ನವದೆಹಲಿ: ಅಫ್ಘಾನಿಸ್ಥಾನದಲ್ಲಿ ಮೂಲಭೂತವಾದಿಗಳ ಹಿಂಸಾಚಾರಕ್ಕೆ ಬಲಿಯಾಗಿರುವ ಅಲ್ಲಿನ ಅಲ್ಪಸಂಖ್ಯಾತರಾದ ಹಿಂದೂಗಳು ಮತ್ತು ಸಿಖ್ಖರಿಗೆ ಭಾರತ ಆಶ್ರಯ ನೀಡುವುದಕ್ಕೆ ಮುಂದಾಗಿದೆ. ಈ ಸಂಬಂಧ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 700 ಮಂದಿ ಹಿಂದೂ, ಸಿಖ್ಖರಿಗೆ ಭಾರತದಲ್ಲಿ ಉಳಿದುಕೊಳ್ಳಲು ಅವಕಾಶ ನೀಡಿದೆ ಎಂದು ತಿಳಿಸಿದೆ.
ಪಾಕಾಸ್ಥಾನ, ಬಾಂಗ್ಲಾದೇಶ, ಅಫ್ಘಾನಿಸ್ಥಾನಗಳಲ್ಲಿ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವುದಕ್ಕಾಗಿ ಸಿಎಎ ಜಾರಿಗೊಳಿಸಿದ ಬೆನ್ನಲ್ಲೇ, ಈ ನಿರ್ಧಾರವನ್ನೂ ಕೇಂದ್ರ ಸರ್ಕಾರ ಪ್ರಕಟಿಸಿದೆ. ಅಫ್ಘಾನಿಸ್ಥಾನದಲ್ಲಿ ಹಿಂದೂ ಮತ್ತು ಸಿಖ್ಖರ ಮೇಲೆ ಉಗ್ರರು, ಅಪಹರಣಕಾರರು ನಡೆಸುತ್ತಿರುವ ಹಿಂಸಾಚಾರವನ್ನು ಮನಗಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಅಲ್ಲಿ ಅಲ್ಪಸಂಖ್ಯಾತರನ್ನು ಹತ್ತಿಕ್ಕಲು ಉಗ್ರರನ್ನೇ ಅಸ್ತ್ರವಾಗಿ ಬಳಸಲಾಗುತ್ತಿದ್ದು, ಅವರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಜೊತೆಗೆ ಅಫ್ಘಾನಿಸ್ಥಾನದಲ್ಲಿ ಹಿಂದೂಗಳು ಮತ್ತು ಸಿಖ್ಖರ ಅಪಹರಣವೂ ಅವ್ಯಾಹತವಾಗಿ ನಡೆಯುತ್ತಿದೆ. “ಗುರುದ್ವಾರಕ್ಕೆ ಹೋದ ತಮ್ಮ ಪತಿಯನ್ನು ಅಪಹರಣ ಮಾಡಲಾಗಿದೆ. ಈ ಪ್ರಕರಣದ ಹಿಂದೆ ಉಗ್ರರು, ಅಪಹರಣಕಾರರ ಕೈವಾಡವಿದೆ. ತಮ್ಮ ಪತಿಗೆ ರಕ್ಷಣೆ ನೀಡಬೇಕು” ಎಂದು ಕೋರಿ ಮಹಿಳೆಯೊಬ್ಬರು ಭಾರತ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆ ಬಳಿಕೆ ಭಾರತೀಯ ಗುಪ್ತಚರ ಸಂಸ್ಥೆ ಅಫ್ಘಾನಿಸ್ಥಾನದ ಜೊತೆಗೆ ಮಾತುಕತೆ ನಡೆಸಿ ಆ ವ್ಯಕ್ತಿಯನ್ನು ರಕ್ಷಿಸಲಾಗಿತ್ತು. ಇಂತಹ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಸಿಖ್ಖರು ಮತ್ತು ಹಿಂದೂಗಳಿಗೆ ಆಶ್ರಯ ನೀಡುವುದಾಗಿ ಮಾಹಿತಿ ನೀಡಿದೆ.
ಅಫ್ಘಾನಿಸ್ಥಾನದಲ್ಲಿ ಮೂಲಭೂತವಾದಿಗಳ ಹಿಂಸಾಚಾರದಿಂದ ಬೇಸತ್ತ 600 ಕ್ಕೂ ಅಧಿಕ ಸಿಖ್ಖರು ಕಾಬೂಲ್ ನಲ್ಲಿರುವ ಭಾರತೀಯ ರಾಯಭಾರಿ ಕಛೇರಿಗೆ ರಕ್ಷಣೆ ನೀಡುವಂತೆ ಮನವಿ ಸಲ್ಲಿಸಿದ್ದರು. ಅವರ ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ ಇವರಿಗೆ ಭಾರತದಲ್ಲಿ ಹೆಚ್ಚು ಕಾಲ ಉಳಿದುಕೊಳ್ಳುವುದಕ್ಕೆ ಪೂರಕ ವಿಸಾ ವ್ಯವಸ್ಥೆ ಒದಗಿಸುವುದಾಗಿ ತಿಳಿಸಿದೆ. ಆಗಸ್ಟ್ 15 ರ ಒಳಗಾಗಿ 700 ಕ್ಕೂ ಆಧಿಕ ಹಿಂದೂಗಳು, ಸಿಖ್ಖರನ್ನು ಭಾರತಕ್ಕೆ ಕರೆತರಲು ಕ್ರಮ ಕೈಗೊಳ್ಳುವುದಾಗಿಯೂ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.