ನವದೆಹಲಿ: ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಶ್ಟಿಯವರ 808ನೇ ಪುಣ್ಯತಿಥಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಅಜ್ಮೀರ್ ಷರೀಫ್ ದರ್ಗಾಗೆ ‘ಚಾದರ’ವನ್ನು ಸಮರ್ಪಣೆ ಮಾಡಿದರು.
ಈ ಬಗ್ಗೆ ಸಂದೇಶ ನೀಡಿರುವ ಮೋದಿ, “ಖ್ವಾಜಾ ಮೊಯಿನುದ್ದೀನ್ ಚಿಶ್ಟಿಯವರ 808 ಉರೂಸ್ ಸಂದರ್ಭದಲ್ಲಿ, ಪ್ರಪಂಚದಾದ್ಯಂತದ ಅವರ ಅನುಯಾಯಿಗಳಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು. ಅವರು ಜಗತ್ತಿಗೆ ಮಾನವೀಯತೆಯ ಸಂದೇಶವನ್ನು ನೀಡಿದ್ದರು. ಈ ಸಂದರ್ಭದಲ್ಲಿ ನಾನು ಅವರಿಗೆ ಗೌರವ ಸಮರ್ಪಣೆ ಮಾಡಲು ಬಯಸುತ್ತೇನೆ. ಭಾರತವು ಶ್ರೀಮಂತ ಆಧ್ಯಾತ್ಮಿಕ ಸಂಪ್ರದಾಯಗಳ ದೇಶವಾಗಿದೆ ಮತ್ತು ನಮ್ಮ ದೇಶದ ಸೂಫಿ-ಸಂತರು ತಮ್ಮ ಸಿದ್ಧಾಂತ ಮತ್ತು ನಂಬಿಕೆಗಳ ಮೂಲಕ ರಾಷ್ಟ್ರದ ಸಾಂಸ್ಕೃತಿಕ ಅಂತಃಸತ್ವವನ್ನು ಬಲಪಡಿಸಲು ಸದಾ ಶ್ರಮಿಸುತ್ತಿದ್ದಾರೆ. ಅವರ ಶಾಂತಿ ಮತ್ತು ಐಕ್ಯತೆಯ ಸಂದೇಶವು ನಮಗೆ ಶಿಸ್ತುಬದ್ಧ, ಕೃತಾರ್ಥ ಮತ್ತು ತಾಳ್ಮೆಯ ಜೀವನ ನಡೆಸಲು ಸ್ಫೂರ್ತಿ ಆಗಲಿ” ಎಂದಿದ್ದಾರೆ.
ಇಷ್ಟೇ ಅಲ್ಲದೇ, “ಸದ್ಭಾವನೆ ಮತ್ತು ಸಾಮರಸ್ಯದ ಆದರ್ಶ ಸಂಕೇತವಾದ ಖ್ವಾಜಾ ಮೊಯಿನುದ್ದೀನ್ ಚಿಶ್ಟಿಯ ದರ್ಗಾವು ಪ್ರಪಂಚದಾದ್ಯಂತದ ವೈವಿಧ್ಯಮಯ ನಂಬಿಕೆಗಳು ಮತ್ತು ಅನುಯಾಯಿ ಜನರನ್ನು ಆಕರ್ಷಿಸುತ್ತದೆ. ಈ ವಾರ್ಷಿಕ ಆಚರಣೆಯು ವೈವಿಧ್ಯತೆಯಲ್ಲಿ ಏಕತೆಯ ಸುಂದರ ಸಂದೇಶವನ್ನು ಎತ್ತಿ ತೋರಿಸುತ್ತದೆ ಮತ್ತು ಈ ಭಾವನೆಯನ್ನು ಉಳಿಸಿ, ಬೆಳಸಿ ಮತ್ತು ಅನುಭವಿಸಲು ಇದು ಒಂದು ಅವಕಾಶವಾಗಿದೆ. ಖ್ವಾಜಾ ಮೊಯಿನುದ್ದೀನ್ ಚಿಶ್ಟಿಯವರ ಪುಣ್ಯತಿಥಿಯ ಸಂದರ್ಭ ನಾನು ದೇಶದ ಸಮೃದ್ಧಿಯನ್ನು ಬಯಸುತ್ತೇನೆ” ಎಂದಿದ್ದಾರೆ.
ಅಜ್ಮೀರ್ ಷರೀಫ್ ದರ್ಗಾದಲ್ಲಿ ಪ್ರಧಾನಿ ಪರವಾಗಿ ಚಾದರ್ ಮಂಡಿಸಿದ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಪ್ರಧಾನಮಂತ್ರಿಯ ಸಂದೇಶವನ್ನು ಓದಿದರು. ಈ ಸಂದರ್ಭದಲ್ಲಿ ನಖ್ವಿ, ಏಕತೆ ಮತ್ತು ಸಾಮರಸ್ಯದ ಬಲವು ಜಾತ್ಯತೀತ-ಪ್ರಜಾಪ್ರಭುತ್ವ ಭಾರತದ ಆತ್ಮವಾಗಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಕಳುಹಿಸಿದ ಚಾದರವನ್ನು ಸಮಾಜದ ಪ್ರತಿಯೊಂದು ವರ್ಗದ ಜನರು ಪೂರ್ಣ ಉತ್ಸಾಹದಿಂದ ಸ್ವಾಗತಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.