ನವದೆಹಲಿ: ಪಾಕಿಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಟರ್ಕಿಶ್ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಅವರು ಜಮ್ಮು ಮತ್ತು ಕಾಶ್ಮೀರ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಎರ್ಡೊಗನ್ ಅವರು ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ನಡೆಸಿದ ಸಭೆಯಲ್ಲಿ, ಕಾಶ್ಮೀರ ವಿಷಯದ ಬಗ್ಗೆ ಪಾಕಿಸ್ಥಾನದ ನಿಲುವಿಗೆ ತಮ್ಮ ದೇಶದ ಬೆಂಬಲ ಇದೆ ಎಂದಿದ್ದಾರೆ. ಟರ್ಕಿ ಅಧ್ಯಕ್ಷರ ಈ ನಡವಳಿಕೆಗೆ ಭಾರತ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದೆ.
ಟರ್ಕಿಶ್ ಅಧ್ಯಕ್ಷರು ಮತ್ತು ಟರ್ಕಿ-ಪಾಕಿಸ್ಥಾನದ ಜಂಟಿ ಘೋಷಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಉಲ್ಲೇಖಗಳ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತ, “ಜಮ್ಮು ಮತ್ತು ಕಾಶ್ಮೀರದ ಬಗೆಗಿನ ಎಲ್ಲಾ ಉಲ್ಲೇಖಗಳನ್ನು ತಿರಸ್ಕರಿಸುತ್ತೇವೆ, ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಮತ್ತು ಅಳಿಸಲಾಗದ ಭಾಗವಾಗಿದೆ” ಎಂದು ಹೇಳಿದೆ.
“ಭಾರತದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬಾರದು ಮತ್ತು ಪಾಕಿಸ್ಥಾನದಿಂದ ಹೊರಹೊಮ್ಮುತ್ತಿರುವ ಭಯೋತ್ಪಾದನೆಯಿಂದ ಉಂಟಾಗುತ್ತಿರುವ ಗಂಭೀರ ಬೆದರಿಕೆಗಳು ಸೇರಿದಂತೆ ಸತ್ಯಗಳ ಬಗ್ಗೆ ಸರಿಯಾದ ತಿಳುವಳಿಕೆಯನ್ನು ಬೆಳೆಸಿಕೊಳ್ಳಬೇಕೆಂದು ನಾವು ಟರ್ಕಿ ನಾಯಕತ್ವವನ್ನು ಕೋರುತ್ತೇವೆ” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
ಭಾರತದ ಆಕ್ಷೇಪದ ಹೊರತಾಗಿಯೂ ಅಧ್ಯಕ್ಷ ಎರ್ಡೊಗನ್ ಶುಕ್ರವಾರ ಮತ್ತೊಮ್ಮೆ ಕಾಶ್ಮೀರ ಸಮಸ್ಯೆಯನ್ನು ಎತ್ತಿದ್ದಾರೆ, ಟರ್ಕಿ ಪಾಕಿಸ್ಥಾನದ ನಿಲುವನ್ನು ಬೆಂಬಲಿಸುತ್ತದೆ ಎಂದು ಪುನರುಚ್ಛರಿಸಿದ್ದಾರೆ.
“ನಮ್ಮ ಕಾಶ್ಮೀರಿ ಸಹೋದರರು ಮತ್ತು ಸಹೋದರಿಯರು ದಶಕಗಳಿಂದ ಅನಾನುಕೂಲತೆಗಳಿಂದ ಬಳಲುತ್ತಿದ್ದಾರೆ ಮತ್ತು ಇತ್ತೀಚಿನ ದಿನಗಳಲ್ಲಿ ಕೈಗೊಂಡ ಏಕಪಕ್ಷೀಯ ಕ್ರಮಗಳಿಂದಾಗಿ ಈ ನೋವುಗಳು ಗಂಭೀರವಾಗಿವೆ” ಎಂದು ಅಧ್ಯಕ್ಷ ಎರ್ಡೊಗನ್, ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿರುವುದನ್ನು ಉಲ್ಲೇಖಿಸಿ ಹೇಳಿದ್ದಾರೆ.
ಟರ್ಕಿಯ ಈ ಧೋರಣೆಗೆ ಭಾರತ ತೀವ್ರ ಖಂಡನೆಯನ್ನು ವ್ಯಕ್ತಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.