ತಿರುವನಂತಪುರಂ: ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ಕೇರಳದ 30 ಕೆಜಿ ಚಿನ್ನ ಕಳ್ಳಸಾಗಣೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಕೇಂದ್ರ ಸರ್ಕಾರ ವಹಿಸಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಗುರುವಾರ ಘೋಷಣೆ ಮಾಡಿದೆ.
“ಸಂಘಟಿತ ಕಳ್ಳಸಾಗಣೆ ಕಾರ್ಯಾಚರಣೆಯು ರಾಷ್ಟ್ರೀಯ ಭದ್ರತೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದು” ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯದಲ್ಲಿ ರಾಜಕೀಯ ಚಂಡಮಾರುತವೇ ಎದ್ದಿದೆ. ಬಿಜೆಪಿ ಮತ್ತು ಇತರ ಪ್ರತಿಪಕ್ಷಗಳು ಎಡಪಂಥೀಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ, ಹೀಗಾಗಿ ಅವರು ರಾಜೀನಾಮೆ ನೀಡಲೇ ಬೇಕು ಎಂದು ಪಟ್ಟು ಹಿಡಿದಿವೆ. ಪ್ರಕರಣದಲ್ಲಿ ಪ್ರಮುಖ ಸಿಪಿಎಂ ನಾಯಕರಾದ ಶ್ರೀರಾಮಕೃಷ್ಣ ಸೇರಿದಂತೆ ಹಲವರ ಹೆಸರುಗಳು ಕೇಳಿ ಬಂದಿವೆ.
ಕೇಂದ್ರದಿಂದ ಮುಖಭಂಗ ಎದುರಿಸಬೇಕಾಗಿ ಬರಬಹುದು ಎಂಬ ಆತಂಕದಲ್ಲೇ ಮುಖ್ಯಮಂತ್ರಿ ವಿಜಯನ್ ಅವರು ಚಿನ್ನ ಕಳ್ಳಸಾಗಣೆ ಪ್ರಕರಣದ ಬಗ್ಗೆ ಕೇಂದ್ರ ತನಿಖೆಗೆ ಒತ್ತಾಯಿಸಿ ಪ್ರಧಾನಿಗೆ ಪತ್ರ ಬರೆದಿದ್ದರು.
ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್. ಇವರು ಪಿಣರಾಯಿ ಅವರ ಆಪ್ತ ಕಾರ್ಯದರ್ಶಿ ಶಿವಶಂಕರ್ ಅವರ ಆಪ್ತರಾಗಿದ್ದರು. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ ಬಳಿಕ ಪಿಣರಾಯಿ ಶಿವಶಂಕರ್ ಅವರನ್ನು ಹುದ್ದೆಯಿಂದ ಅಮಾನತು ಮಾಡಿದ್ದರು.
ತಿರುವನಂತಪುರದ ಸೌದಿ ಅರೆಬಿಯಾ ದೂತಾವಾಸ ಕಚೇರಿಯಿಂದ 30 ಕೆಜಿ ಅಕ್ರಮ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಈ ದೂತಾವಾಸ ಕಚೇರಿಯ ಮಾಜಿ ಅಧಿಕಾರಿ, ಕೇರಳ ರಾಜ್ಯ ಮಾಹಿತಿ ತಂತ್ರಜ್ಞಾನ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ನ ಅಡಿಯಲ್ಲಿ ಬರುವ ಸ್ಪೇಸ್ ಪಾರ್ಕ್ ಮಾರ್ಕೆಟಿಂಗ್ ಸಂಪರ್ಕ ಅಧಿಕಾರಿ ಸ್ವಪ್ನಾ ಸುರೇಶ್ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ.
ರಾಜತಾಂತ್ರಿಕವಾಗಿ ಸಾಗಿಸಲಾಗುವ ವಸ್ತುಗಳನ್ನು ಕಟ್ಟುನಿಟ್ಟಾಗಿ ಪರಿಶೀಲನೆಗೆ ಒಳಪಡಿಸಲಾಗುವುದಿಲ್ಲ ಎಂಬುದನ್ನು ಅರಿತು ಇವರುಗಳು ಚಿನ್ನವನ್ನು ಸಾಗಿಸುವ ಯೋಜನೆ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.