ಬೆಂಗಳೂರು: ಕೊರೋನಾ ಚಿಕಿತ್ಸೆಯ ವಿಚಾರದಲ್ಲಿ ಸರ್ಕಾರ ಅನುಭವಿಸುತ್ತಿರುವ ಸಂಕಷ್ಟಕ್ಕೂ ಹೆಚ್ಚಿನ ಪ್ರಮಾಣದ ಸಮಸ್ಯೆ ಅನುಭವಿಸುವಂತಾಗಿರುವುದು ಕೊರೋನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನಡೆಸುವ ವಿಷಯದಲ್ಲಿ. ಈ ಸಮಸ್ಯೆಗೆ ಮುಕ್ತಿ ಹಾಡಲು ಮುಂದಾಗಿರುವ ಬಿಬಿಎಂಪಿ ಕೊರೋನಾದಿಂದ ಮೃತರಾದವರ ಶವ ಸಂಸ್ಕಾರಕ್ಕೆಂದೇ 4 ಪ್ರತ್ಯೇಕ ಚಿತಾಗಾರವನ್ನು ಮೀಸಲಿಡುವುದಾಗಿ ತಿಳಿಸಿದೆ.
ಈ ಬಗ್ಗೆ ಮಾತನಾಡಿರುವ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್, ಪ್ರಸ್ತುತ ಕೊರೋನಾ ದಿಂದ ಮೃತರಾದವರು ಮತ್ತು ಇತರ ಬೇರೆ ಬೇರೆ ಕಾರಣಗಳಿಂದ ಮೃತಪಟ್ಟವರ ಶವ ಸಂಸ್ಕಾರವನ್ನು ಒಂದೇ ಚಿತಾಗಾರದಲ್ಲಿ ನಡೆಸಲಾಗುತ್ತಿದೆ. ಇದು ದೊಡ್ಡ ಸಮಸ್ಯೆಯಾಗಿದ್ದು, ಸೋಂಕು ಹರಡುವ ಭೀತಿಯನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಬಿಬಿಎಂಪಿ ಚಿಂತನೆ ನಡೆಸಿದ್ದು, ಕೋವಿಡ್ ಮತ್ತು ಕೋವಿಡೇತರ ಶವಗಳ ಸಂಸ್ಕಾರವನ್ನು ಬೇರೆ ಬೇರೆ ಚಿತಾಗಾರದಲ್ಲಿ ನಡೆಸಲು ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದ್ದಾರೆ.
ಕೊರೋನಾ ರೋಗದಿಂದ ಮೃತರಾದವರ ಸಂಸ್ಕಾರಕ್ಕೆ ಪ್ರತ್ಯೇಕ ಚಿತಾಗಾರವನ್ನು ನಿಗದಿ ಮಾಡಲಾಗಿದೆ ಎಂದೂ ಆಯುಕ್ತರು ಮಾಹಿತಿ ನೀಡಿದ್ದಾರೆ. ನಗರದಲ್ಲಿ 12 ಚಿತಾಗಾರಗಳಿದ್ದು, ಪ್ರತಿ ಚಿತಾಗಾರದಲ್ಲಿ ದಿನಕ್ಕೆ 16 ಶವ ಸಂಸ್ಕಾರ ಮಾಡಬಹುದಾಗಿದೆ. ಒಂದು ಚಿತಾಗಾರದಲ್ಲಿ ಶವ ಸುಡುವ 2 ಯಂತ್ರಗಳಿದ್ದು ದಿನದಲ್ಲಿ ಎಲ್ಲಾ ಚಿತಾಗಾರಗಳಿಗೂ ಸಂಬಂಧಿಸಿದಂತೆ 162 ಶವಗಳನ್ನು ಸುಡುವ ಅವಕಾಶವಿದೆ ಎಂದೂ ಅವರು ತಿಳಿಸಿದ್ದಾರೆ. ಚಿತಾಗಾರದ ಕೊರತೆಯೂ ಸೃಷ್ಟಿಯಾಗಿಲ್ಲ ಆದರೆ ಇತರರಿಗೆ ಸೋಂಕು ಹರಡಬಾರದೆಂಬ ದೃಷ್ಟಿಯಿಂದ ಶವ ಸಂಸ್ಕಾರಗಳನ್ನು ಪ್ರತ್ಯೇಕವಾಗಿ ನಡೆಸಲು ಚಿಂತನೆ ನಡೆಸಲಾಗಿರುವುದಾಗಿಯೂ ಅವರು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.