ ಕಾಯ್ದೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿ ಮಾತನಾಡಿದರು.
ಕೇಂದ್ರ ಸರ್ಕಾರ ನೂತನ ಕೃಷಿ ಕಾಯ್ದೆಗಳನ್ನು ರೈತರ ಅಭಿವೃದ್ಧಿಯ ಆಶಯವನ್ನಿಟ್ಟುಕೊಂಡು ಮತ್ತು ದೇಶದ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಜಾರಿಗೆ ತಂದಿದೆ. ಮಂಡಿ ವ್ಯವಸ್ಥೆ ಬಲಪಡಿಸುವ ಜೊತೆಗೆ ಕೃಷಿಕರಿಗೆ ನೂತನ ವ್ಯವಸ್ಥೆಗಳನ್ನು, ಹೊಸ ಮಾರುಕಟ್ಟೆ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಈ ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ. ಇದು ದೇಶ ಮತ್ತು ದೇಶದ ರೈತರು ಆತ್ಮನಿರ್ಭರವಾಗುವ ನಿಟ್ಟಿನಲ್ಲಿಯೂ ಪೂರಕವಾಗಿರಲಿದೆ ಎಂದು ಮೋದಿ ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗೆ ಸಂಬಂಧಿಸಿದಂತೆ ಅರಿವು ಮೂಡಿಸುವ ಪ್ರಯತ್ನ ನಡೆಸಿದ್ದಾರೆ.
ಕೃಷಿ ಸುಧಾರಣೆಗಳಿಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ರೈತರಿಗೆ ತಪ್ಪು ಮಾಹಿತಿ ನೀಡುವ ಮೂಲಕ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿವೆ.ಬಿಜೆಪಿ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿಯುವ ಮೊದಲು ಆಳ್ವಿಕೆ ಮಾಡಿದ್ದ ಸರ್ಕಾರದ ದಶಕಗಳ ಮೋಸ ಇಂದು ಜನರನ್ನು ಭಯಭೀತರನ್ನಾಗಿ ಮಾಡಿದೆ. ಎನ್ಡಿಎ ಸರ್ಕಾರ ಶುದ್ಧ ಉದ್ದೇಶದೊಂದಿಗೆ ಅಭಿವೃದ್ಧಿಯ ಚಿಂತನೆಯ ಜೊತೆಗೆ ಆಡಳಿತ ನಡೆಸುತ್ತಿದೆ ಎಂದು ಮೋದಿ ಹೇಳಿದ್ದಾರೆ. ಸರ್ಕಾರ ರೂಪಿಸಿದ ಅನೇಕ ಯೋಜನೆಗಳು ಇನ್ನೂ ಜನರನ್ನು ತಲುಪಿಲ್ಲ. ಇದು ವಿಪಕ್ಷಗಳ ತಪ್ಪು ಮಾಹಿತಿಯ ಕಾರಣದಿಂದ ಎಂದು ಅವರು ತಿಳಿಸಿದ್ದಾರೆ.
ಅದರಂತೆ ಇಂದು ನೂತನ ಕೃಷಿ ಕಾಯ್ದೆಯನ್ನು ವಿರೋಧಿಸುತ್ತಿರುವ ರೈತರೆಲ್ಲರೂ ಮುಂದಿನ ದಿನಗಳಲ್ಲಿ ಈ ಹೊಸ ಕಾಯ್ದೆಗಳ ಅನುಕೂಲವನ್ನು ಪಡೆಯಲಿದ್ದಾರೆ. ಜೊತೆಗೆ ಎಲ್ಲಾ ರೈತರ ಆದಾಯ ಹೆಚ್ಚಳಕ್ಕೆ ಈ ನೂತನ ನೀತಿ ಕಾರಣವಾಗಲಿದೆ. ಎನ್ಡಿಎ ಸರ್ಕಾರ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದಲೇ ಈ ಎಲ್ಲಾ ನೀತಿಗಳನ್ನು ಜಾರಿಗೊಳಿಸಿದ್ದು, ರೈತರು ಗೊಂದಲ ಪಡುವ ಅವಶ್ಯಕತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.