ನವದೆಹಲಿ: ಗ್ರಾಹಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ 2019 ರಲ್ಲಿಯೇ 1986ರ ಗ್ರಾಹಕರ ಹಿತರಕ್ಷಣಾ ಕಾಯ್ದೆಯಲ್ಲಿ ಬದಲಾವಣೆ ಮಾಡಿದ್ದು, ಈ ತಿದ್ದುಪಡಿ ಇಂದಿನಿಂದಲೇ ಜಾರಿಗೆ ಬರಲಿದೆ.
ರಾಷ್ಟ್ರೀಯ ಮಟ್ಟದಲ್ಲಿ ಗ್ರಾಹಕರ ಹಕ್ಕುಗಳನ್ನು ಕಾಪಾಡುವ ಉದ್ದೇಶದಿಂದ ಈ ಕಾಯ್ದೆಯಲ್ಲಿನ 109 ಅಂಶಗಳಲ್ಲಿ ಬದಲಾವಣೆಗಳನ್ನು ತರಲಾಗಿದೆ. ನೇರ ಮಾರಾಟ ಮತ್ತು ಟೆಲಿ ಮಾರ್ಕೆಟಿಂಗ್ ವಿಚಾರಗಳನ್ನು ಗಮನದಲ್ಲಿರಿಸಿಕೊಂಡಂತೆ ಈ ತಿದ್ದುಪಡಿ ಮಾಡಲಾಗಿದೆ ಎಂದೂ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಈ ತಿದ್ದುಪಡಿಯ ಪ್ರಕಾರ ಜಿಲ್ಲಾ ಗ್ರಾಹಕರ ವೇದಿಕೆಯನ್ನು ಜಿಲ್ಲಾ ಆಯೋಗ ಎಂಬ ಹೆಸರಿಗೆ ಬದಲಾವಣೆ ಮಾಡಲಾಗಿದೆ. ಜಿಲ್ಲಾ ಆಯೋಗ ನೀಡಿದ ತೀರ್ಪಿನ ವಿರುದ್ಧ ರಾಜ್ಯ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಬೇಕಾದರೆ ಜಿಲ್ಲಾ ಆಯೋಗ ಆದೇಶಿಸಿದ್ದ ಮೊತ್ತದ 50% ವನ್ನು ಠೇವಣಿ ಇಡುವಂತೆ ಸೂಚಿಸಲಾಗಿದೆ. ಈ ಮೇಲ್ಮನವಿ ಸಲ್ಲಿಕೆಯ ಕಾಲಾವಕಾಶವನ್ನು 30 ದಿನಗಳಿಂದ 45 ದಿನಗಳಿಗೆ ಏರಿಕೆ ಮಾಡಲಾಗಿದೆ.
ರಾಜ್ಯ ಆಯೋಗದಲ್ಲಿ ಕನಿಷ್ಠ 1 ಅಧ್ಯಕ್ಷ , 4 ಮಂದಿ ಸದಸ್ಯರು ಕಡ್ಡಾಯ. ಆರ್ಥಿಕತೆಗೆ ಸಂಬಂಧಿಸಿದಂತೆ ಜಿಲ್ಲಾ ಆಯೋಗ ಒಂದು ಕೋಟಿಯ ವರೆಗೆ, ರಾಜ್ಯ ಆಯೋಗ ಒಂದರಿಂದ ಹತ್ತು ಕೋಟಿಯ ವರೆಗಿನ ವ್ಯಾಪ್ತಿಯನ್ನು ಮಾತ್ರವೇ ಒಳಗೊಂಡಿದೆ. ಹತ್ತು ಕೋಟಿಗೂ ಅಧಿಕ ಮೊತ್ತದ ವಿಚಾರಗಳನ್ನು ಇತ್ಯರ್ಥ ಮಾಡುವ ಹಕ್ಕು ರಾಷ್ಟ್ರೀಯ ಆಯೋಗಕ್ಕೆ ಇರುವುದಾಗಿಯೂ ಇದರಲ್ಲಿ ತಿಳಿಸಲಾಗಿದೆ.
ದೂರು ನೀಡುವವರಿಗೆ ತಾವು ವಾಸಿಸುವ ಸ್ಥಳದಲ್ಲಿ ಹಾಗೂ ಆಯೋಗದ ಸರಹದ್ದಿನ ವ್ಯಾಪ್ತಿಯಲ್ಲಿ ದೂರು ಸಲ್ಲಿಸಲು ಎಲ್ಲಾ ಅವಕಾಶವನ್ನು ನೀಡಲಾಗಿದೆ. ಹೊಸ ಕಾಯ್ದೆಯ ಕಲಂ 49(2) ಮತ್ತು 59(2) ರ ಮೂಲಕ ಗ್ರಾಹಕ ವಿರೋಧಿ ನಡೆಗಳು ಕಂಡುಬಂದಲ್ಲಿ ಅದನ್ನು ಅಸಿಂಧು ಎಂದು ಘೋಷಿಸುವ ಅಧಿಕಾರ ರಾಜ್ಯ ಮತ್ತು ರಾಷ್ಟ್ರೀಯ ಆಯೋಗಕ್ಕಿದೆ. 51(3) ರ ಪ್ರಕಾರ ರಾಷ್ಟ್ರೀಯ ಆಯೋಗಕ್ಕೆ 2 ಮನವಿಗಳನ್ನು ಸಲ್ಲಿಸುವ ಅವಕಾಶ ನೀಡಲಾಗಿದೆ. ದೂರಿನ ಪುನರಾವಲೋಕನದ ಅಧಿಕಾರವನ್ನು ರಾಜ್ಯ ಆಯೋಗವು ಕಲಂ 47(1) ರ ಅಡಿಯಲ್ಲಿ ಮತ್ತು ರಾಷ್ಟ್ರೀಯ ಆಯೋಗವು 58(1)(b) ಅಡಿಯಲ್ಲಿ ನಡೆಸಬಹುದಾಗಿದೆ.
ಕೇಂದ್ರ ಪ್ರಾಧಿಕಾರದ ಆದೇಶದ ವಿರುದ್ಧ ಮೇಲ್ಮನವಿ ಗಳನ್ನು ರಾಷ್ಟ್ರೀಯ ಆಯೋಗವು ಕಲಂ 58 ರ ಅಡಿಯಲ್ಲಿ ವಿಚಾರಣೆ ಮಾಡಬಹುದಾಗಿದೆ. ದೂರು ಸಲ್ಲಿಕೆಗೆ 2 ವರ್ಷಗಳ ಕಾಲಮಿತಿ, ವಿಳಂಬ ಮನ್ನಣೆ ಕೋರಿ ಕಲಂ 69 ರ ಅಡಿಯಲ್ಲಿ ಅರ್ಜಿ ಸಲ್ಲಿಕೆಗೂ ಅವಕಾಶ ನೀಡಲಾಗಿದೆ. ಜಿಲ್ಲಾ ಆಯೋಗದ ಮೇಲೆ ರಾಜ್ಯ ಆಯೋಗಕ್ಕೆ ನಿಯಂತ್ರಣ ಅವಕಾಶ, ರಾಜ್ಯ ಆಯೋಗದ ಮೇಲಿನ ನಿಯಂತ್ರಣ ಅಧಿಕಾರ ರಾಷ್ಟ್ರೀಯ ಆಯೋಗಕ್ಕೆ ಇದೆ. ಕಾಯ್ದೆ ತಿದ್ದುಪಡಿಯಲ್ಲಿ ಮಧ್ಯಸ್ಥಿಕೆ ಮೂಲಕ ವಿವಾದ ಬಗೆಹರಿಸುವ ಶಾಸನಾತ್ಮಕ ಅಧಿಕಾರವನ್ನು ಆಯೋಗಕ್ಕೆ ನೀಡಲಾಗಿದೆ. ಗ್ರಾಹಕ ಹಕ್ಕುಗಳ ಉಲ್ಲಂಘನೆ, ಅಪ್ರಾಮಾಣಿಕ ವ್ಯವಹಾರಕ್ಕೆ ಸಂಬಂಧಿಸಿದಂತೆ, ಸುಳ್ಳು ಜಾಹೀರಾತು ಪ್ರಕಟಣೆ ಮೊದಲಾದವುಗಳಿಗೆ ಸಂಬಂಧಿಸಿದಂತೆ ಕೇಂದ್ರ ಪ್ರಾಧಿಕಾರಕ್ಕೆ ಕ್ರಮ ಕೈಗೊಳ್ಳುವ ಅವಕಾಶ ನೀಡಲಾಗಿದೆ.
ಇವುಗಳಲ್ಲದೆ ಇನ್ನೂ ಅನೇಕ ಮಾರ್ಪಾಡುಗಳನ್ನು ಗ್ರಾಹಕ ಹಿತರಕ್ಷಣಾ ಕಾಯ್ದೆಯಲ್ಲಿ ಮಾಡಲಾಗಿದ್ದು, ಆ ಮೂಲಕ ಗ್ರಾಹಕ ಸ್ನೇಹಿ ಕಾನೂನು ತರುವಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಜೊತೆಗೆ ಆಯೋಗಕ್ಕೆ ಸದಸ್ಯರ ನೇಮಕದ ವಿಚಾರಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ಶೀಘ್ರದಲ್ಲೇ ರಚಿಸಲಾಗುತ್ತದೆ ಎಂದೂ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.