ನವದೆಹಲಿ: ಗುಜರಾತ್ನ ಕೆವಾಡಿಯಾದಲ್ಲಿ ಇಂಡಿಯಾ ಫೌಂಡೇಶನ್ ಆಯೋಜಿಸಿದ್ದ ‘ಇಂಡಿಯಾ ಐಡಿಯಾಸ್ ಕಾನ್ಕ್ಲೇವ್ 2020’ ನಲ್ಲಿ ಮಾತನಾಡಿದ ಖ್ಯಾತ ಗಾಯಕ ಅದ್ನಾನ್ ಸಾಮಿ ಅವರು, ಮುಸ್ಲಿಮನಾಗಿ ಭಾರತದಲ್ಲಿ ನಾನು ಸುರಕ್ಷಿತ ಭಾವವನ್ನು ಹೊಂದಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೇ, ಪೌರತ್ವ ತಿದ್ದುಪಡಿ ಕಾಯ್ದೆಯು ಪೌರತ್ವವನ್ನು ಬಯಸುವ ಜನರಿಗೆ ಕ್ಷಿಪ್ರವಾಗಿ ಪೌರತ್ವವನ್ನು ನೀಡುತ್ತದೆ ಮತ್ತು ಇದು ಭಾರತದಲ್ಲಿ ವಾಸಿಸುತ್ತಿರುವ ಭಾರತೀಯರಿಗಾಗಿ ಇರುವ ಕಾಯ್ದೆಯೇ ಅಲ್ಲ ಎಂದಿದ್ದಾರೆ.
ದೆಹಲಿ ದಂಗೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, “ಮುಸ್ಲಿಂ ಆಗಿ ನಾನು ಭಾರತದಲ್ಲಿ ಸುರಕ್ಷಿತನೆಂದು ಭಾವಿಸುತ್ತೇನೆ” ಎಂದು ಉತ್ತರಿಸಿದ್ದಾರೆ. ಸಿಎಎ ಬಗ್ಗೆ ಅವರ ಅಭಿಪ್ರಾಯ ಮತ್ತು ಮುಸ್ಲಿಂ ಗುಂಪುಗಳು ನಡೆಸುತ್ತಿರುವ ಹಿಂಸಾಚಾರದ ಕುರಿತು ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, “ಪೌರತ್ವ ತಿದ್ದುಪಡಿ ಕಾಯ್ದೆಯು ಪೌರತ್ವವನ್ನು ಬಯಸುವ ಜನರಿಗೆ ತ್ವರಿತಗತಿಯಲ್ಲಿ ಪೌರತ್ವ ನೀಡುತ್ತದೆ ಮತ್ತು ಇದು ಭಾರತದ ಭಾರತೀಯರಿಗೆ ಇರುವ ಕಾಯ್ದೆ ಅಲ್ಲ. ಈ ವಿಷಯವನ್ನು ರಾಜಕೀಯಗೊಳಿಸಲಾಗುತ್ತಿದೆ” ಎಂದಿದ್ದಾರೆ.
ಶೀಘ್ರದಲ್ಲೇ ಶಾಂತಿ ಪುನಃಸ್ಥಾಪನೆಯಾಗಲಿದೆ ಎಂದು ಆಶಿಸುತ್ತೇನೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಾಯಕ ಹೇಳಿದ್ದಾರೆ.
“ಸಂಗೀತಗಾರನಾಗಿರುವುದರಿಂದ ನಾನು ಯಾವಾಗಲೂ ಪ್ರೀತಿ ಮತ್ತು ಶಾಂತಿಯ ಬಗ್ಗೆ ಮಾತನಾಡುತ್ತೇನೆ. ಪ್ರತಿಯೊಬ್ಬರೂ ಪ್ರೀತಿಯ ಮಾತುಗಳನ್ನು ಆಡಬೇಕು ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಬೇಕು ಎಂಬುದು ನನ್ನ ಮನವಿ. ಪ್ರತಿಯೊಬ್ಬರೂ ಇನ್ನೊಬ್ಬರ ಜೀವನವನ್ನು ಗೌರವಿಸಬೇಕು ಎಂದು ನಾನು ವಿನಂತಿಸುತ್ತೇನೆ ಮತ್ತು ಮಾತುಕತೆಯಿಂದ ಬಗೆಹರಿಯದ ಸಮಸ್ಯೆಯೇ ಇಲ್ಲ. ದೇಶದಲ್ಲಿ ಶಾಂತಿ ನೆಲೆಸಬೇಕು” ಎಂದಿದ್ದಾರೆ.
”ನನ್ನ ಮಟ್ಟಿಗೆ ನಾನು ಮುಸ್ಲಿಂ. ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ, ನಾನು ಎಲ್ಲಾ ಧರ್ಮಗಳನ್ನು ಆಚರಿಸುತ್ತೇನೆ. ಮಾನವೀಯತೆಯು ಯಾವುದೇ ರೂಪದಲ್ಲಿ ಬಂದರೂ ಅದನ್ನು ನಾನು ಆಚರಿಸುತ್ತೇನೆ. ನನಗೆ ಹಲವು ಆಯ್ಕೆಗಳಿದ್ದವು, ಆದರೆ ನಾನು ಭಾರತಕ್ಕೆ ಬರಬೇಕೆಂದು ಬಯಸಿ ಬಂದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.