ಭೋಪಾಲ್: ದೇಶದ ಜನರ ನಿದ್ದೆಗೆಡಿಸಿರುವ ಕೊರೋನಾ ಸೋಂಕು ಮಧ್ಯ ಪ್ರದೇಶದಲ್ಲಿಯೂ ತನ್ನ ಕರಾಳತೆಯನ್ನು ಪ್ರದರ್ಶಿಸಿದೆ. ಈ ಸೋಂಕಿನಿಂದ ಮಧ್ಯ ಪ್ರದೇಶದ ಜನತೆಯನ್ನು ಕಾಪಾಡುವ ಸಲುವಾಗಿ ಅಲ್ಲಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಐಫಾ ಕಾರ್ಯಕ್ರಮ ನಡೆಸಲು ಇಟ್ಟಿದ್ದ 700 ಕೋಟಿ ರೂ. ಗಳನ್ನು ಕೊರೋನಾ ವಿರುದ್ದ ಹೋರಾಟ ನಡೆಸುವ ಸಲುವಾಗಿ ಮುಖ್ಯಮಂತ್ರಿ ರಿಲೀಫ್ ಫಂಡ್ ಗೆ ನೀಡಿದೆ.
ಭೋಪಾಲ್ ಮತ್ತು ಇಂದೋರ್ನಲ್ಲಿ ಐಫಾ (ಅಂತರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ) ಯ ಅದ್ದೂರಿ ಕಾರ್ಯಕ್ರಮ ನಡೆಸುವ ಸಲುವಾಗಿ ತೆಗೆದಿರಿಸಿದ್ದ ಫಂಡ್ ಅನ್ನು ಕೋವಿಡ್-19 ವಿರುದ್ದ ದ ಹೋರಾಟಕ್ಕಾಗಿ ನೀಡುವ ಮೂಲಕ ರಾಜವನ್ನು ಕೊರೋನಾ ಮುಕ್ತವನ್ನಾಗಿ ಮಾಡಲು ಶ್ರಮ ವಹಿಸುತ್ತಿದೆ. ಮಾರ್ಚ್ 2020 ರಲ್ಲಿ ಸುಮಾರು 700 ಕೋಟಿ ವೆಚ್ಚದಲ್ಲಿ ನಡೆಸಬೇಕಾಗಿದ್ದ ಸುಮಾರು 90 ದೇಶಗಳ ಭಾಗವಹಿಸುವಿಕೆಯ ಐಫಾದ ಹಣವನ್ನು ಇಂತಹ ತುರ್ತು ಪರಿಸ್ಥಿತಿಯಲ್ಲಿ ರಾಜ್ಯದ ಆರೋಗ್ಯದ ಕಾರಣಕ್ಕಾಗಿ ಬಳಕೆ ಮಾಡುತ್ತಿರುವುದಾಗಿ ಚೌಹಾಣ್ ತಿಳಿಸಿದ್ದಾರೆ.
ಕಮಲ್ ನಾಥ್ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಈ ಮೆಗಾ ಈವೆಂಟ್ ಆಯೋಜಿಸುವ ಸಲುವಾಗಿ ರೂಪುರೇಷೆಗಳನ್ನು ಹಾಕಿಕೊಳ್ಳಲಾಗಿತ್ತು. ಆದರೆ ಚೌಹಾಣ್ ಅಧಿಕಾರಾವಧಿಯಲ್ಲಿ ಇದನ್ನು ಮರುಪರಿಶೀಲನೆ ಮಾಡಿ ಆ ಹಣವನ್ನು ಕೃಷಿ ಸಾಲ ಮನ್ನಾ ಮತ್ತು ಪ್ರವಾಹ ಪರಿಶೀಲನೆಗಾಗಿ ಬಳಸುವಂತೆಯೂ ತಿಳಿಸಲಾಗಿತ್ತು. ಆದರೆ ಇದೀಗ ಕೊರೋನಾ ಸೋಂಕು ಜನರನ್ನು ತಲ್ಲಣಗೊಳಿಸಿದ್ದು, ಆ ಕಾರಣದಿಂದ ಐಫಾ ರದ್ದುಗೊಳಿಸಿ ಆ ಹಣವನ್ನು ಕೊರೋನಾ ವಿರುದ್ದ ಹೋರಾಟಕ್ಕೆ ಡಳಸಲಾಗುತ್ತಿದೆ.
ಮಧ್ಯ ಪ್ರದೇಶದಲ್ಲಿ ಈ ವರೆಗೆ 250 ಕ್ಕೂ ಹೆಚ್ಚು ಸೋಂಕಿತರಿದ್ದು, 10 ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಸೋಂಕು ವ್ಯಾಪಿಸದಂತೆ ಲಾಕ್ಡೌನ್ ಸೇರಿದಂತೆ ಇನ್ನಿತರ ನಿಯಂತ್ರಣ ಕ್ರಮಗಳನ್ನೂ ರಾಜ್ಯದಲ್ಲಿ ಜಾರಿಗೆ ತರಲಾಗಿದೆ. ಇಂದೋರ್, ಭೋಪಾಲ್ ಸೇರಿದಂತೆ ಮೂರು ನಗರಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಅಲ್ಲದೆ ಅಗತ್ಯ ವಸ್ತುಗಳ ಪೂರೈಕೆಗೂ ಪೂರಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ ಆಗುಹೋಗುಗಳ ಬಗ್ಗೆ ಜಿಲ್ಲಾಡಳಿತ ಮತ್ತು ಹಿರಿಯ ಅಧಿಕಾರಿಗಳ ಜೊತೆಗೂ ಚರ್ಚೆ ನಡೆಸಲಾಗಿದ್ದು, ಸೋಂಕು ನಿಯಂತ್ರಣಕ್ಕೆ ಬೇಕಾದ ಕ್ರಮಗಳನ್ನು ಕೈ ಗೊಳ್ಳಲಾಗಿದೆ ಎಂದೂ ಚೌಹಾಣ್ ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.