ತಮುಲ್ಪುರ: ಕಳೆದ ವರ್ಷ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಇಬ್ಬರು ಯೋಧರ ಕುಟುಂಬ ಮತ್ತು ಗ್ರಾಮದ ಸದಸ್ಯರು ಅವರ ಆಳೆತ್ತರದ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದಾರೆ. ಹುತಾತ್ಮರಾದ ಮನೇಶ್ವರ ಬಸುಮಾಟರಿ ಮತ್ತು ಭಗೀರಥ್ ಸಿಂಗ್ ಅವರ ಪತ್ರಿಮೆಯನ್ನು ನಿರ್ಮಾಣ ಮಾಡಲಾಗಿದೆ.
ಮನೇಶ್ವರ ಬಸುಮಾಟರಿ ಅವರ ಪ್ರತಿಮೆಯನ್ನು ಅಸ್ಸಾಂನ ಬಕ್ಸ್ ಗ್ರಾಮದಲ್ಲಿ ನಿರ್ಮಾಣ ಮಾಡಲಾಗಿದೆ, ಭಗೀರಥ್ ಸಿಂಗ್ ಅವರ ಪ್ರತಿಮೆಯನ್ನು ಅವರ ಗ್ರಾಮ ರಾಜಸ್ಥಾನದ ಧೋಲಪುರದಲ್ಲಿ ನಿರ್ಮಾಣ ಮಾಡಲಾಗಿದೆ.
ಗುವಾಹಟಿಯಿಂದ 80 ಕಿಲೋಮೀಟರ್ ದೂರದಲ್ಲಿರುವ ತಮುಲ್ಪುರ ಮೂಲದ ಮನೇಶ್ವರ ಬಸುಮಾಟರಿ, ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್)ಯಲ್ಲಿ ಹೆಡ್ ಕಾನ್ಸ್ಟೆಬಲ್ ಆಗಿದ್ದರು, ಅವರು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ 40 ಯೋಧರಲ್ಲಿ ಒಬ್ಬರು.
ಅವರ ಗೌರವಾರ್ಥ ಫೈಬರ್-ಗ್ಲಾಸ್ ಪ್ರತಿಮೆಯನ್ನು ನಿರ್ಮಿಸಲು ಮನೇಶ್ವರ ಬಸುಮಾಟರಿ ಅವರ ಕುಟುಂಬ, ಸ್ನೇಹಿತರು ಮತ್ತು ಗ್ರಾಮಸ್ಥರು ಸುಮಾರು 10 ಲಕ್ಷ ರೂ. ಗಳನ್ನು ಸಂಗ್ರಹ ಮಾಡಿದ್ದಾರೆ. ಇದೀಗ ಗ್ರಾಮದಲ್ಲಿ ಅವರ ಆಳೆತ್ತರದ ಪ್ರತಿಮೆ ನಿರ್ಮಾಣವಾಗಿದೆ. ಸಿಆರ್ಪಿಎಫ್ ಯೋಧರು, ಅಧಿಕಾರಿಗಳು ಕೂಡ ಇದಕ್ಕೆ ಪುಷ್ಪಗಳನ್ನು ಅರ್ಪಿಸಿ ಗೌರವ ಸಲ್ಲಿಸಿದ್ದಾರೆ.
ಬಸುಮಾಟರಿಯ ಮಗ ಧನಂಜಯ್ ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದ್ದು, “ಈ ಪ್ರತಿಮೆಯನ್ನು ನೋಡಿದ ಬಳಿಕ ಜನರು ನನ್ನ ತಂದೆಯ ಕಥೆಯ ಬಗ್ಗೆ ಕೇಳುತ್ತಾರೆ” ಎಂದಿದ್ದಾರೆ.
“ಸರ್ಕಾರವು ನಮಗೆ ನೀಡಿದ ಎಲ್ಲಾ ಭರವಸೆಗಳನ್ನು ಉಳಿಸಿಕೊಂಡಿದೆ ಮತ್ತು ಸದಾ ನಮ್ಮೊಂದಿಗೆ ಸಂಪರ್ಕದಲ್ಲಿದೆ, ಸಿಆರ್ಪಿಎಫ್ ಅಧಿಕಾರಿಗಳು ನಮ್ಮ ಯೋಗಕ್ಷೇಮವನ್ನು ಕೇಳಲು ಆಗಾಗ್ಗೆ ಬರುತ್ತಿರುತ್ತಾರೆ. ನಾವು ನಮ್ಮ ತಂದೆಯ ಸ್ಮರಣಾರ್ಥ ವಿಶೇಷವಾದುದನ್ನು ಮಾಡಲು ಬಯಸಿದೆವು, ಜನರು ಈ ಪ್ರತಿಮೆಯನ್ನು ನೋಡಿದಾಗ ಅವರು ನಮ್ಮ ತಂದೆಯ ಕಥೆಯ ಬಗ್ಗೆ ವಿಚಾರಿಸುತ್ತಾರೆ, ಅವರ ಬಗ್ಗೆ ತಿಳಿದುಕೊಳ್ಳಲು ನಮ್ಮ ಹಳ್ಳಿಗೆ ಬರುತ್ತಾರೆ” ಎಂದಿದ್ದಾರೆ.
ಈ ಪ್ರತಿಮೆ ಯುವಕರು ಸಶಸ್ತ್ರ ಪಡೆಗಳಿಗೆ ಸೇರಲು ಪ್ರೇರಣೆ ನೀಡುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.