ನಾಗ್ಪುರ : 1993 ರ ಮುಂಬೈ ಸರಣಿ ಸ್ಫೋಟದ ರೂವಾರಿ ಯಾಕುಬ್ ಅಬ್ದುಲ್ ರಜಾಕ್ ಮೆನನ್ಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಲಾಯಿತು. ನಾಗ್ಪುರ ಕೇಂದ್ರ ಕಾರಾಗೃಹದಲ್ಲಿ ಮೆನನ್ಗೆ ಇಂದು ಬೆಳಿಗ್ಗೆ 6.43 ಕ್ಕೆ ಗಲ್ಲಿಗೇರಿಸಲಾಯಿತು.
ಬುಧವಾರ ಯಾಕುಬ್ ಅಂತಿಮವಾಗಿ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ತ್ರಿಸದಸ್ಯ ಪೀಠ ವಜಾಗೊಳಿಸಿತ್ತು. ಹಾಗೂ ರಾಷ್ಟ್ರಪತಿಗಳಿಗೆ ಸಲ್ಲಿಸಿದ್ದ ಅರ್ಜಿಯನ್ನೂ ಅವರು ತಿರಸ್ಕಾರಗೊಳಿಸಿದ್ದರು. ಆದರೂ ಯಾಕುಬ್ ಪರ ವಕೀಲರು ಕ್ಷಮಾದಾನ ನೀಡಬೇಕೆಂದು ತೀವ್ರ ಒತ್ತಾಯದ ಮೇರೆಗೆ ಮತ್ತೊಮ್ಮೆ ನ್ಯಾಯಾಲಯದ ಹಾಲ್ ನಂ. 4 ರಲ್ಲಿ ತಡರಾತ್ರಿ ಸುಮಾರು 11 ರಿಂದ ಪ್ರಾರಂಭವಾದ ಚರ್ಚೆ 2.30 ಕ್ಕೆ ಅಂತ್ಯಗೊಂಡು ಸುಪ್ರೀಂ ಕೋರ್ಟ್ ನ ನ್ಯಾಯಾಧೀಶ ದೀಪಕ್ ಮಿಶ್ರಾ ಅವರನನ್ನೊಳಗೊಂಡ ತ್ರಿಸದಸ್ಯಪೀಠ ಮರಣದಂಡನೆಯನ್ನು ಖಾಯಂಗೊಳಿಸಿತು.
1993 ರ ಮಾರ್ಚ್ 12 ರಂದು ಮುಂಬೈಯಲ್ಲಿ ಸುಮಾರು 13 ಕಡೆಗಳಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಲಾಗಿತ್ತು. ಭಾರತದಲ್ಲಿ ಪ್ರಥಮವಾಗಿ ಅಂದು ಆರ್ಡಿಎಕ್ಸ್ ಬಾಂಬ್ ಬಳಸಿ ನಡೆಸಿದ್ದ ಕೃತ್ಯದಲ್ಲಿ 257 ಅಮಾಯಕ ಜನರು ಸಾವನ್ನಪ್ಪಿದ್ದು, ಸುಮಾರು 700 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದವು. 28 ಕೋಟಿಗೂ ಅಧಿಕ ಆಸ್ತಿ ಪಾಸ್ತಿ ನಷ್ಟವಾಗಿತ್ತು.
1993 ರ ನವೆಂಬರ್ 4 ರಂದು 10 ಸಾವಿರ ಪುಟಗಳ ಪ್ರಾಥಮಿಕ ವರದಿಯನ್ನು ನ್ಯಾಯಾಲಯ ಸಲ್ಲಿಸಲಾಗಿತ್ತು. ಇದರಲ್ಲಿ ಸುಮಾರು 189 ಮಂದಿಯನ್ನು ಆರೋಪಿಯನ್ನಾಗಿ ನಮೂದಿಸಲಾಗಿತ್ತು. ನಂತರ 100 ಜನರನ್ನು ಅಪರಾಧಿ ಎಂದು ಘೋಷಣೆ ಮಾಡಲಾಗಿ, ಇದರಲ್ಲಿ 12 ಜನರಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಲಾಗಿತ್ತು. ಈಗ ಉಳಿದವರ ಶಿಕ್ಷೆಯನ್ನು ಜೀವಾವಧಿಯಾಗಿ ಪರಿವರ್ತಿಸಲಾಯಿತು. 1994ರ ಆಗಸ್ಟ್ 5 ರಂದು ಯಾಕುಬ್ ಸಿಬಿಐ ಕೈಗೆ ಸಿಕ್ಕಿ ಬಿದ್ದಿದ್ದ. ಸ್ಫೋಟ ಪ್ರಕರಣವನ್ನು ಸುದೀರ್ಘ 20 ವರ್ಷಗಳ ಕಾಲ ತನಿಖೆ ನಡೆಸಿದ್ದ ಸುಪ್ರೀಂ ಕೋರ್ಟ್ ಯಾಕುಬ್ಗೆ 2013 ರಲ್ಲಿ ಮರಣದಂಡನೆಯನ್ನು ವಿಧಿಸಿತ್ತು. 22 ವರ್ಷಗಳ ನಂತರ ಯಾಕುಬ್ನನ್ನು ಇಂದು ಗಲ್ಲಿಗೇರಿಸಲಾಯಿತು.
ಯಾಕುಬ್ನನ್ನು ಗಲ್ಲಿಗೇರಿಸಿ ಭಾರತ ಉಗ್ರರಿಗೆ ಖಡಕ್ ಸಂದೇಶ ನೀಡಿದೆ ಎಂದು ಒಂದು ಕಡೆಯಾದರೆ, ಎಲ್ಲೋ ನ್ಯಾಯಾಂಗ ಪ್ರಕ್ರಿಯೆಗಳ ಮೂಲಕ ಭಾರತ ತಪ್ಪಿತಸ್ಥರಿಗೆ ಒಂದು ರೀತಿಯ ಮೃದು ಧೋರಣೆಯನ್ನು ತೋರಿಸುವ ಮೂಲಕ ಅವರಲ್ಲಿ ಭಯದ ಅಥವಾ ತಪ್ಪಿತಸ್ಥ ಮನೋಭಾವವನ್ನು ಮೂಡಿಸಲು ವಿಫಲವಾದಂತಾಗಿದೆ. ಎಲ್ಲಾ ಸಾಕ್ಷಿಗಳೂ ಇದ್ದು, ಎಷ್ಟೋ ಅಮಾಯಕರನ್ನು ಬಲಿತೆಗೆದುಕೊಂಡವರನ್ನು ಆರೋಪಿ ಎಂದು ಪರಿಗಣಿಸಿದರೂ ಮತ್ತೆ ಮತ್ತೆ ವಿಚಾರಣೆ, ನ್ಯಾಯಾಂಗ ಪ್ರಕ್ರಿಯೆ ಹೀಗೆ ವರ್ಷಗಳೇ ಉರುಳಿ, ಅವರ ಅಪರಾಧಗಳನ್ನು ಮಾಮೂಲು ಎಂಬಂತೆ ಮಾಡುತ್ತಿರುವುದು ವಿಷಾದಕರ. ಇಂತಹ ಸಂದರ್ಭಗಳಲ್ಲಿ ಅಪರಾಧಿಗಳನ್ನು ತ್ವರಿತಗತಿಯಲ್ಲಿ ಶಿಕ್ಷಿಸುವಂತೆ ಪ್ರಬಲ ಕಾನೂನು ತರುವುದು ಅವಶ್ಯಕ ಮತ್ತು ಮುಂದಿನ ದಿನಗಳಲ್ಲಿ ಅಪರಾಧ ತಡೆಗೆ ಸಹಕಾರಿಯಾಗಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.