ನವದೆಹಲಿ: ಬಾಲಕೋಟ್ ವೈಮಾನಿಕ ದಾಳಿ ನಡೆದು ಇಂದಿಗೆ ಒಂದು ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ವಾಯು ಸೇನಾ ಮುಖ್ಯಸ್ಥ ಬಿಎಸ್ ಧನೋವಾ ಅವರು, ಈ ವೈಮಾನಿಕ ದಾಳಿಯು ಭಾರತದ ಸೇನಾ ಕಾರ್ಯಾಚರಣೆಯ ವಿಧಾನವನ್ನು ಬದಲಾಯಿಸಿದೆ ಎಂಬುದರ ದ್ಯೋತಕವಾಗಿತ್ತು ಎಂದು ಹೇಳಿದ್ದಾರೆ.
“ಒಂದು ವರ್ಷ ಗತಿಸಿ ಹೋಯಿತು ಮತ್ತು ನಾವು ತೃಪ್ತಿಯೊಂದಿಗೆ ಹಿಂತಿರುಗಿ ನೋಡುತ್ತಿದ್ದೇವೆ. ನಾವು ಸಾಕಷ್ಟು ಪಾಠ ಕಲಿತೆವು ಮತ್ತು ಬಾಲಕೋಟ್ ಕಾರ್ಯಾಚರಣೆಗೂ ಪೂರ್ವವಾಗಿ ಹಲವನ್ನು ಅನುಷ್ಠಾನಗೊಳಿಸಿದೆವು. ವಾಸ್ತವವಾಗಿ ಇದು ಭಾರತದ ಕಾರ್ಯಾಚರಣೆ ಶೈಲಿಯಲ್ಲಿನ ಮಹತ್ವದ ಪರಿವರ್ತನೆಯಾಗಿತ್ತು. ಪಾಕಿಸ್ತಾನದ ಒಳಗೆ ನುಗ್ಗಿ ನಾವು ಉಗ್ರ ತರಬೇತಿ ಶಿಬಿರಗಳ ಮೇಲೆ ದಾಳಿಯನ್ನು ನಡೆಸುತ್ತೇವೆ ಎಂಬುದನ್ನು ಇನ್ನೊಂದು ಬದಿ ನಂಬಿರಲಿಲ್ಲ. ಇದು ಮಹತ್ವದ ಪರಿವರ್ತನೆಯಾಗಿತ್ತು ಮತ್ತು ಫಲಿತಾಂಶವು ಅಮೋಘವಾಗಿತ್ತು” ಎಂದು ಧನೋವಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ವೈಮಾನಿಕ ದಾಳಿಯ ಕಾರಣದಿಂದಾಗಿಯೇ ಲೋಕಸಭಾ ಚುನಾವಣೆಯ ನಂತರ ಯಾವುದೇ ಪ್ರಮುಖ ಭಯೋತ್ಪಾದನೆ ದಾಳಿಗಳು ನಡೆದಿಲ್ಲ ಎಂದು ಅವರು ಹೇಳಿದ್ದಾರೆ.
“ಸರಕಾರ ನಮಗೆ ಈ ವಿಷಯವನ್ನು ಹೇಳಿದಾಗ ಎಲ್ಲಾ ಮೂರು ಸೇನಾಪಡೆಗಳು ಅಲ್ಲಿ ಉಪಸ್ಥಿತವಿದ್ದವು. ಯಾಕೆಂದರೆ ಇದು ಕೇವಲ ವಾಯು ಸೇನೆಯ ಕಾರ್ಯಾಚರಣೆ ಆಗಿರಲಿಲ್ಲ. ಇದು ಜಂಟಿ ಯುದ್ಧವಾಗಿತ್ತು. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು ಎಂಬುದು ಮೂರು ಸೇನಾಪಡೆಗಳ ನಿರ್ಧಾರವಾಗಿತ್ತು” ಎಂದಿದ್ದಾರೆ.
“ಕಾರ್ಯಾಚರಣೆಗೆ ಸಮ್ಮತಿಯನ್ನು ನೀಡಲಾಗಿತ್ತು ಮತ್ತು ಬಳಿಕ ವಾಯುಸೇನೆಯ ಕಾರ್ಯಾಚರಣೆಯನ್ನು ಮುನ್ನಡೆಸಲಿದೆ ಎಂಬುದು ನಿರ್ಧಾರವಾಯಿತು. ಈ ಕಾರ್ಯಾಚರಣೆ ಯಶಸ್ವಿಯಾದ ಬಳಿಕ ನಾನು ಸರ್ಕಾರ ಮತ್ತು ಇತರ ಎರಡು ಸೇನಾಪಡೆಗಳ ಮುಖ್ಯಸ್ಥರಿಗೆ ಬೆಳಿಗ್ಗೆ ಮಾಹಿತಿಯನ್ನು ನೀಡಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.