ನವದೆಹಲಿ : ಕೋವಿಡ್-19 ಕೊರೋನವೈರಸ್ ಹರಡುವ ಬಗ್ಗೆ ಭಾರತೀಯರು ಭಯಪಡುವ ಅಗತ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಹೇಳಿದೆ. ಮಾಧ್ಯಮದೊಂದಿಗೆ ಮಾತನಾಡಿರುವ ಡಬ್ಲ್ಯುಎಚ್ಒ ಪ್ರಾದೇಶಿಕ ತುರ್ತು ನಿರ್ದೇಶಕ ಡಾ. ರೊಡ್ರಿಕೊ ಒಫ್ರಿನ್ ಅವರು, “ಭಾರತೀಯರು ಭಯಭೀತರಾಗುವ ಅಗತ್ಯವಿಲ್ಲ, ಏಕೆಂದರೆ ಭಾರತದಲ್ಲಿ ಪತ್ತೆಯಾದ ಪ್ರಕರಣಗಳು ವಿದೇಶ ಪ್ರವಾಸದಿಂದಾಗಿ ಬಂದಿದೆ, ನಾಗರಿಕರಿಗೆ ವಿದೇಶಿ ನೆಲದಲ್ಲಿ ವೈರಸ್ ಅಂಟಿಕೊಂಡಿದೆ” ಎಂದಿದ್ದಾರೆ.
ತಾಪಮಾನ ಹೆಚ್ಚಾದಂತೆ ವೈರಸ್ ಕಡಿಮೆಯಾಗುತ್ತದೆಯೇ ಎಂಬ ಬಗ್ಗೆ ಮಾತನಾಡಿದ ಅವರು, “ಈ ಬಗ್ಗೆ ಇದುವರೆಗಿನ ಸಂಶೋಧನೆಯಿಂದ ಏನೂ ತಿಳಿದು ಬಂದಿಲ್ಲ. ತುಲನಾತ್ಮಕವಾಗಿ ಹೊಸ ವೈರಸ್ ಆದ್ದರಿಂದ ಅದರ ಬಗ್ಗೆ ಮಾಹಿತಿ ಸಂಗ್ರಹಿಸಲು ಸಮಯ ತೆಗೆದುಕೊಳ್ಳುತ್ತದೆ. ಇದರ ಬಗ್ಗೆ 24×7 ಸಂಶೋಧನೆ ನಡೆಯುತ್ತಿದೆ. ಜಗತ್ತಿನಾದ್ಯಂತ ಅನೇಕ ತಜ್ಞರು ಕೊರೋನವೈರಸ್ ವಿಕಾಸದ ಬಗ್ಗೆ ಮಾಹಿತಿ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ” ಎಂದಿದ್ದಾರೆ.
“ಕೊರೋನವೈರಸ್ ಬಗ್ಗೆ ಭಯಪಡುವ ಅಗತ್ಯವಿಲ್ಲ, ಸೋಂಕಿತರಿಗೆ ಚಿಕಿತ್ಸೆ ನೀಡಲು ಹೆಚ್ಚು ತರಬೇತಿ ಪಡೆದ ವೈದ್ಯರು ಮತ್ತು ದಾದಿಯರನ್ನು ಹೊಂದುವುದು ಈ ಸಮಯದ ಅವಶ್ಯಕತೆಯಾಗಿದೆ. ಭಾರತವು ಈಗಾಗಲೇ ಅನೇಕ ಕೇಂದ್ರಗಳನ್ನು ರಚನೆ ಮಾಡಿದೆ ಎಂದು ನಮಗೆ ತಿಳಿದು ಬಂದಿದೆ, ಇದು ವೈರಸ್ ಎದುರಿಸುವ ಸಮರ್ಪಕ ಮಾರ್ಗವಾಗಿದೆ. ಆಸ್ಪತ್ರೆಗಳು ಪ್ರತ್ಯೇಕ ವಾರ್ಡ್ಗಳನ್ನು ಹೊಂದಿವೆ, ಅವುಗಳನ್ನು ಆದಷ್ಟು ಬೇಗ ಸಕ್ರಿಯಗೊಳಿಸಬೇಕಾಗಿದೆ” ಎಂದಿದ್ದಾರೆ.
”ಕೈಗಳನ್ನು ಆಗಾಗ್ಗೆ ತೊಳೆಯುವುದು, ಸೀನುವಾಗ ಬಾಯಿಯನ್ನು ಮುಚ್ಚಿಕೊಳ್ಳುವುದು, ಅನಾರೋಗ್ಯ ಕಾಣಿಸಿಕೊಂಡಾಗ ಸಾಧ್ಯವಾದಷ್ಟು ಬೇಗ ವೈದ್ಯರ ಬಳಿಗೆ ತೆರಳಿ ಮೂಲಭೂತ ನೈರ್ಮಲ್ಯವನ್ನು ಕಾಪಾಡುವುದು ಮುಖ್ಯ” ಎಂದಿದ್ದಾರೆ.
ತರುಣರಿಗೆ ಮತ್ತು ವಯಸ್ಸಾದವರಿಗೆ ವೈರಸ್ ತಗಲುವ ಆತಂಕ ಇರುವುದರಿಂದ ಈ ವಯೋಮಾನದವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.