ಚೆನ್ನೈ: ತಮಿಳುನಾಡು ಮಧುರೈ ಜಿಲ್ಲೆಯ 13 ವರ್ಷದ ಬಾಲಕಿ ನೇತ್ರಾಳನ್ನು ವಿಶ್ವಸಂಸ್ಥೆಯ ಅಭಿವೃದ್ಧಿ ಮತ್ತು ಶಾಂತಿ ಮಂಡಳಿ (United Nations Association for Development and Peace)ಯ “ಬಡವರಿಗಾಗಿನ ಗುಡ್ವಿಲ್ ಅಂಬಾಸಿಡರ್” ಆಗಿ ಆಯ್ಕೆ ಮಾಡಲಾಗಿದೆ. ಈಕೆಯ ತಂದೆ ಕ್ಷೌರಿಕರಾಗಿದ್ದಾರೆ.
ತಂದೆ ತನ್ನ ವಿದ್ಯಾಭ್ಯಾಸಕ್ಕಾಗಿ ಎತ್ತಿಟ್ಟಿದ್ದ 5 ಲಕ್ಷ ರೂಪಾಯಿಗಳನ್ನು ಆಕೆ ಲಾಕ್ ಡೌನ್ ಸಂದರ್ಭದಲ್ಲಿ ಬಡವರಿಗೆ ಆಹಾರವನ್ನು ನೀಡುವ ಸಲುವಾಗಿ ವ್ಯಯಿಸಿದ್ದಾಳೆ. ಆಕೆಯ ಬಡವರಿಗಾಗಿನ ಈ ಕಾಳಜಿಯನ್ನು ಗಮನಿಸಿ ಆಕೆಯನ್ನು ಗುಡ್ವಿಲ್ ಅಂಬಾಸಿಡರ್ ಆಗಿ ನೇಮಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ನೇತ್ರಾಳ ತಂದೆ ಸಿ.ಮೋಹನ್ ಅವರು ಮಧುರೈನಲ್ಲಿ ಸಲೂನ್ ನಡೆಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಅವರು ಮಗಳ ಶಿಕ್ಷಣಕ್ಕಾಗಿ ಹಣವನ್ನು ಉಳಿತಾಯ ಮಾಡುತ್ತಿದ್ದಾರೆ. ಅವರಿಗೆ ಮಗಳನ್ನು ನಾಗರಿಕ ಸೇನಾ ಪರೀಕ್ಷೆಗೆ ಸನ್ನದ್ಧಗೊಳಿಸುವ ಕನಸಿದೆ. ಆದರೆ ಕೊರೋನಾವೈರಸ್ ಸಾಂಕ್ರಮಿಕ ರೋಗದ ಸಂದರ್ಭದಲ್ಲಿ ಜನರು ಸಂಕಷ್ಟದಲ್ಲಿರುವುದನ್ನು ಗಮನಿಸಿದ ನೇತ್ರಾ ತನ್ನ ತಂದೆಯನ್ನು ಒಪ್ಪಿಸಿ ಕೂಡಿಟ್ಟ ಹಣವನ್ನು ಬಡವರಿಗೆ ನೀಡುವಂತೆ ಪ್ರೇರೇಪಿಸಿದ್ದಾಳೆ.
ನೇತ್ರಾಳ ಈ ಉದಾರ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿಯವರೂ ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಶ್ಲಾಘಿಸಿದ್ದಾರೆ.
“ಬಾಲಕಿಯ ಈ ನಿಸ್ವಾರ್ಥತೆ ಮತ್ತು ದಯೆಯ ಕಾರ್ಯವನ್ನು ಗುರುತಿಸಿ ಪುರಸ್ಕರಿಸಬೇಕು” ಎಂದು ಯುಎನ್ಎಡಿಎಪಿ ಹೇಳಿದೆ.
ಚೆನ್ನೈನಲ್ಲಿರುವ ವಿಶ್ವಸಂಸ್ಥೆಯ ಅಂಗಸಂಸ್ಥೆಯಲ್ಲಿ ಆಕೆಯನ್ನು “ಗುಡ್ವಿಲ್ ಅಂಬಾಸಿಡರ್” ಆಗಿ ನೇಮಿಸಲಾಯಿತು.
ಗುಡ್ವಿಲ್ ರಾಯಭಾರಿಯಾಗಿ ನೇತ್ರಾಗೆ ಯುಎನ್ ಎನ್ಜಿಒ ಸಮ್ಮೇಳನಗಳಲ್ಲಿ ಮಾತನಾಡಲು ಮತ್ತು ನಾಗರಿಕ ಸಮಾಜ ವೇದಿಕೆಗಳು ಮತ್ತು ಸಮ್ಮೇಳನಗಳನ್ನು ಉದ್ದೇಶಿಸಿ ಮಾತನಾಡಲು ಅವಕಾಶ ನೀಡಲಾಗುತ್ತದೆ. ಇದರಲ್ಲಿ ನಾಯಕರು, ಶಿಕ್ಷಣ ತಜ್ಞರು, ರಾಜಕಾರಣಿಗಳು ಮತ್ತು ನಾಗರಿಕರೊಂದಿಗೆ ಸಂವಹನ ನಡೆಸಲು ನೇತ್ರಾಗೆ ಅವಕಾಶ ಸಿಗಲಿದೆ, ಬಡ ಜನರನ್ನು ತಲುಪಲು ಆಕೆಗೆ ಪ್ರೋತ್ಸಾಹ ಸಿಗುತ್ತದೆ.
ಇದಲ್ಲದೆ, ನೇತ್ರಾಗೆ ದಿ ಡಿಕ್ಸನ್ನಿಂದ ವಿದ್ಯಾರ್ಥಿವೇತನ 1,00,000 ರೂಪಾಯಿ ಸಿಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.