ನವದೆಹಲಿ: ಮಯನ್ಮಾರ್ನ ಉತ್ತರ ರಾಖೈನ್ ರಾಜ್ಯದಲ್ಲಿ ಸಾಮಾಜಿಕ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಭಾರತ ಮತ್ತು ಮಯನ್ಮಾರ್ ಗುರುವಾರ ಒಪ್ಪಂದಗಳಿಗೆ ಸಹಿ ಹಾಕಿದೆ. 2017ರಲ್ಲಿ ಈ ರಾಜ್ಯದಲ್ಲಿ ನಡೆದ ಹಿಂಸಾಚಾರದ ಪರಿಣಾಮವಾಗಿ ಸಾವಿರಾರು ರೋಹಿಂಗ್ಯಾಗಳು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದರು.
ಮಯನ್ಮಾರ್ ಅಧ್ಯಕ್ಷ ವಿನ್ ಮೈಂಟ್ ಅವರ ನಾಲ್ಕು ದಿನಗಳ ಭಾರತ ಭೇಟಿಯ ಎರಡನೇ ದಿನವಾದ ಗುರುವಾರ, ಉಭಯ ದೇಶಗಳು ಇಂಧನ ಸಹಕಾರವನ್ನು ಗಾಢವಾಗಿಸುವ ಒಪ್ಪಂದಕ್ಕೆ ಸಹಿ ಹಾಕಿದವು. “ಪರಿಷ್ಕರಣೆ, ದಾಸ್ತಾನು, ಮಿಶ್ರಣ ಮತ್ತು ಚಿಲ್ಲರೆ ವ್ಯಾಪಾರಕ್ಕಾಗಿ ಸರ್ಕಾರದಿಂದ ಸರ್ಕಾರದ ನಡುವಣ ತಿಳುವಳಿಕೆಯ ಜ್ಞಾಪಕ ಪತ್ರಕ್ಕೆ ಸಹಿ ಹಾಕಲಾಯಿತು” ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
“ಈ ಪ್ರದೇಶದಲ್ಲಿ ವ್ಯಾಪಾರ ಮತ್ತು ಹೂಡಿಕೆಗಳನ್ನು ಹೆಚ್ಚಿಸುವುದು ಸೇರಿದಂತೆ, ಪೆಟ್ರೋಲಿಯಂ ಉತ್ಪನ್ನಗಳ ಅಭಿವೃದ್ಧಿಗೆ ಭಾರತ ಮತ್ತು ಮಯನ್ಮಾರಿನ ತೈಲ ಮತ್ತು ಅನಿಲ ಕಂಪನಿಗಳ ನಡುವೆ ಸಹಕಾರವನ್ನು ಉತ್ತೇಜಿಸಲು ಮತ್ತು ಸುಗಮಗೊಳಿಸಲು ಎರಡೂ ದೇಶಗಳು ಪರಸ್ಪರ ಒಪ್ಪಿಗೆ ನೀಡಿವೆ” ಎಂದು ಹೇಳಿಕೆ ತಿಳಿಸಿದೆ.
”ಮಯನ್ಮಾರಿನ ಇಂಧನ ಕ್ಷೇತ್ರದಲ್ಲಿ ಭಾರತೀಯ ಹೂಡಿಕೆಯನ್ನು ಸ್ವಾಗತಿಸಲಾಯಿತು ಮತ್ತು ಭಾರತೀಯ ತೈಲ ಮತ್ತು ಅನಿಲ ಸಾರ್ವಜನಿಕ ವಲಯದ ಘಟಕಗಳು ಹೂಡಿಕೆ ಮಾಡಿದಂತಹ ಯೋಜನೆಗಳ ಉತ್ಪಾದನೆಯ ಒಂದು ಭಾಗವನ್ನು ಭಾರತಕ್ಕೆ ರಫ್ತು ಮಾಡುವ ಅವಕಾಶಗಳನ್ನು ಅನ್ವೇಷಿಸಲು ಪ್ರಯತ್ನಿಸಲಾಗುವುದು” ಎಂದು ಹೇಳಿದೆ.
ಉತ್ತರ ರಾಖೈನ್ನಲ್ಲಿ ಸ್ಥಳಾಂತರಗೊಂಡ ವ್ಯಕ್ತಿಗಳಿಗೆ ಭಾರತವು 250 ಪೂರ್ವ ನಿರ್ಮಿತ ಮನೆಗಳು ಮತ್ತು ಪರಿಹಾರ ಸಾಮಗ್ರಿಗಳನ್ನು 2019 ರಲ್ಲಿ ಒದಗಿಸಿದ್ದನ್ನು ಮ್ಯಾನ್ಮಾರ್ ಶ್ಲಾಘಿಸಿದೆ. 12 ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸಲು ಮತ್ತು ಅಭಿವೃದ್ಧಿ ಸಹಕಾರವನ್ನು ಇನ್ನಷ್ಟು ಬಲಪಡಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.