ನವದೆಹಲಿ: ಎಡಪಂಥೀಯರು ವಿದ್ಯಾರ್ಥಿ ರಾಜಕೀಯದ ಹೆಸರಿನಲ್ಲಿ ವಿಶ್ವವಿದ್ಯಾಲಯಗಳ ಆವರಣದಲ್ಲಿ ಹಿಂಸಾಚಾರವನ್ನು ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಸೇರಿದಂತೆ 200 ಕ್ಕೂ ಅಧಿಕ ಶೈಕ್ಷಣಿಕ ತಜ್ಞರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದಿದ್ದಾರೆ.
ಜನವರಿ 11 ರಂದು ಉಪ ಕುಲಪತಿ, ಪ್ರೊಫೆಸರ್ ಮತ್ತು ಶೈಕ್ಷಣಿಕ ತಜ್ಞರ 208 ಸಹಿಗಳುಳ್ಳ ಪತ್ರವನ್ನು ಮೋದಿಗೆ ಕಳುಹಿಸಿಕೊಡಲಾಗಿದೆ. ಎಡಪಂಥೀಯರು ಕಾಲೇಜು ಆವರಣಗಳನ್ನು ಹಿಂಸಾಚಾರದ ಕೇಂದ್ರವಾಗಿ ಪರಿವರ್ತಿಸಲು ಬಯಸುತ್ತಿದ್ದಾರೆ ಎಂದು ಇದರಲ್ಲಿ ಆರೋಪಿಸಿದ್ದಾರೆ.
ಈ ವಿಷಯದ ಬಗ್ಗೆ ಆಳವಾದ ಕಳವಳ ವ್ಯಕ್ತಪಡಿಸಿದ ಈ ಶಿಕ್ಷಣ ತಜ್ಞರ ಗುಂಪು, ಶಿಕ್ಷಣ ಸಂಸ್ಥೆಗಳನ್ನು ಅವ್ಯವಸ್ಥೆಯ ವಾತಾವರಣದಿಂದ ಮುಕ್ತಗೊಳಿಸಬೇಕೆಂದು ಒತ್ತಾಯಿಸಿದೆ. ಇತ್ತೀಚಿನ ಘಟನೆಗಳನ್ನು ಉಲ್ಲೇಖಿಸಿ, ಕೇಂದ್ರದ ಅಧೀನದಲ್ಲಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ಯು) ಮತ್ತು ರಾಜಧಾನಿಯ ಜಾಮಿಯಾ ಮಿಲಿಯಾ ಮತ್ತು ಕೋಲ್ಕತ್ತಾದ ಜಾದವ್ಪುರ್ ವಿಶ್ವವಿದ್ಯಾಲಯದ ಬೆರಳೆಣಿಕೆಯ ಎಡಪಂಥೀಯ ಕಾರ್ಯಕರ್ತರು ಈ ಯೂನಿವರ್ಸಿಟಿಗಳಲ್ಲಿ ಅವ್ಯವಸ್ಥೆಯ ವಾತಾವರಣವನ್ನು ಸೃಷ್ಟಿಸುವ ಮೂಲಕ ಶೈಕ್ಷಣಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಎಡ ಕಾರ್ಯಕರ್ತರ ಚಟುವಟಿಕೆಗಳು ಅಧ್ಯಯನ ಮತ್ತು ಕಲಿಕೆಯಿಂದ ಹಿಡಿದು ವಿಚಾರ ವಿನಿಮಯದ ಯಾವುದೇ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲು ಕೂಡ ಅಡ್ಡಿಯಾಗಿದೆ ಎಂದು ಶಿಕ್ಷಣ ತಜ್ಞರು ಹೇಳಿದ್ದಾರೆ.
ಕ್ಯಾಂಪಸ್ಗಳಲ್ಲಿ ಒಂದು ಸಿದ್ಧಾಂತವನ್ನು ಹೇರುವ ಪ್ರಯತ್ನ ನಡೆಯುತ್ತಿದೆ, ಇದರಲ್ಲಿ ಎಡ ಸಂಘಟನೆಗಳಿಗೆ ಹಿಡಿತವಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಅಂತಹ ಕ್ಯಾಂಪಸ್ಗಳನ್ನು ಖಾಸಗಿ ಎಸ್ಟೇಟ್ ಎಂದು ಪರಿಗಣಿಸಲಾಗುತ್ತಿದ್ದು, ಅಲ್ಲಿ ವೈಯಕ್ತಿಕ ಸ್ವಾತಂತ್ರ್ಯಗಳು ಆಕ್ರಮಣಕ್ಕೊಳಗಾಗುತ್ತವೆ, ಶಿಕ್ಷಕರು ಸಹ ಅಸಹಿಷ್ಣುತೆಯನ್ನು ಎದುರಿಸುತ್ತಿದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಪತ್ರಕ್ಕೆ ಸಹಿ ಹಾಕಿದ ಪ್ರಮುಖ ಶಿಕ್ಷಣ ತಜ್ಞರಲ್ಲಿ ಮಧ್ಯಪ್ರದೇಶದ ಹರಿಸಿಂಗ್ ಗೌರ್ ವಿಶ್ವವಿದ್ಯಾಲಯದ ಉಪಕುಲಪತಿ ಆರ್ ಪಿ ತಿವಾರಿ, ದಕ್ಷಿಣ ಬಿಹಾರ ಕೇಂದ್ರ ವಿಶ್ವವಿದ್ಯಾಲಯದ ಉಪಕುಲಪತಿ ಎಚ್ ಸಿ ಎಸ್ ರಾಥೋಡ್, ಮಹಾರಾಷ್ಟ್ರ ಗಾಂಧಿ ಅಂತರರಾಷ್ಟ್ರೀಯ ಹಿಂದಿ ವಿಶ್ವವಿದ್ಯಾಲಯದ ಉಪಕುಲಪತಿ ರಜನೀಶ್ ಕುಮಾರ್ ಶುಕ್ಲಾ ಸೇರಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.