ನವದೆಹಲಿ: ಕೊರೋನಾ ಮಹಾಮಾರಿ ಭಾರತದ ಲಕ್ಷಾಂತರ ಮಂದಿಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಈ ವರೆಗೆ ಸುಮಾರು 6,97,413 ಕ್ಕೂ ಅಧಿಕ ಜನರು ಕೊರೋನಾದಿಂದ ಪೀಡಿತರಾಗಿದ್ದಾರೆ. ಈ ಆಘಾತಕಾರಿ ಸಂಗತಿಯ ನಡುವೆಯೂ ನಿರಾಳವಾಗುವ ವಿಚಾರವೊಂದನ್ನು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದ್ದು, ಸುಮಾರು 4,39,433 ರಷ್ಟು ಮಂದಿ ಕೊರೋನಾ ಸೋಂಕಿನಿಂದ ಚೇತರಿಸಿಕೊಂಡಿದ್ದು, ಸುಮಾರು 60.86% ಚೇತರಿಕೆಯ ಪ್ರಮಾಣವಿರುವುದಾಗಿಯೂ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳಲ್ಲಿ 15,350 ಮಂದಿ ಸೋಂಕಿತರು ಚೇತರಿಸಿಕೊಂಡಿರುವುದಾಗಿಯೂ ಆರೋಗ್ಯ ಸಚಿವಾಲಯ ಈ ವರದಿಯಲ್ಲಿ ತಿಳಿಸಿದೆ. ಕಳೆದ ಒಂದು ದಿನದ ಅವಧಿಯಲ್ಲಿ ದೇಶದಾದ್ಯಂತ 24,248 ಕೊರೋನಾ ಸೋಂಕಿತರು ಪತ್ತೆಯಾಗಿದ್ದು, ಆ ಮೂಲಕ ದೇಶದಲ್ಲಿನ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 6,97,413 ಆಗಿದೆ ಎಂದೂ ಮಾಹಿತಿ ನೀಡಿದೆ. ಕಳೆದೊಂದೇ ದಿನದಲ್ಲಿ 425 ಮಂದಿ ಸೋಂಕಿತರು ಮೃತಪಟ್ಟಿದ್ದು, 19,693 ಸೋಂಕಿತರು ಈ ವರೆಗೆ ಕೊರೋನಾ ದಿಂದ ಮೃತಪಟ್ಟಿರುವುದಾಗಿಯೂ ಸಚಿವಾಲಯ ತಿಳಿಸಿದೆ. ಸದ್ಯ ಈ ಮಾರಣಾಂತಿಕ ವೈರಸ್ ನಿಂದ ಮುಕ್ತರಾಗಲು 2,53,287 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಟ್ಟಿನಲ್ಲಿ ದೇಶದಲ್ಲಿ ಕೊರೋನಾ ರುದ್ರನರ್ತನದ ನಡುವೆಯೂ ಸೋಂಕಿನಿಂದ ಮೃತಪಟ್ಟವರಿಗಿಂತ, ಚೇತರಿಸಿಕೊಳ್ಳುವವರ ಪ್ರಮಾಣ ಹೆಚ್ಚಾಗಿದೆ ಎಂದು ಸಚಿವಾಲಯ ತಿಳಿಸಿದೆ. ಸರ್ಕಾರ ಸೂಚಿಸಿದ ಎಲ್ಲಾ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗಬಹುದು. ಹಾಗೆಯೇ ಮುಂದಿನ ದಿನಗಳಲ್ಲಿ ಚೇತರಿಕೆಯ ಪ್ರಮಾಣ ಇನ್ನೂ ಹೆಚ್ಚಳವಾಗಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.