ಲಕ್ನೋ: ದೇಶದ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಭಾರತ ವಿರೋಧಿ ಘೋಷಣೆಗಳು ಕೇಳಿಬಂದಾಗ ಅದರಲ್ಲಿ ಶಿಕ್ಷಕರ ಪಾತ್ರವು ಕೂಡ ಪರಿಶೀಲನೆಗೆ ಒಳಪಡುತ್ತದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಮೂಲ ಶಿಕ್ಷಣ ಪರಿಷತ್ ಲಕ್ನೋದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, “ಉನ್ನತ ಶಿಕ್ಷಣ ಮತ್ತು ವಿಶ್ವವಿದ್ಯಾಲಯಗಳಲ್ಲಿ ಭಾರತ ವಿರೋಧಿ ಘೋಷಣೆಗಳು ಕೇಳಿ ಬಂದಾಗ, ನಮ್ಮ ವಿದ್ಯಾರ್ಥಿಗಳಲ್ಲಿ ಈ ರೀತಿಯ ಮನಸ್ಥಿತಿಯು ಹುಟ್ಟಲು ಕಾರಣ ಏನು ಎಂಬುದನ್ನು ಮೌಲ್ಯಮಾಪನ ಮಾಡಲು ನಾವು ಸಿದ್ಧರಾಗಿರಬೇಕು” ಎಂದಿದ್ದಾರೆ.
“ನಾವು ದೇಶದ ಏಕತೆ ಮತ್ತು ಸಮಗ್ರತೆಯ ಪ್ರತಿಜ್ಞೆಯೊಂದಿಗೆ ನಮ್ಮ ಕೆಲಸಗಳನ್ನು ಮಾಡುತ್ತಿದ್ದೇವೆ, ಆದರೆ ಕೆಲವರು ಇಂದು ರಾಷ್ಟ್ರದ ವಿಭಜನೆಗಾಗಿ ಘೋಷಣೆಗಳನ್ನು ಹಾಕುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದೇವರಿಗೆ ಸಮಾನರು ಎಂದು ಸಮಾಜದಲ್ಲಿ ಪರಿಗಣಿಸಲ್ಪಡುವ ಶಿಕ್ಷಕರ ಪಾತ್ರದ ಬಗ್ಗೆ ಪ್ರಶ್ನೆಗಳು ಏಳುತ್ತವೆ” ಎಂದು ಅವರು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ಭಾರತ ವಿರೋಧಿ ಘೋಷಣೆಗಳನ್ನು ಎತ್ತಲಾಗುತ್ತಿದೆ ಎಂದು ಆದಿತ್ಯನಾಥ್ ಕಳವಳ ವ್ಯಕ್ತಪಡಿಸಿದರು.
“ಈ ಪಾಪದ ಕಾರ್ಯ ಮತ್ತು ಅವ್ಯವಸ್ಥೆಯಲ್ಲಿ ಎಲ್ಲರೂ ಭಾಗಿಯಾಗಿರುವವರು ಯಾರು? ಸರ್ಕಾರಗಳು ಸಂಪನ್ಮೂಲಗಳನ್ನು ಮಾತ್ರ ಒದಗಿಸಬಲ್ಲವು, ಆದರೆ ವಿದ್ಯಾರ್ಥಿಗಳಿಗೆ ಮೂಲಭೂತ ಶಿಕ್ಷಣವನ್ನು ನೀಡಿದವರು, ಅವರಿಗೆ ಮಾಧ್ಯಮಿಕ ಶಿಕ್ಷಣವನ್ನು ನೀಡಿದವರು ಮತ್ತು ಅವರನ್ನು ಈ ಮನಸ್ಥಿತಿಗೆ ತಂದವರು ಎಲ್ಲರನ್ನೂ ಮೌಲ್ಯಮಾಪನ ಮಾಡಬೇಕು” ಎಂದಿದ್ದಾರೆ.
ಮೂರು ವರ್ಷಗಳ ಹಿಂದೆ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ರಾಜ್ಯದ ಶಿಕ್ಷಣದ ಸ್ಥಿತಿಗತಿಯು ಅವ್ಯವಸ್ಥೆ ಮತ್ತು ಅರಾಜಕತೆಯ ವಾತಾವರಣದಿಂದ ಕೂಡಿತ್ತು ಮತ್ತು ಮೂಲ ಶಿಕ್ಷಣದ ಸ್ಥಿತಿ ತುಂಬಾ ಕೆಟ್ಟದಾಗಿತ್ತು ಎಂದಿದ್ದಾರೆ.
”ಶಿಕ್ಷಣದಲ್ಲಿ ಯಾವುದೇ ತಾರತಮ್ಯವಿಲ್ಲದಿದ್ದರೆ ಮತ್ತು ರಾಜ್ಯದ ಮಕ್ಕಳಿಗೆ ಸಮಾನ ಅವಕಾಶಗಳು ದೊರೆತರೆ, ಅವರು ಯಶಸ್ಸಿನ ಹೊಸ ಎತ್ತರವನ್ನು ಸಾಧಿಸಲು ಸಾಧ್ಯವಾಗುತ್ತದೆ” ಎಂದು ಅವರು ಹೇಳಿದರು.
ಶಿಕ್ಷಕರು ಕೇವಲ ಸರ್ಕಾರಿ ನೌಕರರಲ್ಲ, ರಾಷ್ಟ್ರದ ಭವಿಷ್ಯ ಎಂದು ಮುಖ್ಯಮಂತ್ರಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.