’ಕಾಮದಹನ’, ’ಹೋಲಿಕಾದಹನ’, ’ರಂಗಪಂಚಮಿ’ ಎಂದು ವಿವಿಧ ಹೆಸರಿನಿಂದ ಕರೆಯಲ್ಪಡುವ ಹಬ್ಬವೇ ಹೋಳಿ ಹುಣ್ಣಿಮೆ. ಯಾಂತ್ರಿಕತೆ ತುಂಬಿದ ಜೀವನದಲ್ಲಿ ಈ ಹಬ್ಬಗಳು ಎಲ್ಲರಿಗೂ ಜೀವನೋತ್ಸಾಹ ತುಂಬಿ ಮೌಲ್ಯಗಳ ವರ್ಧನೆ ಮಾಡುವುದರ ಜೊತೆಗೆ ಸೌಹಾರ್ದತೆಯ ಭಾವವನ್ನು ಬಲಪಡಿಸುವುದು ವಿಶೇಷ.
ಬಿರು ಬೇಸಿಗೆಯ ತಾಪಕ್ಕೆ ಹಸಿರಿನಿಂದ ನಳ ನಳಿಸುತ್ತ ಜೀವಚೇತನ ತುಂಬುವ ಪ್ರಕೃತಿ ಸೊರಗಿ ನಿಂತರೆ ಮನುಷ್ಯರ ಮೈ ಮನಗಳಿಗೆ ಜಡತ್ವದ ಛಾಯೆ ಆವರಿಸಿರುತ್ತದೆ. ಇಂತಹ ಸಮಯದಲ್ಲಿ ಸುತ್ತಲೂ ಚೈನತ್ಯ, ನವೋಲ್ಲಾಸ ತುಂಬುವ ಹೋಳಿಯ ಹಿನ್ನೆಲೆ ಅರಿತರೆ ಮತ್ತೆ ನಮ್ಮ ಜ್ಞಾತಿಗಳ ಜ್ಞಾನಕ್ಕೆ ತಲೆಬಾಗದೆ ಇರಲಾರಿರಿ.
ಪೌರಾಣಿಕ ಕಥಾನಕಗಳ ಪ್ರಕಾರ ದುಷ್ಟನಾದ ತಾರಕಾಸುರನೆಂಬ ರಾಕ್ಷಸನು ಬ್ರಹ್ಮನಿಂದ ತನಗೆ ಪಾರ್ವತಿ ಶಿವನ ಮಗನಿಂದಲೇ ಸಾವು ಬರುವಂತೆ ವರ ಕೋರುತ್ತಾನೆ. ಧ್ಯಾನ ಯೋಗದಲ್ಲಿ ಪರಶಿವನು ಲೀನನಾಗಿದ್ದು ಪರಶಿವನ ವಿವಾಹ ಸಂತಾನ ಅಸಾಧ್ಯವೆಂದೆ ಆತ ಭ್ರಮಿಸಿ ವರ ಪಡೆದಿದ್ದ. ಇತ್ತ ದೇವಾನುದೇವತೆಗಳು ರಾಕ್ಷಸನ ಉಪಟಳ ತಪ್ಪಿಸಿ ಲೋಕಕಲ್ಯಾಣವಾಗಲೆಂದು ರತಿ ಮನ್ಮಥರನ್ನು ಪರಶಿವನ ತಪೋಭಂಗ ಮಾಡಲು ಕೇಳುತ್ತಾರೆ. ಅನೇಕ ಪ್ರಯತ್ನಗಳ ನಂತರ ಮದನಾಸ್ತ್ರದಿಂದ ಶಿವನು ವಿಚಲಿನಾಗುವಂತೆ ಮಾಡುತ್ತಾನೆ. ಕೋಪೋದ್ರಿಕ್ತ ರುದ್ರನು ತನ್ನ ಮೂರನೇ ಕಣ್ಣು ತೆರೆದು ಮನ್ಮಥನನ್ನು ಸುಟ್ಟು ಹಾಕುತ್ತಾನೆ. ದುಃಖಗ್ರಸ್ತಳಾದ ರತಿ ಪರಿ ಪರಿಯಾಗಿ ಶಿವನಲ್ಲಿ ಪ್ರಾರ್ಥಿಸಿದಾಗ ಅವಳಿಗೆ ಮಾತ್ರ ಸಶರೀರಿಯಾಗಿ ಮದನನ್ನು ಕಾಣುವಂತೆ ಅನುಗ್ರಹಿಸಿ ಆತನ ಅಸ್ತಿತ್ವವನ್ನು ಜೀವಿತಗೊಳಿಸುತ್ತಾನೆ.
ಇಲ್ಲಿ ಮನ್ಮಥನು ಎಲ್ಲರ ಮನದೊಳಗೆ ಅಡಗಿರುವ ಕಾಮನೆ (ಆಸೆ)ಗಳ ಪ್ರತೀಕನಾಗಿದ್ದು, ಕೇವಲ ತನ್ನ ಅರಿಷಡ್ವರ್ಗಗಳ ಕಾಮನೆಗಳ ಪೂರೈಕೆಗೆ ತೊಡಗುವವರು ಮನಸ್ಸಿನ ಹಿಡಿತದಲ್ಲಿ ನಲುಗುವವರಾಗುತ್ತಾರೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಕಾಮ, ಸ್ವಾರ್ಥ, ಅಪೇಕ್ಷೆಗಳಾಚೆ ಇರುವ ಶುದ್ಧ ಕಾಮನೆಗಳನ್ನು ಹೊಂದಿರುವವರು ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡ ಪಾರಮಾರ್ಧಿಕ ವ್ಯಕ್ತಿಗಳಾಗುತ್ತಾರೆ.
ಪರಶಿವನ ’ಮೂರನೇಕಣ್ಣು’ ಅಂದರೆ ಇಲ್ಲಿ ’ಅಂತಃಚಕ್ಷು’ ಆಗಿದೆ. ಬಾಹ್ಯದ ಕಣ್ಣಿಂದ ಕಾಣಿಸಲ್ಪಟ್ಟವುಗಳೆಡೆಗೆ ಮನಸ್ಸು ವಾಲಿದಾಗ ಅಂತರಾಳದ ಜ್ಞಾನದ ಅಕ್ಷಿಯಿಂದ ಅಂತಹ ಸಲ್ಲದವುಗಳನ್ನ ಕೊನೆಗಾಣಿಸುವುದೇ ಆಗಿದೆ. ರಾಜಸಿಕ, ತಾಮಸಿಕ, ರಜೋ ಗುಣಗಳ ಮೆಟ್ಟಿನಿಂತು ಇಂದ್ರಿಯ ಅತೀತ ಶಕ್ತಿ ಗಳಿಕೆಯನ್ನು ಸಾಧಿಸಿದ ಪರಶಿವನು ಇಲ್ಲಿ ಹುಚ್ಚು ಕುದುರೆಯಂತಿರುವ ಮನಸ್ಸಿಗೆ ಲಗಾಮು ಹಾಕಿ ದುಷ್ಟತೆಯ ಸಂಹಾರ ಮಾಡಿದ ಎಂಬುದೇ ಆಗಿದೆ.
ಇನ್ನೊಂದು ಕಥಾನಕದ ಪ್ರಕಾರ ರಾಕ್ಷಸ ರಾಜನಾದ ಹಿರಣ್ಯಕಶ್ಯಪವಿನ ಮಗ ಮೇರು ಹರಿಭಕ್ತನಾಗಿದ್ದು ಸಾತ್ವಿಕ ಗುಣಸಂಪನ್ನನಾಗಿದ್ದ. ಇದನ್ನು ಸಹಿಸದ ಹಿರಣ್ಯಕಶಪು ಮಗನನ್ನು ಕೊಲ್ಲಲು ತನ್ನ ತಂಗಿಯಾದ ಹೋಲಿಕಾಳನ್ನು ನೇಮಿಸಿದ. ಅಗ್ನಿಯಿಂದ ಯಾವುದೇ ತೊಂದರೆಯಾಗದೆಂಬ ವರ ಪಡೆದಿದ್ದ ಹೋಲಿಕಾಳು ಪ್ರಲ್ಹಾದನ ಸಮೇತ ಅಗ್ನಿಪ್ರವೇಶ ಮಾಡಿದಳು. ಆದರೆ ಅಲ್ಲಿ ಹೋಲಿಕಾಳು ಸಂಪೂರ್ಣ ದಹನಳಾಗಿ ಹೋಗುವಳು. ಭಕ್ತ ಪ್ರಲ್ಹಾದನು ಕಿಂಚಿತ್ತೂ ಘಾಸಿಗೊಳ್ಳದೆ ಹೊರಬರುತ್ತಾನೆ.
ಇನ್ನು ಈ ಹಬ್ಬವನ್ನು ಉತ್ತರ ಕರ್ನಾಟಕದ ಕೆಲಭಾಗಗಳಲ್ಲಿ ಐದು ದಿನಗಳವರೆಗೆ ಆಚರಿಸುತ್ತಾರೆ. ಗಲ್ಲಿ ಗಲ್ಲಿಗಳಲ್ಲಿ ರತಿ ಮನ್ಮಥರ ಗೊಂಬೆಗಳನ್ನು ಕೂರಿಸಿ ಪೂಜೆ ಮಾಡುವರು. ತಮಟೆ, ಡೋಲು ಸೇವೆ ಸಾಂಗವಾಗಿ ನಡೆಸಲ್ಪಡುತ್ತದೆ. ರಂಗ ಪಂಚಮಿ ದಿನ ಗೊಂಬೆಗಳನ್ನು ಮೆರವಣಿಗೆ ಒಯ್ಯಲಾಗುತ್ತೆ. ಜೊತೆಗೆ ಎಲ್ಲರಿಗೂ ನೀರು, ಪಾನಕ ಬಣ್ಣ ಬ್ಯಾರಲ್ಗಳ ಮೂಲಕ ಹಂಚಲಾಗುತ್ತೆ. ಕೆಲದಾನಿಗಳು ನೀರಿನ ಪಾನಕಗಳ ಅವಟಿಗೆ ತೆಗೆದಿರುತ್ತಾರೆ. ಗಿಜಿಗುಟ್ಟೋ ಜನಜಂಗಳಿ ಯಾರು ಪರಿಚಿತರು ಯಾರು ಅಪರಿಚಿತರು ಗೊತ್ತೇ ಆಗದಂತೆ ಬಣ್ಣ ಎರಚಿ ಬಣ್ಣಗಳಲ್ಲೇ ಮುಳಗಿಬಿಟ್ಟಿರುತ್ತಾರೆ. ಯಾವುದೇ ಭೇದ ಭಾವವಿಲ್ಲದೇ ಎಲ್ಲರೂ ಒಂದೇ ಎಂದು ಸಾರುವ ಸೌಹಾರ್ದತೆಯ ಪ್ರೀತಿಯಲ್ಲಿ ಮಿಂದೇಳುವಂತೆ ಮಾಡುವ ಹಬ್ಬದ ಬಣ್ಣ ವರ್ಣಿಸಲಸದಳ. ಇಷ್ಟೆಲ್ಲಾ ಆಟ, ಹಾಡು, ಕುಣಿತ, ನೃತ್ಯ, ಬಣ್ಣ ಎರಚಾಟ ಮುಗಿದ ನಂತರ ಜನರೆಲ್ಲಾ ಸುಡಲು ಇಟ್ಟ ಉರುವಲುಗಳನ್ನೆಲ್ಲಾ ಪೇರಿಸಿಟ್ಟು ಸುತ್ತಲೂ ಕಬ್ಬಿನ ಜಲ್ಲೆ, ಜಾಡಲ ಟೊಂಗೆ, ತೆಂಗಿನಗರಿ, ಅಡಕೆಹಾಳೆ ಇಟ್ಟು ಪೂಜಿಸಿ ಅಗ್ನಿ ಸ್ಪರ್ಶ ಮಾಡಿ ಕಾಮನನನ್ನು ದಹಿಸುವರು. ಅಶುಭ ಕಾಮನೆಗಳು ಸುಟ್ಟು ಹೋಗಿ ಶುಭ ಕಾಮನೆಗಳು ಮೊಳೆಯಲಿ ಎನ್ನುವ ಬೇಡಿಕೆಯೊಂದಿಗೆ ಮನೆಗೆ ತೆರಳಿ ಸ್ನಾನಮಾಡಿ ಹಬ್ಬದೂಟ ಸವಿಯುವರು.
ಹಿಂದೆಲ್ಲಾ ರಾಸಾಯನಿಕ ಮುಕ್ತವಾದ ನೈಸರ್ಗಿಕ ಬಣ್ಣಗಳನ್ನು ತಯಾರಿಸುತ್ತಿದ್ದರು. ಅವುಗಳಲ್ಲಿನ ಔಷದೀಯ ಗುಣಗಳಿಂದ ಸಹಜವಾಗಿ ಬೇಸಿಗೆಯ ಕಾರಣದಿಂದ ಬರುತ್ತಿದ್ದ ಚರ್ಮರೋಗ, ಶುಷ್ಕತೆ, ಖಿನ್ನತೆ, ಮಾನಸಿಕ ಅಸಮತೋಲನೆ ಹಲವಾರು ರೋಗಗಳನ್ನು ನಿಯಂತ್ರಿಸಲು ಸಹಕಾರಿ ಆಗಿರುತ್ತಿತ್ತು.
ಆದರೀಗ ಬದಲಾದ ಕಾಲಘಟ್ಟದಲ್ಲಿ ಸ್ವಾರ್ಥ ವ್ಯಾಪಾರಿ ಮನೋಭಾವದಿಂದ ಚರ್ಮಕ್ಕೆ ಹಾನಿಕರವಾದ ರಾಸಾಯನಿಕಗಳನ್ನೊಳಗೊಂಡ ಬಣ್ಣಗಳು ಮಾರುಕಟ್ಟೆಗೆ ಬಂದಿವೆ. ಬಣ್ಣಗಳನ್ನು ಕೊಳ್ಳುವಾಗ ಎಚ್ಚರಿಕೆ ವಹಿಸಬೇಕಾಗಿದೆ. ಹಾಗೆಯೇ ದುರುದ್ದೇಶಪೂರಿತವಾಗಿ ಬಲವಂತವಾಗಿ ಬಣ್ಣ ಎರಚುವುದು ಸಲ್ಲ. ಜೋರಾಗಿ ಕಿವಿಗಡಬೆಚ್ಚುವಂತ ಸಂಗೀತ ಹಾಕಿಕೊಂಡು ಯಾವುದೋ ನಿರ್ದಿಷ್ಟ ಸ್ಥಳಗಳಲ್ಲಿ ಸಾಮೂಹಿಕ ಸನ್ನಿಗೊಳಗಾದವರಂತೆ ಕೃತಕ ಬಣ್ಣಗಳ ಮಳೆಯ ವ್ಯವಸ್ಥೆ ಮಾಡಿ ಅದರಡಿ ಕುಣಿಯುವುದೇ ಹಬ್ಬದ ಆಚರಣೆ ಎಂದು ಬಹುತೇಕ ಯುವ ಜನ ಭಾವಿಸಿದ್ದು ಕಂಡಾಗ ಖೇದವೆನಿಸದೆ ಇರಲಾರದು. ಮೂಲ ಹಬ್ಬದ ಆಶಯವೇ ಗೊತ್ತಿರದ ಜನರಿಗೆ ಇದು ಕೇವಲ ಮನರಂಜನೆಯ ಮಾಧ್ಯಮವಾಗಿದೆ ಅಷ್ಟೇ. ಇನ್ನೂ ಕೆಲ ಜನ ಮೊಬೈಲ್ ಮೂಲಕ ಯಾರೋ ಕಳಿಸಿದ ಹಬ್ಬದ ಸಂದೇಶಗಳನ್ನೇ ಇನ್ನೊಬ್ಬರಿಗೆ ಮತ್ತೊಬ್ಬರಿಗೆ ಸಾಗಿಸುತ್ತಾ ಶುಭಾಶಯ ಕೋರುವ ರೀತಿ ಕಂಡಾಗ ಆತ್ಮೀಯ, ಆಪ್ತ ಭಾವನೆಗಳೇ ಲುಪ್ತವಾಗಿ ಅಲ್ಲಿ ಅನಿವಾರ್ಯತೆಯ ನಿರ್ಲಿಪ್ತತೆಯೇ ಕಾಣುವುದು. ಹಬ್ಬಗಳ ಉದ್ದೇಶ ಸದೃಢ, ಸ್ವಸ್ಥ ಮಾನಸಿಕ ವ್ಯಕ್ತಿತ್ವದ ವ್ಯಕ್ತಿಯು ಸದೃಢ ಸಮಾಜದ ನಿರ್ಮಾತೃ ಆಗಬಲ್ಲ ಎಂಬುದನ್ನು ಅರಿತು ಆ ನಿಟ್ಟಿನಲ್ಲಿ ವ್ಯಕ್ತಿ ನಿರ್ಮಾಣ ಮಾಡುವುದೇ ಆಗಿದೆ.
ಆಚರಣೆಗಳ ಹಿಂದಿನ ಸದಾಶಯ ಅರಿಯೋಣ. ಮುಂದಿನ ಪೀಳಿಗೆಯವರಿಗೂ ತಲುಪಿಸಬೇಕಾದದ್ದು ನಮ್ಮ ಕರ್ತವ್ಯ ಎಂಬುದನ್ನು ಮರೆಯದಿರೋಣ.
ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.