ತಮಿಳುನಾಡು: ದಟ್ಟವಾದ ಕಾಡು ಪ್ರದೇಶ, ಕ್ರೂರ ಪ್ರಾಣಿಗಳ ಹಾವಳಿಯ ಭೀತಿಯ ನಡುವೆಯೂ ಪ್ರತಿನಿತ್ಯ 15 ಕಿಲೋಮೀಟರ್ ಗಳಷ್ಟು ಕಾಲ್ನಡಿಗೆಯ ಮೂಲಕವೇ ಕ್ರಮಿಸಿ ಅಂಚೆ ಪತ್ರಗಳನ್ನು ಹಂಚುವ ಕೆಲಸವನ್ನು ತಮಿಳುನಾಡಿನ ಕೂನೂರ್ನ ಪೋಸ್ಟ್ ಮ್ಯಾನ್ ಡಿ. ಶಿವನ್ ಎಂಬವರು ಕಳೆದ 30 ವರ್ಷಗಳಿಂದಲೂ ಮಾಡಿಕೊಂಡು ಬರುತ್ತಿದ್ದಾರೆ. ಮೂರು ದಶಕಗಳ ಶ್ರಮಿಕ ಅಂಚೆಯಣ್ಣನ ನಿಸ್ವಾರ್ಥ ಕೆಲಸವನ್ನು ಗುರುತಿಸಿರುವ ನೆಟ್ಟಿಗರು, ಅವರಿಗೆ ಪ್ರಶಂಸೆಯ ಸುರಿಮಳೆಗೈದಿದ್ದಾರೆ.
ತಮಿಳುನಾಡಿನ ಕೂನೂರ್ನ 15 ಕಿಲೋಮೀಟರ್ ವ್ಯಾಪ್ತಿಯ ಪ್ರದೇಶಗಳಿಗೆ ಕಠಿಣ ಹಾದಿಗಳನ್ನು ಬಳಸಿ ಕಾಲ್ನಡಿಗೆಯ ಮೂಲಕವೇ ಕ್ರಮಿಸಿ ಪತ್ರಗಳು, ಇನ್ನಿತರ ಅಂಚೆ ಸೇವೆಗಳನ್ನು ಸಂಬಂಧಪಟ್ಟವರಿಗೆ ತಲುಪಿಸುವ ಕೆಲಸವನ್ನು ಶಿವನ್ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಡು ದಾರಿಯಲ್ಲಿ ಆನೆಯೂ ಸೇರಿದಂತೆ ಇನ್ನಿತರ ಕಾಡುಪ್ರಾಣಿಗಳು ದಾಳಿ ನಡೆಸಿರುವುದು, ಅಟ್ಟಾಡಿಸಿರುವ ಸಂಗತಿಗಳೂ ನಡೆದಿವೆ.
ಇವರ ಈ ಕಾಯಕ ನಿಷ್ಠೆಯ ಬಗ್ಗೆ ಟ್ವೀಟ್ ಮಾಡಿರುವ ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು, ಇವರದ್ದು ಸಮರ್ಪಣಾ ಮನೋಭಾವದ ಕೆಲಸ ಎಂದು ಕೊಂಡಾಡಿದ್ದಾರೆ. ಕೂನೂರ್ ಜಿಲ್ಲೆಯ 15 ಕಿಮೀ ವ್ಯಾಪ್ತಿಯಲ್ಲಿ ಕಾಲ್ನಡಿಗೆಯಲ್ಲೇ ಪ್ರತಿನಿತ್ಯ ಸಂಚರಿಸುತ್ತಾರೆ. ಕಾಡು ಪ್ರಾಣಿಗಳ ಹಾವಳಿಯ ಸಂಭಾವ್ಯ ಅಪಾಯವನ್ನು ಲೆಕ್ಕಿಸದೆ ಡಿ. ಶಿವನ್ ಅವರು ಸಮರ್ಪಣಾ ಭಾವದಿಂದ ತಮ್ಮ ಕೆಲಸವನ್ನು ಮನಸ್ಸಿಟ್ಟು ಮಾಡುತ್ತಿದ್ದಾರೆ. ತಮ್ಮ 30 ವರ್ಷಗಳ ಅಮೋಘ ಸೇವೆಯನ್ನು ಅಂಚೆ ಇಲಾಖೆಗೆ ನೀಡಿರುವ ಇವರು ಕಳೆದ ವಾರವಷ್ಟೇ ನಿವೃತ್ತರಾಗಿದ್ದಾರೆ ಎಂದೂ ಸುಪ್ರಿಯಾ ಬರೆದುಕೊಂಡಿದ್ದಾರೆ.
ಸುಪ್ರಿಯಾ ಸಾಹು ಅವರ ಈ ಟ್ವೀಟ್ 12000 ಬಾರಿ ರಿಟ್ವೀಟ್ ಆಗಿದ್ದು, 61000 ಲೈಕ್ಗಳನ್ನು ಪಡೆದಿದೆ. ಅಲ್ಲದೆ ಶಿವನ್ ಅವರ ಕಾರ್ಯವನ್ನು ಕಾಮೆಂಟ್ ಮೂಲಕ ಹಲವರು ಶ್ಲಾಘಿಸಿದ್ದು, ಅವರಿಗೆ ಅವಾರ್ಡ್ ನೀಡುವ ಮೂಲಕ ಗೌರವ ಸೂಚಿಸುವಂತೆಯೂ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.