ಬೆಂಗಳೂರು: ಅಪಘಾತಗಳು ನಡೆದ ಸಂದರ್ಭಗಳಲ್ಲಿ ವಾಸ್ತವಾಂಶವನ್ನು ತಿಳಿದುಕೊಳ್ಳಲು ಸಹಾಯವಾಗುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹೊಸತೊಂದು ಯೋಜನೆಗೆ ರೂಪುರೇಶೆ ಸಿದ್ಧಗೊಳಿಸಿದೆ. ಬಸ್ಸುಗಳ ಮುಂಭಾಗದಲ್ಲಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಅನಿರೀಕ್ಷಿತ ಅಪಘಾತಗಳ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ಮುಂದಾಗಿದೆ.
ಸರ್ಕಾರಿ ಸಾರಿಗೆ ಸಂಸ್ಥೆಯ ಬಸ್ಸುಗಳು ಅಪಘಾತಕ್ಕೆ ಒಳಗಾದ ಸಂದರ್ಭದಲ್ಲಿ ಅನೇಕ ಬಾರಿ ತಪ್ಪಿರದೇ ಇದ್ದರೂ ಚಾಲಕ ಶಿಕ್ಷೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನಿಗಮ ಈ ಹೊಸ ಕ್ರಮಕ್ಕೆ ಮುಂದಾಗಿದೆ. ಸಿಬ್ಬಂದಿಗಳು ಮತ್ತು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದಲೂ ಈ ಕ್ರಮ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಇದರ ಸಾಧ್ಯತೆ ಬಾಧ್ಯತೆಗಳಿಗೆ ಸಂಬಂಧಿಸಿದಂತೆ ಕೆಎಸ್ಆರ್ಟಿಸಿಯ ಪ್ರಧಾನ ಕಛೇರಿಯಲ್ಲಿ ಅಧಿಕಾರಿಗಳು ಚರ್ಚೆಯನ್ನು ನಡೆಸಿದ್ದಾರೆ.
ಈ ಕ್ಯಾಮೆರಾಗಳು ಹಗಲು ಮಾತ್ರವಲ್ಲದೆ ರಾತ್ರಿ ವೇಳೆಯಲ್ಲಿಯೂ ಕಾರ್ಯನಿರ್ವಹಿಸಲಿವೆ. ಈ ಕ್ಯಾಮೆರಾದಲ್ಲಿ ದಾಖಲಾಗುವ ದೃಶ್ಯಗಳು ಚಾಲಕನಿಗೂ ತಿಳಿಯುವಂತೆ ವ್ಯವಸ್ಥೆ ಮಾಡುವುದಾಗಿ ತಿಳಿಸಿರುವ ಸಂಸ್ಥೆ, ಸಂಭಾವ್ಯ ಅಪಘಾತಗಳನ್ನು ತಡೆಯುವಲ್ಲಿಯೂ ಸಹಾಯ ಮಾಡಲಿದೆ ಎಂಬ ಅಭಿಪ್ರಾಯ ಅಧಿಕಾರಿಗಳದ್ದು.
ಆರಂಭದಲ್ಲಿ ಪ್ರಧಾನ ಕಛೇರಿಯ ಕೆಲವು ಬಸ್ಸುಗಳಿಗೆ ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಅಳವಡಿಸಿ ಪರಿಶೀಲಿಸಿದ ಬಳಿಕ ವಿಭಾಗ ಮಟ್ಟದಲ್ಲಿಯೂ ಬಸ್ಸುಗಳಿಗೆ ಕೆಮರಾ ಅಳವಡಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜೊತೆಗೆ ಅಪಘಾತ ರಹಿತ ಚಾಲನೆಗಾಗಿ ರಕ್ಷಣಾ ಕೌಶಲಗಳ ಬಗ್ಗೆ ಕೆಎಸ್ಆರ್ಟಿಸಿ ಚಾಲಕರಿಗೆ ಮೈಸೂರು, ಬೆಂಗಳೂರು, ಹಾಸನಗಳಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ ಎಂದೂ ಸಂಬಂಧಪಟ್ಟ ಮೂಲಗಳು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.