ಜೈಪುರ : ಜಾಗತಿಕ ಸಾಂಕ್ರಾಮಿಕ ಕೊರೋನಾ ವಿರುದ್ಧದ ಹೋರಾಟದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ರಾಜಸ್ಥಾನ ರಾಜ್ಯಾದ್ಯಂತ ಸೇವಾ ಕಾರ್ಯಗಳನ್ನು ಪ್ರಾರಂಭಿಸಿದ್ದಾರೆ. ಸಂಘವು ಸ್ಥಳೀಯ ಆಡಳಿತದ ಸಹಾಯದಿಂದ ಅಗತ್ಯವಿರುವವರಿಗೆ ಸಹಾಯವನ್ನು ನೀಡುತ್ತಿದೆ.
ಪ್ರತಿ ಜಿಲ್ಲೆಯ ಎಲ್ಲಾ ಹಂತಗಳಲ್ಲಿ ಸ್ವಯಂಸೇವಕರು ಆಡಳಿತ ವ್ಯವಸ್ಥೆಯೊಂದಿಗೆ ಸಮನ್ವಯ ಸಾಧಿಸುವ ಮೂಲಕ ವಿವಿಧ ರೀತಿಯ ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ. ರಾಜಸ್ಥಾನದಲ್ಲಿನ ಸಂಘದ 898 ಶಾಖೆಗಳ ಮೂಲಕ ಮಾರ್ಚ್ 15 ರಿಂದ ಇಲ್ಲಿಯವರೆಗೆ 1 ಲಕ್ಷ 51 ಸಾವಿರ 162 ಕುಟುಂಬಗಳಿಗೆ 8213 ಸ್ವಯಂಸೇವಕರು ಸೇವೆ ಸಲ್ಲಿಸುತ್ತಿದ್ದಾರೆ ಎಂದು ರಾಜಸ್ಥಾನದ ಸಂಘಚಾಲಕರಾದ ಡಾ.ರಮೇಶ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಔಷಧಿ ವಿತರಣೆ, ಕರಪತ್ರ ವಿತರಣೆ, ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಜನಿಕ ಜಾಗೃತಿ, ಸಂಚಾರ ವ್ಯವಸ್ಥೆ ಪಾಲನೆ, ಲಾಕ್ಡೌನ್ ಪಾಲನೆ ಜಾಗೃತಿ, ಕುಡಿಯುವ ನೀರು, ಆಹಾರ ಪ್ಯಾಕೆಟ್ಗಳು / ಒಣ ಕಿರಾಣಿ ವಸ್ತು ವಿತರಣೆ, ವೃದ್ಧರ ಆರೈಕೆ, ನೈರ್ಮಲ್ಯ, ಸ್ಯಾನಿಟೈಜರ್ ವಿತರಣೆ, ಮಾಸ್ಕ್ ತಯಾರಿಕೆ ಮತ್ತು ವಿತರಣೆ, ಸೋಪ್ ವಿತರಣೆ-ಹೀಗೆ ಸ್ವಯಂಸೇವಕರು ಅನೇಕ ರೀತಿಯ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಸಮಾಜದಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು ಸಹಕರಿಸುತ್ತಿದ್ದಾರೆ.
ಇತ್ತೀಚೆಗೆ, ಜೈಪುರದ ರಾಜ್ಯದಲ್ಲೇ ಅತಿದೊಡ್ಡ ಆಸ್ಪತ್ರೆಯಲ್ಲಿ ಮಾಸ್ಕ್ಗಳ ಕೊರತೆಯಿದ್ದಾಗ, ಸ್ವಯಂಸೇವಕರು ತಮ್ಮ ಕುಟುಂಬ ಸದಸ್ಯರ ಸಹಕಾರದೊಂದಿಗೆ 5000 ಮಾಸ್ಕ್ಗಳನ್ನು ಸಿದ್ಧಪಡಿಸಿ ವಿತರಿಸಿದರು. ಈ ಕುಟುಂಬಗಳು ಈವರೆಗೆ 87 ಸಾವಿರ 775 ಮಾಸ್ಕ್ಗಳನ್ನು ತಯಾರಿಸಿವೆ.
ರಾಜಸ್ಥಾನದಲ್ಲಿ, ಬಡ ಮತ್ತು ಅಲೆಮಾರಿ ವಸಾಹತುಗಳಿಗೆ ಆಹಾರ ಪ್ಯಾಕೆಟ್ಗಳನ್ನು ಪ್ರತಿದಿನ ಕಳುಹಿಸಲಾಗುತ್ತಿದೆ. ಇಲ್ಲಿಯವರೆಗೆ 5 ಲಕ್ಷ 43,100 ಆಹಾರ ಪ್ಯಾಕೆಟ್ಗಳನ್ನು ವಿತರಿಸಲಾಗಿದೆ. 65033 ಪಡಿತರ ಸಾಮಗ್ರಿ ಕಿಟ್ಗಳನ್ನು ರಾಜಸ್ಥಾನದಾದ್ಯಂತ 5 ದಿನಗಳಿಂದ 20 ದಿನಗಳವರೆಗೆ ವಿತರಿಸಲಾಗಿದೆ. ಹಾಗೆಯೇ ಪ್ರಾಣಿ ಪಕ್ಷಿಗಳಿಗೆ ಆಹಾರ- ಮೇವಿನ ವ್ಯವಸ್ಥೆಯಲ್ಲಿ ಕೂಡ ಸ್ವಯಂಸೇವಕರ ಗುಂಪುಗಳು ತೊಡಗಿಕೊಂಡಿದ್ದಾರೆ.
ವಲಸೆ ಕಾರ್ಮಿಕರ ಮನವೊಲಿಕೆ, ಅವರಿಗೆ ಆಹಾರ ಮತ್ತು ವಸತಿ ವ್ಯವಸ್ಥೆ, ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ, ನಿರಂತರ ರಕ್ತದಾನದ ವ್ಯವಸ್ಥೆ-ಹೀಗೆ ಸಂದರ್ಭಕ್ಕೆ ತಕ್ಕಂತೆ ಎಲ್ಲ ರೀತಿಯ ಸೇವಾ ಕಾರ್ಯಗಳಿಗೆ ಸ್ವಯಂಸೇವಕರು ಸಿದ್ಧರಾಗಿ ಅಖಾಡಕ್ಕೆ ಇಳಿದಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರ ಸೇವಾ ಪ್ರಮುಖ್ ಶಿವಲೆಹರಿ ಅವರ ಪ್ರಕಾರ, “ಸಂಘವು ಪ್ರಾರಂಭದಿಂದಲೂ, ಇಡೀ ಮಾನವೀಯತೆಗಾಗಿ ತಾರತಮ್ಯವಿಲ್ಲದೆ ಸಂತ್ರಸ್ತರಿಗೆ ಸೇವಾ ಕಾರ್ಯವನ್ನು ಮಾಡುತ್ತಿದೆ. ಅದು ಯಾವುದೇ ಜಾತಿ, ಮತ, ಧರ್ಮದವರೇ ಆಗಿರಲಿ, ಸ್ವಯಂಸೇವಕರು ಸೇವೆಯ ಹಾದಿಯಲ್ಲಿ ನಡೆಯುವಾಗ ‘ಚರೈವೇತಿ-ಚರೈವೇತಿ’ ಎಂಬ ಧ್ಯೇಯದೊಂದಿಗೆ ಮುನ್ನಡೆಯುತ್ತಾರೆʼʼ ಎಂದು ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.