ಮುಂಬೈ: ಮುಂಬೈನ ಮಾಜಿ ಪೊಲೀಸ್ ಆಯುಕ್ತ ರಾಕೇಶ್ ಮರಿಯಾ ತಮ್ಮ ಹೊಸ ಪುಸ್ತಕ ‘ಲೆಟ್ ಮಿ ಸೇ ಇಟ್ ನೌ’ ಎಂಬ ಪುಸ್ತಕದಲ್ಲಿ 26/11 ಭಯೋತ್ಪಾದನಾ ದಾಳಿ ಬಗ್ಗೆ ಹಲವು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಈ ದಾಳಿಯನ್ನು ಹಿಂದೂ ಭಯೋತ್ಪಾದನೆಯ ಕೃತ್ಯ ಎಂದು ಬಿಂಬಿಸಲು ಸಂಚು ನಡೆದಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ.
26/11 ಮುಂಬೈ ದಾಳಿಯನ್ನು ಯೋಜಿಸಿದ್ದ ಲಷ್ಕರ್-ಇ-ತೋಯ್ಬಾ ಸಂಘಟನೆಯು ಉಗ್ರ ಅಜ್ಮಲ್ ಕಸಬ್ ಅನ್ನು ಬೆಂಗಳೂರಿನ ಸಮೀರ್ ಚೌಧರಿ ಆಗಿ ಬಿಂಬಿಸಲು ಯೋಜಿಸಿತ್ತು ಎಂದು ಮರಿಯಾ ತಮ್ಮ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.
ಮರಿಯಾ ಅವರ ಪ್ರಕಾರ, ಎಲ್ಲವೂ ಯೋಜನೆಯ ಪ್ರಕಾರ ನಡೆದಿದ್ದರೆ ಕಸಬ್ ಚೌಧರಿಯಾಗಿ ಸಾವನ್ನಪ್ಪುತ್ತಿದ್ದ ಮತ್ತು ಮಾಧ್ಯಮಗಳು ಈ ದಾಳಿಗೆ “ಹಿಂದೂ ಭಯೋತ್ಪಾದಕರು” ಕಾರಣ ಎಂಬಂತೆ ಬಿಂಬಿಸುತ್ತಿದ್ದರು. ಭಯೋತ್ಪಾದಕ ಸಂಘಟನೆಯು ಭಯೋತ್ಪಾದಕರಿಗೆ ಭಾರತೀಯ ವಿಳಾಸಗಳೊಂದಿಗೆ ನಕಲಿ ಗುರುತಿನ ಚೀಟಿಗಳನ್ನು ಕೂಡ ನೀಡುವ ಪ್ಲ್ಯಾನ್ ಇತ್ತು ಎಂದಿದ್ದಾರೆ.
“ಹಿಂದೂ ಭಯೋತ್ಪಾದಕರು ಮುಂಬೈ ಮೇಲೆ ಹೇಗೆ ದಾಳಿ ಮಾಡಿದ್ದಾರೆಂದು ಹೇಳುವ ಪತ್ರಿಕಾ ಮುಖಪುಟಗಳು ರಾರಾಜಿಸುತ್ತಿದ್ದವು. ಟಿವಿ ಪತ್ರಕರ್ತರು ಬೆಂಗಳೂರಿಗೆ ಬಂದು ಉಗ್ರರ ಕುಟುಂಬ ಮತ್ತು ನೆರೆಹೊರೆಯವರನ್ನು ಸಂದರ್ಶಿಸಲು ಒಂದು ಮಾರ್ಗಸೂಚಿಯನ್ನು ತಯಾರಿಸುತ್ತಿದ್ದರು. ಆದರೆ ಅದೃಷ್ಟವಶಾತ್ ಅದ್ಯಾವುದೂ ನಡೆದಿಲ್ಲ, ಅಜ್ಮಲ್ ಕಸಬ್ ಪಾಕಿಸ್ಥಾನದ ಫರೀದ್ಕೋಟ್ ಎಂಬುದು ತಿಳಿದು ಬಂತು” ಎಂದು ಮರಿಯಾ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.
ಕಸಬ್ ತನ್ನ ಬಲಗೈಗೆ ಕೆಂಪು ದಾರವನ್ನು ಧರಿಸಿದ್ದನೆಂದು ವ್ಯಾಪಕವಾಗಿ ವರದಿಯಾಗಿತ್ತು, ಅದು ಕಲವಾ – ಪವಿತ್ರ ಹಿಂದೂ ದಾರ ಎಂದು ನಂಬಿಸಲು ಪ್ರಯತ್ನಿಸಲಾಗಿತ್ತು. 26/11 ದಾಳಿಯನ್ನು “ಹಿಂದೂ ಭಯೋತ್ಪಾದನೆ” ಎಂದು ದೂಷಿಸಲು ದುಷ್ಕರ್ಮಿಗಳು ಯೋಜಿಸುತ್ತಿದ್ದಾರೆ ಎಂಬ ಸಿದ್ಧಾಂತವನ್ನು ಅನೇಕರು ನಂಬಲು ಇದು ಕಾರಣವಾಗಿದೆ ಎಂದಿದ್ದಾರೆ.
ಐಎಸ್ಐ ಮತ್ತು ಲಷ್ಕರ್ ಕಸಬ್ನನ್ನು ಜೈಲಿನಲ್ಲಿ ಹತ್ಯೆ ಮಾಡಲು ಪ್ರಯತ್ನಿಸುತ್ತಿತ್ತು ಎಂದು ಅವರು ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ. ಕಸಬ್ನನ್ನು ನಿರ್ಮೂಲನೆ ಮಾಡುವ ಕಾರ್ಯವನ್ನು ದಾವೂದ್ನ ಗ್ಯಾಂಗ್ಗೆ ವಹಿಸಲಾಗಿತ್ತು ಎಂದು ಮರಿಯಾ ಹೇಳಿದ್ದಾರೆ.
ಕಸಬ್ ಜೀವಂತವಾಗಿ ಸೆರೆಯಾದ ಹಿನ್ನಲೆಯಲ್ಲಿ ಎಲ್ಲಾ ಯೋಜನೆಗಳು ತಲೆ ಕೆಳಗಾದವು ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.