ನವದೆಹಲಿ: ಮಣಿಪುರದ ಮಹಿಳೆಯರಿಗೆ ರಕ್ಷಾ ಬಂಧನದ ಉಡುಗೊರೆಯಾಗಿ ಜಲ ಪೂರೈಕೆ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಮಣಿಪುರದ ಜಲ ಪೂರೈಕೆ ಯೋಜನೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ ಮೋದಿ, ಈ ದಿನ ಮಣಿಪುರದ ಜನತೆಗೆ ಮರೆಯಲಾಗದ ದಿನ. ಸುಮಾರು 3 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಾಜ್ಯದಲ್ಲಿ ಜಲ ಪೂರೈಕೆ ಯೋಜನೆ ರೂಪುಗೊಳ್ಳುತ್ತಿದ್ದು ಇದು ಮುಂದಿನ ದಿನಗಳಲ್ಲಿ ಮಣಿಪುರದ ಜನರಿಗೆ ಸಹಕಾರಿಯಾಗಲಿರುವುದಾಗಿಯೂ ಅವರು ತಿಳಿಸಿದ್ದಾರೆ. ಜಲಧಾರಾ ಯೋಜನೆಯ ಮೂಲಕ ಮುಂದಿನ 22 ವರ್ಷಗಳಿಗೆ ಸಂಬಂಧಿಸಿದಂತೆ 1700 ಗ್ರಾಮಗಳಿಗೆ ನೀರಿನ ಅಭಾವವಾಗದಂತೆ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದ್ದು, ಈ ಯೋಜನೆಯಿಂದ ಹಲವಾರು ಜನರಿಗೆ ಉದ್ಯೋಗಾವಕಾಶ ದೊರೆಯುತ್ತದೆ ಎಂದೂ ಪ್ರಧಾನಿ ತಿಳಿಸಿದ್ದಾರೆ.
ಬಳಿಕ ಮಾತನಾಡಿದ ಅವರು ಕೇಂದ್ರ ಸರ್ಕಾರದ ಜಲಜೀವನ ಯೋಜನೆಯಡಿ ದೇಶದ ಅದೆಷ್ಟೋ ಕುಟುಂಬಗಳ ನೀರಿನ ಬವಣೆ ನೀಗಿದೆ. ದೇಶದಲ್ಲಿ ನೀರಿನ ಸಮಸ್ಯೆ ಎದುರಿಸುತ್ತಿರುವ ಕುಟುಂಬಗಳಿಗೆ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿನಿತ್ಯ 1 ಲಕ್ಷದಷ್ಟು ಜನರು ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳುವಂತಾಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ ನೀರಿಗಾಗಿ ಅದೆಷ್ಟೋ ಮೈಲುಗಳು ನಡೆಯಬೇಕಾಗಿದ್ದ ತಾಯಂದಿರಿಗೂ ನೀರಿನ ಚಿಂತೆಯನ್ನು ದೂರ ಮಾಡುವಲ್ಲಿ ಕೇಂದ್ರ ಸರ್ಕಾರದ ಜಲಜೀವನ ಯೋಜನೆ ಸಹಾಯ ಮಾಡಿರುವುದಾಗಿಯೂ ತಿಳಿಸಿದ್ದಾರೆ.
ದೇಶದ ಪ್ರತಿ ಗ್ರಾಮದ ನೀರಿನ ಸಮಸ್ಯೆಯನ್ನು ಪರಿಹರಿಸುವ ಸದುದ್ದೇಶವನ್ನಿಟ್ಟುಕೊಂಡೇ ಜಲಜೀವನ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ದೇಶದ ಯಾವ ಪ್ರದೇಶದಲ್ಲಿ ನೀರಿನ ಅಭಾವವಿದೆ ಎಂಬುದನ್ನು ತಿಳಿದುಕೊಂಡು ಅಲ್ಲಿನ ಜನಪ್ರತಿನಿಧಿಗಳು, ನೀರಿನ ವ್ಯವಸ್ಥೆ ಮಾಡಲು ಈ ಯೋಜನೆಯ ಮೂಲಕ ಅಗತ್ಯ ಕ್ರಮ ಕೈಗೊಳ್ಳುತ್ತಾರೆ. ಆ ಮೂಲಕ ಎಲ್ಲಿಗೆ ಎಷ್ಟರ ಮಟ್ಟಿಗೆ ನೀರಿನ ಅವಶ್ಯಕತೆ ಇದೆಯೋ ಅಲ್ಲಿಗೆ ಪೈಪ್ ಲೈನ್ ಮೂಲಕವೇ ನೀರಿನ ವ್ಯವಸ್ಥೆ ಮಾಡಿಕೊಡುವ ಕೆಲಸವನ್ನು ಮಾಡಲಾಗುತ್ತಿದೆ ಎಂದೂ ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.