ನವದೆಹಲಿ: ಮಯನ್ಮಾರ್ನಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಗುಂಪುಗಳಿಗೆ ಚೀನಾವು ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದೆ ಎಂದು ಭಾರತೀಯ ಭದ್ರತಾ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ. ಇತ್ತೀಚಿನ ಬೆಳವಣಿಗೆಯೊಂದರಲ್ಲಿ, ಮಯನ್ಮಾರ್-ಥೈಲ್ಯಾಂಡ್ ಗಡಿಯ ಬಳಿ ಚೀನಾದ ಶಸ್ತ್ರಾಸ್ತ್ರಗಳ ಒಂದು ದೊಡ್ಡ ಸಂಗ್ರಹವನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನು ಕಲಾದನ್ ಮಲ್ಟಿಮೋಡಲ್ ಪ್ರಾಜೆಕ್ಟ್ ಸೇರಿದಂತೆ ಭಾರತೀಯ ಆಸ್ತಿಗಳನ್ನು ಗುರಿಯಾಗಿಸಲು ಬಂಡುಕೋರ ಅರಾಕನ್ ಆರ್ಮಿ (ಎಎ) ಗೆ ಪೂರೈಸಲಾಗುತ್ತಿತ್ತು ಎನ್ನಲಾಗಿದೆ.
ಮಯನ್ಮಾರ್ ಮತ್ತು ಥೈಲ್ಯಾಂಡ್ ಪೊಲೀಸರು ಕಳೆದ ತಿಂಗಳು ಜೂನ್ನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಚೀನಾದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತಾ ಸಂಸ್ಥೆಗಳು ಒಟ್ಟು 6 ಜನರನ್ನು ಬಂಧಿಸಿದ್ದವು. ಚೀನಾದ ಶಸ್ತ್ರಾಸ್ತ್ರಗಳನ್ನು ಬಾಂಗ್ಲಾದೇಶದ ಪಕ್ಕದಲ್ಲಿರುವ ರಾಖೈನ್ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಾಕನ್ ಸೈನ್ಯಕ್ಕೆ ಸಾಗಿಸಲಾಗುತ್ತಿದೆ ಎಂದು ಬಂಧಿತರು ಬಹಿರಂಗಪಡಿಸಿದ್ದಾರೆ.
ಥಾಯ್ ಕಡೆಯ ಮೇ ಸೋಟ್ ಜಿಲ್ಲೆಯ ಮನೆಯೊಂದರಿಂದ ವಶಪಡಿಸಿಕೊಂಡ ವಸ್ತುಗಳ ಪೈಕಿ ಎಕೆ 47 ಅಟ್ಯಾಕ್ ರೈಫಲ್ಗಳು, ಯ್ಯಾಂಟಿ ಟ್ಯಾಂಕ್ ಮೈನ್ಸ್ , ಗ್ರೆನೇಡ್ಗಳು ಮತ್ತು ಮೆಷಿನ್ ಗನ್ಗಳು ಇದ್ದವು ಎಂದು ಹೇಳಲಾಗಿದೆ.
“ಅವು ಪ್ರಸ್ತುತ ಅರಾಕನ್ ಸೈನ್ಯ ಬಳಸುವ ಶಸ್ತ್ರಾಸ್ತ್ರಗಳಲ್ಲ. ವಾ (ಯುನೈಟೆಡ್ ವಾ ಸ್ಟೇಟ್ ಆರ್ಮಿ) ಮತ್ತು ಕೆಐಎ (ಕಾಚಿನ್ ಇಂಡಿಪೆಂಡೆನ್ಸ್ ಆರ್ಮಿ) ತಯಾರಿಸಿದ ಶಸ್ತ್ರಾಸ್ತ್ರಗಳು ಅಷ್ಟು ಪರಿಣಾಮಕಾರಿಯಲ್ಲ. ಅವು ಸ್ವಯಂಚಾಲಿತವಾಗಿ ಗುಂಡು ಹಾರಿಸುವುದಿಲ್ಲ. ವಶಪಡಿಸಿಕೊಂಡ ಆಯುಧಗಳು ಮೂಲ ಚೀನೀ ನಿರ್ಮಿತವಾಗಿವೆ ”ಎಂದು ಮೂಲಗಳು ವರದಿ ಮಾಡಿವೆ.
ಕಳೆದ ವರ್ಷ, ಭಾರತೀಯ ಮತ್ತು ಮಯನ್ಮಾರ್ ಸೇನೆಗಳು ತಮ್ಮ ಗಡಿಗಳಲ್ಲಿ ಅರಾಕನ್ ಸೈನ್ಯ ಮತ್ತು ಇತರ ಬಂಡಾಯ ಗುಂಪುಗಳ ವಿರುದ್ಧ ಜಂಟಿ ಸಮನ್ವಯ ಕಾರ್ಯಾಚರಣೆ ಅನ್ನು ‘ಆಪರೇಷನ್ ಸನ್ರೈಸ್’ ಎಂಬ ಕೋಡ್ ಹೆಸರಿನಲ್ಲಿ ಕಲಾದನ್ ಯೋಜನೆಯನ್ನು ಭದ್ರಪಡಿಸಿಕೊಳ್ಳಲು ನಡೆಸಿದ್ದವು. ಅರಾಕನ್ ಸೈನ್ಯವು ಮಿಜೋರಾಂನ ಲಾಂಗ್ಟ್ಲೈ ಜಿಲ್ಲೆಯಾದ್ಯಂತ ಹಲವಾರು ಶಿಬಿರಗಳನ್ನು ಸ್ಥಾಪಿಸಿದ್ದು, ಕಲಾದನ್ ಯೋಜನೆಗೆ ಅಪಾಯವನ್ನುಂಟು ಮಾಡಿದೆ. ಈ ಯೋಜನೆಯನ್ನು ಆಗ್ನೇಯ ಏಷ್ಯಾದ ಭಾರತದ ಹೆಬ್ಬಾಗಿಲು ಎಂದೇ ನೋಡಲಾಗುತ್ತಿದೆ.
ಬ್ಯಾಂಕಾಕ್ ಪೋಸ್ಟ್ಗೆ ನೀಡಿದ ಸಂದರ್ಶನದಲ್ಲಿ, ಥೈಲ್ಯಾಂಡ್ ಪೊಲೀಸ್ ಉಪ ವಕ್ತಾರ ಕರ್ನಲ್ ಕಿಸ್ಸಾನಾ ಫಟ್ಟನಾಚರೋಯೆನ್, ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು ಹಾನಿಯನ್ನುಂಟು ಮಾಡುವ ಉದ್ದೇಶದಿಂದ ಸಂಗ್ರಹಿಸಲ್ಪಟ್ಟಿದ್ದವು ಎಂದು ನಂಬಲಾಗಿದೆ ಮತ್ತು ಒಂದು ನಿರ್ದಿಷ್ಟ ಗುಂಪಿನ ಜನರು ಅನುಮಾನಾಸ್ಪದ ಚಟುವಟಿಕೆಗಳನ್ನು ಯೋಜಿಸುತ್ತಿದ್ದಾರೆ ಎಂಬ ಗುಪ್ತಚರ ವರದಿಗಳ ನಡುವೆ ಇದನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.