ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ನಗರ ವಲಸಿಗರು/ ಬಡವರಿಗೆ ಕೈಗೆಟುಕುವ ಬಾಡಿಗೆ ವಸತಿ ಸಂಕೀರ್ಣಗಳನ್ನು (ಎಎಚ್ಆರ್ಸಿ) ಅಭಿವೃದ್ಧಿಪಡಿಸಲು ಅನುಮೋದನೆಯನ್ನು ನೀಡಿತು.
ಬಾಡಿಗೆ ವಸತಿ ಸಂಕೀರ್ಣಗಳನ್ನು ಅಭಿವೃದ್ಧಿಪಡಿಸುವ ಯೋಜನೆಯಡಿ, ಅಸ್ತಿತ್ವದಲ್ಲಿರುವ ಖಾಲಿ ಇರುವ ಸರ್ಕಾರಿ ಅನುದಾನಿತ ವಸತಿ ಸಂಕೀರ್ಣಗಳನ್ನು ರಿಯಾಯಿತಿ ಒಪ್ಪಂದಗಳ ಮೂಲಕ 25 ವರ್ಷಗಳವರೆಗೆ ಎಎಚ್ಆರ್ಸಿಗಳಾಗಿ ಪರಿವರ್ತಿಸಲಾಗುತ್ತದೆ. ಕೊಠಡಿಗಳ ದುರಸ್ತಿ / ರೆಟ್ರೊಫಿಟ್ ಮತ್ತು ನಿರ್ವಹಣೆ, ನೀರು, ಒಳಚರಂಡಿ, ನೈರ್ಮಲ್ಯ, ರಸ್ತೆ ಮುಂತಾದ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಈ ಸಂಕೀರ್ಣಗಳನ್ನು ವಾಸಯೋಗ್ಯವಾಗಿ ಮಾಡಲಾಗುತ್ತದೆ.
ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಪಾರದರ್ಶಕ ಬಿಡ್ಡಿಂಗ್ ಮೂಲಕ ಒಪ್ಪಂದ ಮಾಡಿಕೊಳ್ಳುವವರನ್ನು ಆಯ್ಕೆ ಮಾಡುತ್ತವೆ. ಬಳಕೆಗೆ ಅನುಮತಿ, ಶೇ.50 ಹೆಚ್ಚುವರಿ ಎಫ್ಎಆರ್ / ಎಫ್ಎಸ್ಐ, ಆದ್ಯತೆಯ ವಲಯದ ಸಾಲ ದರದಲ್ಲಿ ರಿಯಾಯಿತಿ ಸಾಲ, ಕೈಗೆಟುಕುವ ವಸತಿಗಳಿಗೆ ಸಮನಾಗಿ ತೆರಿಗೆ ವಿನಾಯಿತಿ ಮುಂತಾದ ವಿಶೇಷ ಪ್ರೋತ್ಸಾಹಗಳನ್ನು ಖಾಸಗಿ / ಸಾರ್ವಜನಿಕ ಸಂಸ್ಥೆಗಳಿಗೆ 25 ವರ್ಷಗಳ ಕಾಲ ತಮ್ಮದೇ ಖಾಲಿ ಭೂಮಿಯಲ್ಲಿ ಎಎಚ್ಆರ್ಸಿಗಳನ್ನು ಅಭಿವೃದ್ಧಿಪಡಿಸಲು ನೀಡಲಾಗುತ್ತದೆ.
ತಯಾರಿಕಾ ಉದ್ಯಮದ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳು, ಆತಿಥ್ಯ, ಆರೋಗ್ಯ, ದೇಶೀಯ / ವಾಣಿಜ್ಯ ಸಂಸ್ಥೆಗಳು, ಮತ್ತು ನಿರ್ಮಾಣ ಅಥವಾ ಇತರ ಕ್ಷೇತ್ರಗಳ ಸೇವಾ ಪೂರೈಕೆದಾರರು, ಉತ್ತಮ ಅವಕಾಶಗಳನ್ನು ಅರಸಿ ಗ್ರಾಮೀಣ ಪ್ರದೇಶಗಳಿಂದ ಅಥವಾ ಸಣ್ಣ ಪಟ್ಟಣಗಳಿಂದ ಬರುವ ಕಾರ್ಮಿಕರು, ವಿದ್ಯಾರ್ಥಿಗಳು ಎಎಚ್ಆರ್ಸಿಗಳ ಫಲಾನುಭವಿಗಳಾಗಿರುತ್ತಾರೆ .
600 ಕೋಟಿ ರೂ.ಗಳ ವೆಚ್ಚವನ್ನು ತಾಂತ್ರಿಕ ನಾವೀನ್ಯತೆ ಅನುದಾನ ರೂಪದಲ್ಲಿ ಅಂದಾಜಿಸಲಾಗಿದೆ, ಇದನ್ನು ನಿರ್ಮಾಣಕ್ಕೆ ಗುರುತಿಸಲಾದ ನವೀನ ತಂತ್ರಜ್ಞಾನಗಳನ್ನು ಬಳಸುವ ಯೋಜನೆಗಳಿಗೆ ಬಿಡುಗಡೆ ಮಾಡಲಾಗುತ್ತದೆ. ಆರಂಭದಲ್ಲಿ ಸುಮಾರು ಮೂರು ಲಕ್ಷ ಫಲಾನುಭವಿಗಳನ್ನು ಎಎಚ್ಆರ್ಸಿ ವ್ಯಾಪ್ತಿಗೆ ಒಳಪಡಿಸಲಾಗುತ್ತದೆ.
ಎಎಚ್ಆರ್ಸಿಗಳು ನಗರ ಪ್ರದೇಶಗಳಲ್ಲಿ ಹೊಸ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲಿದ್ದು, ಕೆಲಸದ ಸ್ಥಳಕ್ಕೆ ಹತ್ತಿರವಿರುವ ಕೈಗೆಟುಕುವ ಬಾಡಿಗೆಗೆ ವಸತಿ ಲಭ್ಯವಾಗುವಂತೆ ಮಾಡುತ್ತವೆ. ಎಎಚ್ಆರ್ಸಿಗಳ ಅಡಿಯಲ್ಲಿ ಹೂಡಿಕೆ ಮಾಡುವುದರಿಂದ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಎಎಚ್ಆರ್ಸಿಗಳು ಅನಗತ್ಯ ಪ್ರಯಾಣ, ಸಂಚಾರ ದಟ್ಟಣೆ ಮತ್ತು ಮಾಲಿನ್ಯವನ್ನು ಕಡಿಮೆಮಾಡುತ್ತವೆ.
ಸರ್ಕಾರದ ಅನುದಾನಿತ ಖಾಲಿ ವಸತಿಗಳನ್ನು ಆರ್ಥಿಕ ಉತ್ಪಾದನೆಗಾಗಿ ಎಎಚ್ಆರ್ಸಿಗಳಾಗಿ ಪರಿವರ್ತಿಸಲಾಗುತ್ತದೆ. ಈ ಯೋಜನೆಯು ಸಂಸ್ಥೆಗಳು ತಮ್ಮ ಖಾಲಿ ಭೂಮಿಯಲ್ಲಿ ಎಎಚ್ಆರ್ಸಿಗಳನ್ನು ಅಭಿವೃದ್ಧಿಪಡಿಸಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ, ಇದು ಹೊಸ ಹೂಡಿಕೆ ಅವಕಾಶಗಳನ್ನು ಮತ್ತು ಬಾಡಿಗೆ ವಸತಿ ವಲಯದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.