ಹೈದರಾಬಾದ್: ಮಾರ್ಚ್ 12 ವಿಶ್ವ ಮೂತ್ರಪಿಂಡ ದಿನ. ಮೂತ್ರಪಿಂಡದ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸುವಂತೆ ಎಚ್ಚರಿಕೆಯನ್ನು ನೀಡುವ ಉದ್ದೇಶವನ್ನು ಈ ದಿನ ಹೊಂದಿದೆ. ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗಳು ಸೈಲೆಂಟ್ ಕಿಲ್ಲರ್ ಆಗಿದೆ ಎಂಬ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.
ಮನುಷ್ಯನ ಆರೋಗ್ಯಕ್ಕೆ ಮೂತ್ರಪಿಂಡದ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಮೂತ್ರಪಿಂಡದ ಕಾಯಿಲೆಯ ನಿರಂತರತೆ ಮತ್ತು ಪ್ರಭಾವವನ್ನು ಕಡಿಮೆ ಮಾಡುವ ಬಗ್ಗೆ ಮುಂಜಾಗ್ರತೆ ವಹಿಸುವುದು ಮತ್ತು ವಿಶ್ವದಾದ್ಯಂತ ಅದಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ತಿಳಿಸುವ ಕಾರ್ಯಕ್ರಮಗಳನ್ನು ಈ ದಿನ ನಡೆಸಲಾಗುತ್ತದೆ.
ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಬೊಜ್ಜು ಮೂತ್ರಪಿಂಡದ ಕಾಯಿಲೆಗಳಿಗೆ ಕಾರಣವಾಗುವ ಕೆಲವು ಅಪಾಯಕಾರಿ ಅಂಶಗಳು ಮತ್ತು ಕೆಲವೊಮ್ಮೆ ಇವುಗಳು ಮಾರಣಾಂತಿಕವಾಗಿರುತ್ತವೆ ಎಂದು ಆರೋಗ್ಯ ತಜ್ಞ ಡಾ. ಧನಂಜಯ ಕೆ. ಎಲ್ ಹೇಳುತ್ತಾರೆ.
ಮೂತ್ರಪಿಂಡಗಳ ಆರೋಗ್ಯವನ್ನು ತಿಳಿದುಕೊಳ್ಳುವ ಏಕೈಕ ಮತ್ತು ಉತ್ತಮ ಮಾರ್ಗವೆಂದರೆ ಪರೀಕ್ಷೆಗಳಿಗೆ ಒಳಗಾಗುವುದು. ಆಯಾಸ, ಅಧಿಕ ರಕ್ತದೊತ್ತಡ ಮತ್ತು ಪಾದಗಳ ಊತದಂತಹ ರೋಗಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯು ತನ್ನ ಮೂತ್ರಪಿಂಡಗಳ ಬಗ್ಗೆ ಜಾಗರೂಕರಾಗಿರಬೇಕು. ರಕ್ತದಲ್ಲಿನ ಸಕ್ಕರೆ ಅಂಶ, ಕ್ರಿಯೇಟಿನೈನ್ ಮತ್ತು ಇಜಿಎಫ್ಆರ್ಗಾಗಿ ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು.
ಭಾರತದಲ್ಲಿ 50 ದಶಲಕ್ಷಕ್ಕೂ ಹೆಚ್ಚು ಜನರು ಮಧುಮೇಹ ಹೊಂದಿದ್ದಾರೆಂದು ಅಂದಾಜಿಸಲಾಗಿದೆ. ಅವರು ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಗಳ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಜನರ ಜೀವನಶೈಲಿಯ ಆಯ್ಕೆಗಳಿಂದಾಗಿ ಈ ರೋಗ ಇನ್ನಷ್ಟು ಹೆಚ್ಚು ಅಪಾಯಕಾರಿಯಾಗುತ್ತದೆ. ಆದ್ದರಿಂದ, ಮೂತ್ರಪಿಂಡಕ್ಕೆ ಸಂಬಂಧಿಸಿದ ತೊಡಕುಗಳಿಗೆ ಕಾರಣವಾಗುವ ಮಧುಮೇಹದ ಸಾಧ್ಯತೆಯನ್ನು ತಡೆಗಟ್ಟಲು ಆರೋಗ್ಯಯುತ ಜೀವನವನ್ನು ನಡೆಸುವ ಮಹತ್ವವನ್ನು ಅರಿತುಕೊಳ್ಳುವುದು ಬಹಳ ಮುಖ್ಯ.
“ಮಾನವನ ದೇಹದಲ್ಲಿ, ಮೂತ್ರಪಿಂಡಗಳು ಅತ್ಯಂತ ಅದ್ಭುತವಾದ ಅಂಗಗಳು. ಇದು ವ್ಯಕ್ತಿಯ ಯೋಗಕ್ಷೇಮವನ್ನು ಖಚಿತಪಡಿಸುತ್ತದೆ. ಈ ಹುರುಳಿ ಆಕಾರದ ಅಂಗಗಳು ವ್ಯಕ್ತಿಯನ್ನು ಆರೋಗ್ಯವಾಗಿಡಲು ನಿಮಿಷಕ್ಕೆ 1,200 ಮಿಲಿ ರಕ್ತವನ್ನು (ದಿನಕ್ಕೆ 1,700 ಲೀಟರ್) ಫಿಲ್ಟರ್ ಮಾಡುತ್ತದೆ. ಇದು ದೇಹದ ತ್ಯಾಜ್ಯವನ್ನು ಹೊರ ಹಾಕಲು ಸಹ ಸಹಾಯ ಮಾಡುತ್ತದೆ, ದೇಹದಲ್ಲಿನ ರಾಸಾಯನಿಕಗಳು ಮತ್ತು ಖನಿಜಗಳ ಸಮತೋಲನವನ್ನು ಕಾಪಾಡುತ್ತದೆ. ಮೂಳೆಗಳು ಮತ್ತು ಹಲ್ಲುಗಳನ್ನು ಸದೃಢವಾಗಿಡುವ ಪ್ರಕ್ರಿಯೆ ಕೂಡ ಮೂತ್ರ ಪಿಂಡದಲ್ಲಿ ನಡೆಯುತ್ತದೆ “ಎಂದು ಡಾ. ಧನಂಜಯ ಹೇಳುತ್ತಾರೆ.
ನಮ್ಮ ಜೀವನ ಶೈಲಿಯ ಮೂಲಕ ಮೂತ್ರಪಿಂಡಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದನ್ನು ಅವರು ಒತ್ತಿ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.