ನವದೆಹಲಿ: 2012ರ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮರಣದಂಡನೆಗೆ ಒಳಗಾದ ಅಪರಾಧಿಗಳಲ್ಲೊಬ್ಬನಾದ ವಿನಯ್ ಫೆಬ್ರವರಿ 16 ರಂದು ಜೈಲಿನ ಗೋಡೆಗೆ ತಲೆ ಬಡಿದುಕೊಂಡಿದ್ದಾನೆ ಎಂದು ತಿಹಾರ್ ಜೈಲಿನ ಅಧಿಕಾರಿ ಗುರುವಾರ ಹೇಳಿದ್ದಾರೆ. ವಿನಯ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದಿದ್ದಾರೆ.
ಗಲ್ಲಿಗೇರಿಸುವಿಕೆಯನ್ನು ವಿಳಂಬಗೊಳಿಸುವ ಸಲುವಾಗಿ ವಿನಯ್ ತನ್ನನ್ನು ತಾನು ಘಾಸಿಗೊಳಿಸಿಕೊಳ್ಳಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.
ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ನಾಲ್ವರು ಆರೋಪಿಗಳಾದ ಮುಖೇಶ್ ಕುಮಾರ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಕುಮಾರ್ ಶರ್ಮಾ (26) ಮತ್ತು ಅಕ್ಷಯ್ ಕುಮಾರ್ (31)ಗೆ ಮಾರ್ಚ್ 3 ರಂದು ಬೆಳಿಗ್ಗೆ 6 ಗಂಟೆಗೆ ಗಲ್ಲಿಗೇರಿಸಬೇಕೆಂದು ನ್ಯಾಯಾಲಯ ನಿರ್ದೇಶಿಸಿದೆ. ವಿಶೇಷವೆಂದರೆ, ಮೂರನೇ ಬಾರಿಗೆ ನ್ಯಾಯಾಲಯವು ಅಪರಾಧಿಗಳ ವಿರುದ್ಧ ಡೆತ್ ವಾರಂಟ್ ಹೊರಡಿಸಿದೆ.
ಮೊದಲ ಬಾರಿಗೆ ಜನವರಿ 22, ಎರಡನೇ ಬಾರಿಗೆ ಜನವರಿ 17ಕ್ಕೆ ಇವರ ಮರಣದಂಡನೆ ನಿಗದಿಯಾಗಿತ್ತು. ಆದರೆ ನ್ಯಾಯಾಲಯದ ಪ್ರಕ್ರಿಯೆ ಇದನ್ನು ವಿಳಂಬಗೊಳಿಸಿದೆ. ಇದೀಗ ಮೂರನೇ ಬಾರಿಗೆ ನ್ಯಾಯಾಲಯ ಡೆತ್ ವಾರೆಂಟ್ ಹೊರಡಿಸಿದೆ. ಪ್ರಸ್ತುತ ನಾಲ್ವರು ಅಪರಾಧಿಗಳನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.
ಮರಣದಂಡನೆಯನ್ನು ಸ್ವೀಕರಿಸದೆ ಅಪರಾಧಿಗಳಿಗೆ ಬೇರೆ ಯಾವುದೇ ಆಯ್ಕೆ ಈಗ ಉಳಿದಂತೆ ಕಾಣುತ್ತಿಲ್ಲ. ಹೀಗಾಗಿ ವಿನಯ್ ಎಂಬ ಅಪರಾಧಿ ಗೋಡೆಗೆ ತಲೆ ಹೊಡೆದುಕೊಂಡು ತನ್ನನ್ನು ತಾನು ಘಾಸಿಗೊಳಿಸಿದ್ದಾನೆ. ಈ ಮೂಲಕ ಮರಣದಂಡನೆಯಿಂದ ಪಾರಾಗಲು ಹೊಸ ತಂತ್ರ ನಡೆಸಿದ್ದಾನೆ.
ಗಾಯಾಳುವಾದವರನ್ನು ಅಥವಾ ಆರೋಗ್ಯ ಸಮಸ್ಯೆಯಿದ್ದವರನ್ನು ಮರಣದಂಡನೆಗೆ ಒಳಪಡಿಸುವಂತಿಲ್ಲ ಎಂಬ ನಿಯಮವಿದೆ. ಈ ನಿಯಮವನ್ನು ಬಳಸಿಕೊಂಡು ಮರಣದಂಡನೆಯಿಂದ ಪಾರಾಗುವ ಯೋಜನೆ ಈತನದಾಗಿತ್ತು ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.