ಪುಣೆ: ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಸೆಂಟ್ರಲ್ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಪುಣೆ ರೈಲು ನಿಲ್ದಾಣದಲ್ಲಿ ಹೊಸತೊಂದು ರೊಬೋಟಿಕ್ ತಂತ್ರಜ್ಞಾನ ಅಳವಡಿಸಿದೆ. ಕ್ಯಾಪ್ಟನ್ ಅರ್ಜುನ್ ಎಂಬ ಹೆಸರಿನ ರೊಬೋಟ್ ರೈಲು ನಿಲ್ದಾಣಕ್ಕೆ ಬರುವ ಜನರನ್ನು ತಪಾಸಣೆ ಮಾಡುವ ಮೂಲಕ ಪ್ರಯಾಣಿಕರೂ ಸೇರಿದಂತೆ ರೈಲ್ವೆ ಅಧಿಕಾರಿಗಳಿಗೂ ಕೊರೋನಾ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಜನರ ಭದ್ರತೆ ಮತ್ತು ರಕ್ಷಣೆಯ ಮಹತ್ತರ ಆಶಯವನ್ನಿಟ್ಟುಕೊಂಡು ಅರ್ಜುನ್ಗೆ ಕೇಂದ್ರೀಯ ರೈಲ್ವೆ ಇಲಾಖೆಯ ಪುಣೆ ನಿಲ್ದಾಣದಲ್ಲಿ ಚಾಲನೆ ನೀಡಲಾಗಿದೆ. ರೈಲ್ವೆ ಬೋರ್ಡ್ನ ಡೈರೆಕ್ಟರ್ ಜನರಲ್ ಆಗಿರುವ ಅರುಣ್ ಕುಮಾರ್ ಅರ್ಜುನ್ಗೆ ಅಧಿಕೃತ ಚಾಲನೆ ನೀಡಿದ್ದಾರೆ. ಸೆಂಟ್ರಲ್ ರೈಲ್ವೆ ಯ ಜನರಲ್ ಮ್ಯಾನೇಜರ್ ಸಂಜೀವ ಮಿತ್ತಲ್ ಅವರು ಕ್ಯಾಪ್ಟನ್ ಅರ್ಜುನ್ ಎಂಬ ತಂತ್ರಜ್ಞಾನ ಆಧಾರಿತ ರಕ್ಷಣಾ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ರೊಬೋಟ್ನಲ್ಲಿ ಸೆನ್ಸಾರ್ ಆಧರಿತ ತಂತ್ರಜ್ಞಾನ ಅಳವಡಿಸಲಾಗಿದ್ದು, ಒಂದು ಪಿಟಿಝಡ್ ಕೆಮರಾ , ಒಂದು ಡೂಮ್ ಕ್ಯಾಮೆರಾವನ್ನು ಸಹ ಅಳವಡಿಸಲಾಗಿದೆ. ಈ ಕ್ಯಾಮೆರಾಗಳು ಸಮಾಜ ವಿದ್ರೋಹಿ ಕೃತ್ಯಗಳು ಮತ್ತು ಅಪರಾಧಿ ಕೃತ್ಯಗಳನ್ನು ಪತ್ತೆ ಹಚ್ಚುವಲ್ಲಿ ರೈಲ್ವೆ ಇಲಾಖೆಗೆ ಸಹಾಯ ಮಾಡಲಿದೆ. ಜೊತೆಗೆ ಇದರಲ್ಲಿ ಮೋಷನ್ ಆಕ್ಟಿವೇಟೆಡ್ ಸ್ಪಾಟ್ಲೈಟ್ H -264 ಪ್ರೊಸೆಸರ್, ಇಂಟರ್ನಲ್ ಸ್ಟೋರೇಜ್ ಮತ್ತು ರೆಕಾರ್ಡಿಂಗ್ ಸಿಸ್ಟಂಗಳನ್ನೂ ಅಳವಡಿಸಲಾಗಿದ್ದು, ಇದರಿಂದ ನೆಟ್ವರ್ಕ್ ಸಂಪರ್ಕ ಕಡಿತಗೊಂಡಾಗಲೂ ಅಲ್ಲಿ ನಡೆಯುತ್ತಿರುವ ಎಲ್ಲಾ ಘಟನೆಗಳನ್ನು ಕ್ರೋಢೀಕರಿಸಿಟ್ಟುಕೊಳ್ಳುವುದಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ.
ಈ ಎಲ್ಲ ವ್ಯವಸ್ಥೆಗಳ ಜೊತೆಗೆ ಕ್ಯಾಪ್ಟನ್ ಅರ್ಜುನ್ನಲ್ಲಿ ಕೊರೋನಾ ಟೆಸ್ಟಿಂಗ್ಗೆ ಬಳಸುವ ಸಾಧನಗಳನ್ನೂ ಅಳವಡಿಸಲಾಗಿದೆ. ಪ್ರಯಾಣಿಕರ ತಪಾಸಣೆಗೆ ಪೂರಕವಾಗುವಂತೆ ಥರ್ಮಲ್ ಸ್ಕ್ರೀನಿಂಗ್ ಸಿಸ್ಟಂ, ವ್ಯಕ್ತಿಯ ಟೆಂಪರೇಚರ್ ರೆಕಾರ್ಡ್ ಮಾಡಿಡುವ ಸಿಸ್ಟಂ, ತಪಾಸಣೆಯ ನಂತರ 5 ಸೆಕೆಂಡ್ ಗಳಲ್ಲಿಯೇ ಫಲಿತಾಂಶವನ್ನು ತೋರಿಸುವ ಡಿಜಿಟಲ್ ಡಿಸ್ಪ್ಲೇ ವ್ಯವಸ್ಥೆ, ಟೆಂಪರೇಚರ್ ವ್ಯತ್ಯಾಸವಿದ್ದಲ್ಲಿ ಅದನ್ನು ಅಧಿಕಾರಿಗಳಿಗೆ ತಿಳಿಸಲು ಅಟೋಮೆಟಿಕ್ ಅಲರಾಂ ವ್ಯವಸ್ಥೆ, ಟೂ ವೇ ಕಮ್ಯುನಿಕೇಶನ್ ಮಾಡೆಲ್, ಧ್ವನಿ ಮತ್ತು ವಿಡಿಯೋ, ಸ್ಥಳೀಯ ಭಾಷೆಯಲ್ಲಿ ಮಾಹಿತಿ ನೀಡುವ ವ್ಯವಸ್ಥೆಯನ್ನೂ ಈ ರೊಬೋಟ್ನಲ್ಲಿ ಮಾಡಲಾಗಿದೆ. ಅಲ್ಲದೆ ಇದು ಸೆನ್ಸಾರ್ ಆಧಾರಿತ ಸ್ಯಾನಿಟೈಸರ್ ಸಿಸ್ಟಂ, ಮಾಸ್ಕ್ ಡಿಸ್ಪೆನ್ಸರ್ಗಳನ್ನೂ ಒಳಗೊಂಡಿದೆ. ಬ್ಯಾಟರಿ ಬ್ಯಾಕಪ್ ಬಳಸಿ ಫ್ಲೋರ್ಗಳನ್ನು ಸ್ವಚ್ಛ ಮಾಡುವುದಕ್ಕೂ ಇದು ಸಹಕಾರಿಯಾಗಿದೆ. ನಾಲ್ಕು ಚಕ್ರಗಳನ್ನು ಬಳಸಿಕೊಂಡು ಇದನ್ನು ಕಾರ್ಯ ನಿರ್ವಹಿಸುವಂತೆ ತಯಾರಿಸಲಾಗಿದೆ.
ಪ್ರಯಾಣಿಕರಿಗೆ ಕೇವಲ ಅರೋಗ್ಯ ಭದ್ರತೆ ಮಾತ್ರವಲ್ಲದೆ ಇನ್ನಿತರ ಭದ್ರತೆಯನ್ನು ನೀಡುವಂತೆಯೂ ರೈಲ್ವೆ ಇಲಾಖೆ ಇದರಲ್ಲಿ ತಂತ್ರಜ್ಞಾನ ಅಳವಡಿಕೆ ಮಾಡಿದೆ. ಒಟ್ಟಿನಲ್ಲಿ ಕೊರೋನಾದಿಂದ ಜನರನ್ನು ರಕ್ಷಿಸಲು ಮತ್ತು ಅವರಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆಯ ಕ್ಯಾಪ್ಟನ್ ಅರ್ಜುನ್ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂಬ ವಿಶ್ವಾಸ ಇಲಾಖೆಯದ್ದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.