ನವದೆಹಲಿ: ಚೀನಾದ ಕಂಪೆನಿಗಳಿಗೆ ಸಹಾಯ ಮಾಡುವ ಭಾರತೀಯ ನಿಯಮಗಳು ಹಳತಾಗಿವೆ ಮತ್ತು ಇವುಗಳನ್ನು ರಾಷ್ಟ್ರೀಯ ಹಿತಾಸಕ್ತಿ ಮತ್ತು ಭಾರತೀಯ ಸಂಸ್ಥೆಗಳ ಹಿತದೃಷ್ಟಿಯಿಂದ ಪರಿಶೀಲನೆ ನಡೆಸುವುದು ಅನಿವಾರ್ಯವಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಹೇಳಿದ್ದಾರೆ.
ವರದಿಗಳ ಪ್ರಕಾರ, ಭಾರತ ಸರ್ಕಾರ ಇತ್ತೀಚಿನ ದಿನಗಳಲ್ಲಿ ಚೀನಾ ಮತ್ತು ಅದರ ಕಂಪನಿಗಳು, ಅಪ್ಲಿಕೇಶನ್ಗಳ ವಿಷಯದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಅವರು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಜಂಟಿ ಉದ್ಯಮಗಳು ಸೇರಿದಂತೆ ಹೆದ್ದಾರಿ ಯೋಜನೆಗಳಲ್ಲಿ ಭಾಗವಹಿಸಲು ಚೀನಾ ಕಂಪನಿಗಳಿಗೆ ಭಾರತ ಅವಕಾಶ ನೀಡುವುದಿಲ್ಲ ಎಂದು ಗಡ್ಕರಿ ಈಗಾಗಲೇ ಘೋಷಣೆ ಮಾಡಿದ್ದಾರೆ. ವಿದ್ಯುತ್ ಸರಬರಾಜು ಉಪಕರಣಗಳು ಮತ್ತು ಘಟಕಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲು ಭಾರತೀಯ ಕಂಪನಿಗಳಿಗೆ ಸರ್ಕಾರದ ಅನುಮತಿ ಬೇಕಾಗುತ್ತದೆ ಎಂದು ವಿದ್ಯುತ್ ಸಚಿವಾಲಯ ಶುಕ್ರವಾರ ತಿಳಿಸಿದೆ.
ಕಳೆದ ತಿಂಗಳು ಲಡಾಖ್ನಲ್ಲಿ ನಡೆದ ಹಿಂಸಾತ್ಮಕ ಮುಖಾಮುಖಿಯ ಬಳಿಕ ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಮಿಲಿಟರಿ ಉದ್ವಿಗ್ನತೆಯ ಮಧ್ಯೆ ಚೀನಾದ ಮೂಲದ 59 ಉನ್ನತ ಅಪ್ಲಿಕೇಶನ್ಗಳ ನಿಷೇಧ ಮಾಡಲಾಗಿತ್ತು. ಅದರ ಬಳಿಕ ಇದೀಗ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯ ಹಾಗೂ ವಿದ್ಯುತ್ ಸಚಿವಾಲಯ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ.
ಚೀನಾ ವಿರುದ್ಧದ ಕ್ರಮಗಳನ್ನು ಬೆಂಬಲಿಸಿದ ನಿತಿನ್ ಗಡ್ಕರಿ, ಅನುಭವ ಅಥವಾ ಆರ್ಥಿಕ ಬೆಂಬಲವನ್ನು ಕೋರುವ ಪೂರ್ವಭಾವಿ ಷರತ್ತುಗಳ ಕಾರಣದಿಂದಾಗಿ ಸರ್ಕಾರಿ ಒಪ್ಪಂದಗಳಿಂದ ಹೊರಗುಳಿದಿರುವ ಭಾರತೀಯ ಉದ್ಯಮಿಗಳು ಮತ್ತು ಗುತ್ತಿಗೆದಾರರನ್ನು ಪ್ರೋತ್ಸಾಹಿಸುವತ್ತ ಗಮನ ಹರಿಸಲಾಗಿದೆ ಎಂದು ಹೇಳಿದರು.
“ನಮ್ಮ ನಿಯಮಗಳು ಹಳತಾಗಿವೆ. ಗುತ್ತಿಗೆದಾರರಿಗೆ ಕಟ್ಟುನಿಟ್ಟಾದ ಷರತ್ತುಗಳನ್ನು ವಿಧಿಸಲಾಗಿದೆ. ಉದಾಹರಣೆಗೆ ಬೃಹತ್ ಹೆದ್ದಾರಿಗಳು ಮತ್ತು ಸೇತುವೆಗಳಂತಹ ದೊಡ್ಡ ಯೋಜನೆಗಳಿಗೆ ಅನುಭವ ಹೊಂದಿರುವವರಿಗೆ ಮಾತ್ರ ಅನ್ವಯಿಸಬಹುದಾದ ಷರತ್ತುಗಳನ್ನು ನಾವು ಹೊಂದಿದ್ದೇವೆ. ಆದರೆ ನಮ್ಮ ದೇಶದಲ್ಲಿ ಹಿಂದೆ ಇಂತಹ ದೊಡ್ಡ ಯೋಜನೆಗಳನ್ನು ಯಾರೂ ಮಾಡಿಲ್ಲ. ಆದ್ದರಿಂದ ಆ ಒಪ್ಪಂದಗಳನ್ನು ಪಡೆಯಲು ಯಾವುದೇ ಭಾರತೀಯ ಕಂಪನಿಗಳು ಅರ್ಹವಾಗುತ್ತಿರಲಿಲ್ಲ”ಎಂದು ಗಡ್ಕರಿ ಸಂದರ್ಶನದಲ್ಲಿ ಹೇಳಿದ್ದಾರೆ.
“ನಮ್ಮ ನಿಯಮಗಳು ತಪ್ಪಾಗಿವೆ ಎಂಬುನ್ನು ಈಗಾಗಲೇ ನಾನು ನಮ್ಮ ಜನರಿಗೆ ತಿಳಿಸಿದ್ದೇವೆ. ಭಾರತೀಯ ಗುತ್ತಿಗೆದಾರರು ಸಾಮರ್ಥ್ಯವನ್ನು ಹೊಂದಿದ್ದರೂ ಸಹ, ಹಣಕಾಸಿನ ಮತ್ತು ತಾಂತ್ರಿಕ ಅರ್ಹತೆಗಳ ಕಾರಣದಿಂದಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಆಗದೆ ಜಂಟಿ ಉದ್ಯಮಗಳನ್ನು ರೂಪಿಸಬೇಕಾಗಿತ್ತು. ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಚೀನಾ ಕಂಪನಿಗಳೊಂದಿಗೆ ಜಂಟಿ ಉದ್ಯಮ ಹೊಂದಿರುವ ಕಂಪೆನಿಗಳಿಗೆ ಒಪ್ಪಂದಗಳನ್ನು ನೀಡುವುದು ಸರಿಯಲ್ಲ. ಇದು ರಾಷ್ಟ್ರದ ಹಿತದೃಷ್ಟಿಯಿಂದ ಕೆಟ್ಟದ್ದಾಗಿದೆ “ಎಂದು ಅವರು ಹೇಳಿದ್ದಾರೆ.
“ಆತ್ಮನಿರ್ಭರ ಭಾರತವನ್ನು ಚೀನಾಕ್ಕೆ ಸಂಪರ್ಕಿಸುವುದು ಬೇಡ. ನಾವು ಜಗತ್ತಿನಲ್ಲಿ ನಮ್ಮ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಬೇಕು ಮತ್ತು ಇದಕ್ಕಾಗಿ ನಮಗೆ ಕಡಿಮೆ-ವೆಚ್ಚದ ಬಂಡವಾಳ ಬೇಕು, ನಾವು ಎಂಎಸ್ಎಂಇಗಳಲ್ಲಿ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ನಮ್ಮ ತಂತ್ರಜ್ಞಾನ ಮತ್ತು ವಿದೇಶಿ ಹೂಡಿಕೆಯನ್ನು ನವೀಕರಿಸಬೇಕಾಗಿದೆ. ಎಲ್ಲಾ ತಾಂತ್ರಿಕ ಸಾಮರ್ಥ್ಯವನ್ನು ಹೊಂದಬೇಕಾಗಿದೆ “ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.