ನವದೆಹಲಿ : ಕೊರೋನವೈರಸ್ ಬಿಕ್ಕಟ್ಟನ್ನು ಎದುರಿಸುತ್ತಿರುವ ಚೀನಾಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಹಾಯ ಹಸ್ತ ಚಾಚಲು ಮುಂದಾಗಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರಿಗೆ ಪತ್ರ ಬರೆದು, ನೆರವು ನೀಡಲು ಸಿದ್ಧವಿರುವುದಾಗಿ ತಿಳಿಸಿದರು.
ಮಾರಣಾಂತಿಕ ಕೊರೋನವೈರಸ್ ಚೀನಾವನ್ನು ಅಕ್ಷರಶಃ ತತ್ತರಿಸುವಂತೆ ಮಾಡಿದೆ. ಈ ದುರದೃಷ್ಟಕರ ಪರಿಸ್ಥಿತಿಯಲ್ಲಿ ಸಂಭವಿಸಿದ ಪ್ರಾಣಹಾನಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಕಳೆದ ಹಲವು ವಾರಗಳಿಂದ ಸ್ಥಗಿತ ಸ್ಥಿತಿಯಲ್ಲಿ ಇರಿಸಲಾಗಿರುವ ಹುಬೈ ಪ್ರಾಂತ್ಯದ ವುಹಾನ್ನಿಂದ ಸುಮಾರು 650 ಭಾರತೀಯ ನಾಗರಿಕರನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ಒದಗಿಸಿದ ಸೌಲಭ್ಯಕ್ಕಾಗಿ ಅವರು ಚೀನಾ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು.
ಕೊರೋನವೈರಸ್ ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದವರ ಸಂಖ್ಯೆ ಈಗ 902 ಕ್ಕೆ ತಲುಪಿದೆ ಮತ್ತು ವರದಿಗಳ ಪ್ರಕಾರ, ಭಾನುವಾರ 81 ಹೊಸ ಸಾವುನೋವುಗಳು ವರದಿಯಾಗಿದೆ. 2002-2003 ರ ನಡುವೆ ಕಾಣಿಸಿಕೊಂಡಿದ್ದ ಸಾರ್ಸ್ ಸೋಂಕು ಜಾಗತಿಕವಾಗಿ 774 ಜನರನ್ನು ಕೊಂದಿತ್ತು. ಆದರೀಗ ಕೊರೋನ ವೈರಸ್ ಚೀನಾವೊಂದರಲ್ಲೇ 902 ಮಂದಿಯನ್ನು ಆಹುತಿ ಪಡೆದುಕೊಂಡಿದೆ.
ಚೀನಾದಾದ್ಯಂತ ದೃಢಪಡಿಸಿದ ಕೊರೋನವೈರಸ್ ಪ್ರಕರಣಗಳ ಸಂಖ್ಯೆ 37,000 ದಾಟಿದೆ. ಹುಬೈ ಪ್ರಾಂತ್ಯದ ಆರೋಗ್ಯ ಆಯೋಗವು ತನ್ನ ದೈನಂದಿನ ಪಟ್ಟಿ ಪರಿಷ್ಕರಣೆಯಲ್ಲಿ ಇನ್ನೂ 2,147 ಹೊಸ ಪ್ರಕರಣಗಳನ್ನು ದೃಢಪಡಿಸಿದೆ.
ಫೆಬ್ರವರಿ 1 ಮತ್ತು 2 ರಂದು ವೈದ್ಯಕೀಯ ಸೌಲಭ್ಯದಿಂದ ಸಜ್ಜುಗೊಂಡ ವಿಶೇಷ ವಿಮಾನವನ್ನು ಕಳುಹಿಸುವ ಮೂಲಕ ಚೀನಾದಲ್ಲಿ ನೆಲೆಸಿದ್ದ 647 ಭಾರತೀಯರನ್ನು ಭಾರತ ಸರ್ಕಾರ ಸುರಕ್ಷಿತವಾಗಿ ಸ್ಥಳಾಂತರಿಸಿದೆ. ಭಾರತೀಯ ನಾಗರಿಕರೊಂದಿಗೆ, 7 ಮಾಲ್ಡೀವ್ಸ್ ನಾಗರಿಕರನ್ನು ಸಹ ಸ್ಥಳಾಂತರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.