ನವದೆಹಲಿ: ಕೊರೋನಾ ನಂತರದಲ್ಲಿ ಇಡೀ ವಿಶ್ವವೇ ಚೀನಾ ದೇಶವನ್ನು ತಿರಸ್ಕಾರದ ದೃಷ್ಟಿಯಿಂದ ನೋಡುತ್ತಿದ್ದು, ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಭಾರತ ಇದನ್ನೊಂದು ಉತ್ತಮ ಅವಕಾಶವಾಗಿ ಪರಿಗಣಿಸಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ನವ ಭಾರತದಲ್ಲಿ ಆತ್ಮ ನಿರ್ಭರ ಭಾರತ ವೆಬಿನಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಸಂದರ್ಭವನ್ನು ದೇಶ ಹೆಚ್ಚು ಸ್ಪರ್ಧಾತ್ಮಕವಾಗಿ ಎದುರಿಸಬೇಕು. ಒದಗಿ ಬಂದಿರುವ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಚೀನಾವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಜಗತ್ತು ಹಿಂದೇಟು ಹಾಕುತ್ತಿವೆ. ಈ ಸಂದರ್ಭದಲ್ಲಿ ಭಾರತೀಯ ಕೈಗಾರಿಕೆಗಳು ಜಗತ್ತಿನ ಅವಶ್ಯಕತೆಗಳನ್ನು ಪೂರೈಸುವತ್ತ ಚಿತ್ತ ಹರಿಸಬೇಕಾಗಿದೆ. ಇದನ್ನು ನಮಗೆ ಒದಗಿ ಬಂದ ಅನುಗ್ರಹ ಎಂದು ಪರಿಗಣಿಸಿ ಗುಣಮಟ್ಟದ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಬಳಿಕ ಮಾತನಾಡಿದ ಗಡ್ಕರಿ, ಕೇಂದ್ರ ಸರ್ಕಾರ ದೇಶೀಯ ಉತ್ಪಾದನೆ, ಕೃಷಿ ಬೆಳವಣಿಗೆಯ ದರ, ಗ್ರಾಮೋದ್ಯೋಗ ಮೊದಲಾದವುಗಳನ್ನು ಉನ್ನತ ಮಟ್ಟಕ್ಕೇರಿಸುವ ಪ್ರಯತ್ನ ನಡೆಸುತ್ತಿದೆ. ಜೊತೆಗೆ ದೇಶದ ಹೆಚ್ಚಿನ ಕ್ಷೇತ್ರಗಳನ್ನು ಡಿಜಿಟಲೈಝೇಶನ್ ಮಾಡುವ ನಿಟ್ಟಿನಲ್ಲಿಯೂ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಜೊತೆಗೆ ಮುಂದಿನ 5 ವರ್ಷಗಳಲ್ಲಿ ಹೆದ್ದಾರಿ ಪ್ರಾಧಿಕಾರದ ಆದಾಯವನ್ನು 1 ಲಕ್ಷ ಕೋಟಿ ರೂಪಾಯಿಗಳಿಗೇರಿಸುವ ಯೋಜನೆಯನ್ನೂ ನಮೋ ಸರ್ಕಾರ ರೂಪಿಸುತ್ತಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ. ಜೊತೆಗೆ ಜಿಡಿಪಿ ದರ ಏರಿಕೆಗೆ ಕ್ರಮ ಕೈಗೊಳ್ಳುವುದಾಗಿಯೂ ಅವರು ಹೇಳಿದ್ದಾರೆ.
ಚೀನಾ ಲಡಾಕ್ನ ಗಲ್ವಾನ್ ಗಡಿಯಲ್ಲಿ ಕಾಲು ಕೆರೆದುಕೊಂಡು ಭಾರತದ ಜೊತೆಗೆ ಸಂಘರ್ಷ ನಡೆಸಿದ ನಂತರದಲ್ಲಿ ಚೀನಾ ವಿರುದ್ಧ ಭಾರತ ಡಿಜಿಟಲ್ ಸ್ಟ್ರೈಕ್ ನಡೆಸಿದ್ದು, ದೇಶದ ಭದ್ರತಾ ದೃಷ್ಟಿಯಿಂದ 59 ಚೀನೀ ಆ್ಯಪ್ಗಳನ್ನು ನಿಷೇಧ ಮಾಡಿ ಆದೇಶ ಹೊರಡಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.