ದಂತೇವಾಡ: ಛತ್ತೀಸ್ಗಢದ ದಂತೇವಾಡದಲ್ಲಿ ಬುಧವಾರ ಮಹಿಳೆ ಸೇರಿದಂತೆ 18 ಮಂದಿ ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಶರಣಾದ ನಕ್ಸಲರ ಪೈಕಿ ಮಾವೋವಾದಿಗಳ ಸಾಂಸ್ಕೃತಿಕ ಅಂಗ ಚೆತ್ನಾ ನಾಟ್ಯ ಮಂಡ್ಲಿ (ಸಿಎನ್ಎಂ)ಯ ಮುಖ್ಯಸ್ಥ, ಮತ್ತೆ ಇನ್ನೊಂದು ಮಾವೋವಾದಿ ಅಂಗಸಂಘಟನೆಯ ಮುಖ್ಯಸ್ಥ ಕೂಡ ಸೇರಿದ್ದಾನೆ ಎಂದು ವರದಿಗಳು ಹೇಳಿವೆ.
‘ಲೋನ್ ವರಾತು (ನಿಮ್ಮ ಮನೆಗೆ ಹಿಂತಿರುಗಿ)ʼ ಅಭಿಯಾನದಡಿ ದಂತೇವಾಡ ಜಿಲ್ಲೆಯ ಜಿಲ್ಲಾಧಿಕಾರಿ ದೀಪಕ್ ಸೋನಿ, ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ್ ಮತ್ತು ಡೈರೆಕ್ಟರ್ ಜನರಲ್ ಆಫ್ ಸೆಂಟ್ರಲ್ ರಿಸರ್ವ್ ಪೊಲೀಸ್ ಪಡೆ ಡಿ.ಎನ್.ಲಾಲ್ ಅವರ ಮುಂದೆ ನಕ್ಸಲರು ಶರಣಾಗಿದ್ದಾರೆ.
ಡಿ.ಎನ್.ಲಾಲ್ ಅವರು ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದ್ದು, “ನಾವು ಅವರಿಗೆ ಉದ್ಯೋಗ ಪಡೆಯಲು ಸಹಾಯ ಮಾಡುತ್ತೇವೆ. ನಾವು ಅವರಿಗೆ ಟೈಲರ್ ಮತ್ತು ಡ್ರೈವರ್ ಆಗಿ ಕೆಲಸ ಮಾಡಲು ತರಬೇತಿ ನೀಡುತ್ತಿದ್ದೇವೆ. ಅವರು ಡ್ರೈವಿಂಗ್ ಕಲಿತ ನಂತರ ನಾವು ಅವರಿಗೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಕೂಡ ಸಹಕರಿಸುತ್ತೇವೆ” ಎಂದಿದ್ದಾರೆ.
ಶರಣಾಗತರಾದ ನಕ್ಸಲರು ತಮ್ಮ ಶಸ್ತ್ರಾಸ್ತ್ರಗಳನ್ನು ಕೂಡ ಪೊಲೀಸರಿಗೆ ಸಮರ್ಪಿಸಿದ್ದಾರೆ. ಶರಣಾಗತರಾದ ಮಾವೋವಾದಿ ಮುಖಂಡರಿಗೆ ತಲಾ 1 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಎಸ್ಪಿ ಅಭಿಷೇಕ್ ಪಲ್ಲವ ಮಾತನಾಡಿ, “ಈ ಎಲ್ಲಾ ಮಾವೋವಾದಿಗಳು ರೈಲ್ವೆ ಹಳಿಗಳನ್ನು ಕಿತ್ತುಹಾಕುವುದು, ಶಾಲಾ ಕಟ್ಟಡವನ್ನು ಒಡೆಯುವುದು ಮುಂತಾದ ಹಲವಾರು ಪ್ರಮುಖ ಘಟನೆಗಳಲ್ಲಿ ಭಾಗಿಯಾಗಿದ್ದಾರೆ. ಈ ಎಲ್ಲ ಮಾವೋವಾದಿಗಳ ಶರಣಾಗತಿಯನ್ನು ಪ್ರಮುಖ ಯಶಸ್ಸು ಎಂದು ಪೊಲೀಸರು ಪರಿಗಣಿಸಿದ್ದಾರೆ” ಎಂದು ಹೇಳಿದ್ದಾರೆ.
ಮಕ್ಕಳ ಭವಿಷ್ಯಕ್ಕಾಗಿ ಶಾಲೆಗಳನ್ನು ನಿರ್ಮಿಸುವಲ್ಲಿ ಈ ಮಾವೋವಾದಿಗಳನ್ನು ತೊಡಗಿಸಿಕೊಳ್ಳಲು ಅಧಿಕಾರಿಗಳು ಯೋಜಿಸುತ್ತಿದ್ದಾರೆ.
ಜಿಲ್ಲಾಧಿಕಾರಿ ದೀಪಕ್ ಸೋನಿ ಮಾತನಾಡಿ, “ಕೆಲವು ಸಮಯದ ಹಿಂದೆ ಈ ಮಾವೋವಾದಿಗಳು ಶಾಲಾ ಕಟ್ಟಡಗಳನ್ನು ಧ್ವಂಸ ಮಾಡಿದ್ದರು. ಆದರೆ ಈಗ ಅವರು ಮಕ್ಕಳ ಶಿಕ್ಷಣಕ್ಕಾಗಿ ಶಾಲೆಗಳನ್ನು ನಿರ್ಮಿಸಲಿದ್ದಾರೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.