ನವದೆಹಲಿ: ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು ಮತ್ತು ನೆರೆಯ ರಾಷ್ಟ್ರಗಳಲ್ಲಿನ ಅಲ್ಪಸಂಖ್ಯಾತರಿಗೆ ನೀಡಿದ ಭರವಸೆಯನ್ನು ಈಡೇರಿಸಲು ಪೌರತ್ವ ಕಾನೂನನ್ನು ತರಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯ ನ್ಯಾಷನಲ್ ಕೆಡೆಟ್ ಕಾರ್ಪ್ಸ್ ಸಮಾವೇಶದಲ್ಲಿ ಮಾತನಾಡಿದ ಅವರು, ವಿಭಜನೆಯ ಸಮಯದಲ್ಲಿ ಮಾಡಲಾದ ಅನ್ಯಾಯಗಳ ಬಗ್ಗೆ ಮಾತನಾಡಿದರು.
“ಕಾಗದದ ತುಂಡಿನ ಮೇಲೆ ರೇಖೆಯನ್ನು ಎಳೆಯಲಾಯಿತು. ಆ ಸಮಯದಲ್ಲಿ ಸ್ವತಂತ್ರ ಭಾರತವನ್ನು ಆಳುತ್ತಿದ್ದವರು ವಿಭಜನೆಯನ್ನು ಒಪ್ಪಿಕೊಂಡರು” ಎಂದು ಹೇಳಿದ್ದಾರೆ.
“ನೆಹರೂ-ಲಿಯಾಕತ್ ಒಪ್ಪಂದವು ಅಲ್ಪಸಂಖ್ಯಾತರನ್ನು ರಕ್ಷಿಸುವ ಬಗ್ಗೆ ಮಾತನಾಡಿದೆ, ಗಾಂಧೀಜಿಯವರು ಕೂಡ ಅದನ್ನೇ ಆಶಿಸಿದರು. ಭಾರತ ನೀಡಿದ ಭರವಸೆಯನ್ನು ಈಡೇರಿಸಲು ನಮ್ಮ ಸರ್ಕಾರ ಸಿಎಎ ಅನ್ನು ಪರಿಚಯಿಸಿದೆ” ಎಂದಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿರುವ ರಾಜಕೀಯ ಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದ ಅವರು, “ಮತ ಬ್ಯಾಂಕ್ ರಾಜಕೀಯದಿಂದ ಪ್ರೇರೇಪಿತರಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ನಡೆದ ದೌರ್ಜನ್ಯಗಳ ಬಗ್ಗೆ ರಾಜಿ ಮಾಡಿಕೊಳ್ಳುತ್ತಿದ್ದಾರೆ” ಎಂದಿದ್ದಾರೆ.
“ಕೆಲವರು ದಲಿತರ ಧ್ವನಿಯಂತೆ ವರ್ತಿಸುತ್ತಿದ್ದಾರೆ, ಪಾಕಿಸ್ಥಾನದಲ್ಲಿ ದಲಿತರ ವಿರುದ್ಧದ ದೌರ್ಜನ್ಯವನ್ನು ಇವರು ನಿರ್ಲಕ್ಷಿಸುತ್ತಾರೆ, ಪಾಕಿಸ್ಥಾನವನ್ನು ತೊರೆದು ಭಾರತಕ್ಕೆ ಬಂದಿರುವ ಕಿರುಕುಳಕ್ಕೊಳಗಾದವರಲ್ಲಿ ಹೆಚ್ಚಿನವರು ದಲಿತರು ಎಂಬುದನ್ನು ಅವರು ಮರೆಯುತ್ತಿದ್ದಾರೆ” ಎಂದು ಹೇಳಿದ್ದಾರೆ.
ಪ್ರತಿಯೊಬ್ಬ ಭಾರತೀಯನೂ ನಮಗೆ ಅಮೂಲ್ಯ ಮತ್ತು ನಾವು ಈ ಚಿಂತನೆಯೊಂದಿಗೇ ಮುಂದೆ ಸಾಗುತ್ತಿದ್ದೇವೆ. ಪ್ರತಿಯೊಬ್ಬ ಭಾರತೀಯನು ಭ್ರಷ್ಟಾಚಾರವನ್ನು ಕೊನೆಗೊಳಿಸಬೇಕೆಂದು ಬಯಸುತ್ತಾನೆ. ನಮ್ಮ ಸರ್ಕಾರ ಜನ ಧನ್ ಮತ್ತು ಆಧಾರ್ ಅನ್ನು ತಂದಿದೆ ಮತ್ತು ಡಿಜಿಟಲೀಕರಣದೊಂದಿಗೆ ನಾವು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುತ್ತಿದ್ದೇವೆ. 4ನೇ ಕೈಗಾರಿಕಾ ಕ್ರಾಂತಿಯಲ್ಲಿ ಯುವ ಭಾರತ ನಿರ್ಣಾಯಕ ಪಾತ್ರ ವಹಿಸಲಿದೆ. ನಾವು ನಮ್ಮ ಆರ್ಥಿಕತೆಯನ್ನು ಹೊಸ ಗರಿಷ್ಠ ಮಟ್ಟಕ್ಕೆ ಕೊಂಡೊಯ್ಯಬೇಕಾಗಿದೆ. ನಾವು ಸ್ವ-ಸುಸ್ಥಿರ, ಸಬಲೀಕೃತ, ಸಮೃದ್ಧ ಮತ್ತು ಸುರಕ್ಷಿತ ಭಾರತವನ್ನು ನಿರ್ಮಿಸಬೇಕಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.