ನವದೆಹಲಿ: ಕೊರೋನಾ ಕಾಟಕ್ಕೆ ದೇಶ ಅಕ್ಷರಶಃ ಕಂಗೆಟ್ಟು ಹೋಗಿದೆ. ಒಂದು ಕಡೆಯಲ್ಲಿ ಸೋಂಕು ಹರಡುವ ಭೀತಿ, ಮತ್ತೊಂದೆಡೆ ಅಸ್ತವ್ಯಸ್ತಗೊಂಡಿರುವ ಜನಜೀವನ. ಇಂತಹ ಸ್ಥಿತಿಯಲ್ಲಿ ಮಧ್ಯಮ ಮತ್ತು ಬಡ ವರ್ಗದ ಜನರು ತಲೆಗೆ ಕೈ ಹೊತ್ತು ಕುಳಿತಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ನಿಯಂತ್ರಣ ಕ್ರಮಗಳ ಜೊತೆಗೆ, ಸಾರ್ವಜನಿಕ ಸೇವೆಗಳನ್ನು ಬಳಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹರಸಾಹಸ ಪಡುತ್ತಿದೆ. ದೇಶವೇ ಲಾಕ್ಡೌನ್ ಆಗಿರುವಾಗ ಅಗತ್ಯ ವಸ್ತುಗಳನ್ನು ದೇಶದ ಮೂಲೆ ಮೂಲೆಗೆ ತಲುಪಿಸಲು ಸಾರ್ವಜನಿಕ ಸಾರಿಗೆ ಸೇವೆಯಾದ ರೈಲ್ವೇ ಸೇವೆಯನ್ನೂ ಬಳಕೆ ಮಾಡಿಕೊಂಡಿದ್ದು, ಆ ಮೂಲಕ ಮಾರಕ ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿದೆ.
ಇನ್ನು ಸಾರ್ವಜನಿಕ ಸಾರಿಗೆ ಸೇವೆಯಾದ ರೈಲ್ವೇ ಇಲಾಖೆ ಪ್ರಯಾಣಿಕರನ್ನು ಹೊತ್ತೊಯ್ಯುವುದನ್ನು ನಿಲ್ಲಿಸಿದ್ದರೂ, ದೇಶದ ಉದ್ದಗಲಕ್ಕೂ ಸಂಚರಿಸಿ ಅಗತ್ಯ ವೈದ್ಯಕೀಯ, ಆಹಾರ ಮೊದಲಾದ ವಸ್ತುಗಳನ್ನು ತಲುಪಿಸುವ ಶ್ಲಾಘನೀಯ ಕಾರ್ಯ ಮಾಡುತ್ತಿದೆ. ಮಾರ್ಚ್ 21 ರಿಂದಲೇ ಈ ಸೇವೆಯಲ್ಲಿ ತೊಡಗಿಸಿಕೊಂಡಿರುವ ರೈಲ್ವೇ ಇಲಾಖೆ ಈ ವರೆಗೆ 6.7 ಲಕ್ಷ ವ್ಯಾಗನ್ಗಳಷ್ಟು ವಸ್ತುಗಳನ್ನು ಸಾಗಾಟ ಮಾಡಿದ ಕೀರ್ತಿಗೆ ಭಾಜನವಾಗಿದೆ. ಈ ಕುರಿತಂತೆ ರೈಲ್ವೇ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇನ್ನು ಅಗತ್ಯ ವೈದ್ಯಕೀಯ ಸಾಮಗ್ರಿಗಳಾದ ಪಿಪಿಇ, ಔಷಧಗಳು, ಅಕ್ಕಿ, ಗೋಧಿ, ಸಾಂಬಾರ ಪದಾರ್ಥಗಳ ಸಾಗಾಟ ಸೇರಿದಂತೆ ಸುಮಾರು 2500 ಸಾವಿರ ಐಸೋಲೇಶನ್ ವಾರ್ಡ್ ಗಳನ್ನು ನಿರ್ಮಿಸಿ, ಆ ಮೂಲಕ 40,000 ಹಾಸಿಗೆಗಳನ್ನು ನೀಡಿ ರೈಲು ಆಸ್ಪತ್ರೆಗಳನ್ನೇ ನಿರ್ಮಿಸಿದ ಕೀರ್ತಿಯೂ ಭಾರತೀಯ ರೈಲ್ವೇಯದ್ದು. ಆ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಗಣನೀಯ ಸೇವೆಯನ್ನು ರೈಲ್ವೇ ಇಲಾಖೆ ನೀಡಿದೆ ಎಂದರೂ ತಪ್ಪಲ್ಲ. ಜೊತೆಗೆ ನಿರ್ಗತಿಕರಿಗೆ ಆಹಾರ, ಸ್ಯಾನಿಟೈಸರ್, ಮಾಸ್ಕ್ಗಳನ್ನು ತಯಾರಿ ಮಾಡುವಲ್ಲಿಯೂ ಕೆಲಸ ಮಾಡಿರುವ ರೈಲ್ವೇ ಇಲಾಖೆ ಇತರ ಇಲಾಖೆಗಳ ಜೊತೆಗೆ ಜನಸಾಮಾನ್ಯರಿಗೂ ಸೇವೆ ಎಂಬ ಪದದ ನಿಜಾರ್ಥವನ್ನು ತಿಳಿಸಿದೆ ಎನ್ನಬಹುದು.
ಏಪ್ರಿಲ್ 2 ರಿಂದ ಏಪ್ರಿಲ್ 8 ರ ವರೆಗೆ ಗಮನಿಸುವುದಾದರೆ, ಇಲಾಖೆ 2,58,503 ವ್ಯಾಗನ್ ಸರಕುಗಳನ್ನು ವಿತರಿಸಿದ್ದು, ಅಗತ್ಯ ವಸ್ತುಗಳಾದ 21,247 ವ್ಯಾಗನ್ ಆಹಾರ ಧಾನ್ಯಗಳು, 11,336 ವ್ಯಾಗನ್ ಗೊಬ್ಬರ, 1,24,759 ವ್ಯಾಗನ್ ಕಲ್ಲಿದ್ದಲು ಮತ್ತು 7,665 ವ್ಯಾಗನ್ ಪೆಟ್ರೋಲಿಯಂ ಉತ್ಪನ್ನಗಳನ್ನು ರವಾನೆ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ರೈತರಿಗೆ ಸಮಸ್ಯೆಯಾಗದಂತೆ ಬೇಕಾದ ರಸಗೊಬ್ಬರ ಮತ್ತು ರಾಸಾಯನಿಕಗಳನ್ನು ಸಾಗಿಸುವ ಮೂಲಕವೂ ರೈಲ್ವೇ ಗಮನ ಸೆಳೆದಿದೆ.
ಮಾರ್ಚ್ 24 ರಿಂದಲೇ ಸಾರ್ವಜನಿಕರನ್ನು ಕೊಂಡೊಯ್ಯುವುದನ್ನು ನಿಲ್ಲಿಸಿರುವ ರೈಲುಗಳು, ಇದೀಗ ಜನರಿಗೆ ಬೇಕಾದ ಅಗತ್ಯ ವಸ್ತುಗಳು, ವೈದ್ಯಕೀಯ ಸರಕುಗಳ ಸಾಗಾಟದ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ಸರ್ಕಾರಗಳ ಜೊತೆಗೆ ಕೈ ಜೋಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.