News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮತ್ತೆ ಶಿವಸೇನೆ ಪುಂಡಾಟ ಶುರು : ಕನ್ನಡಿಗರ ಮೇಲೆ ದರ್ಪ ಪ್ರದರ್ಶನ

ತನ್ನನ್ನು ತಾನು ಮರಾಠಿಗರ ಸಂರಕ್ಷಕ ಎಂದು ಭಾವಿಸಿಕೊಂಡಿರುವ ಶಿವಸೇನೆಯು ನಿತ್ಯ ಒಂದಲ್ಲ ಒಂದು ಅವಾಂತರಗಳನ್ನು ಮಾಡಿಕೊಳ್ಳುತ್ತಿದೆ. ಇತ್ತೀಚಿಗಷ್ಟೇ ಉದ್ಧವ್ ಠಾಕ್ರೆ ವಿರುದ್ಧ ಮಾತನಾಡಿದ್ದ ವ್ಯಕ್ತಿಯ ತಲೆ ಬೋಳಿಸಿದ ಶಿವಸೇನೆ ಕಾರ್ಯಕರ್ತರು ಇದೀಗ ಕನ್ನಡಿಗರ ಮೇಲೆ ದರ್ಪ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಪ್ರತಿಕೃತಿಯನ್ನು ಸುಟ್ಟು ಹಾಕಿದ್ದಾರೆ ಮತ್ತು ಕನ್ನಡ ಸಿನಿಮಾದ ಪ್ರದರ್ಶನಕ್ಕೆ ಅಡ್ಡಿ ಉಂಟು ಮಾಡಿದ್ದಾರೆ‌.

ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಪ್ರತಿಪಾದಿಸುತ್ತಿರುವ ಶಿವಸೇನೆಯವರು ಕನ್ನಡಿಗರ ವಿರುದ್ದ ತಮ್ಮ ಗೂಂಡಾಗಿರಿಯನ್ನು ಪ್ರದರ್ಶನ ಮಾಡುತ್ತಿದ್ದಾರೆ. ಎರಡು ದಿನಗಳ ಹಿಂದೆ ಕನ್ನಡದ ಬಾವುಟವನ್ನು ಸುಡಲಾಗಿತ್ತು. ಇದೀಗ ಕೊಲ್ಹಾಪುರದಲ್ಲಿ ಮುಖ್ಯಮಂತ್ರಿಗಳ ಪ್ರತಿಕೃತಿಯನ್ನು ಸುಟ್ಟು ಹಾಕಲಾಗಿದೆ ಮತ್ತು ಕನ್ನಡ ಸಿನಿಮಾ ಪ್ರದರ್ಶನಕ್ಕೆ ಅಡ್ಡಿ ಉಂಟು ಮಾಡಿದ್ದಾರೆ. ಕೊಲ್ಹಾಪುರ ಮತ್ತು ಕರ್ನಾಟಕದ ನಡುವೆ ಸಂಚರಿಸುತ್ತಿದ್ದ ಸಾರಿಗೆ ಬಸ್ಸುಗಳ ಮೇಲೆ ಮಧ್ಯರಾತ್ರಿ ದಾಳಿ ನಡೆಸಿದ್ದಾರೆ. ಅಪ್ಸರಾ ಟಾಕೀಸಿಗೆ ನುಗ್ಗಿದ ಶಿವಸೇನೆ ಗೂಂಡಾಗಳು ಕನ್ನಡ ಸಿನಿಮಾ ಪ್ರದರ್ಶನಕ್ಕೆ ತಡೆ ನೀಡಿದ್ದಾರೆ. ಇದರಿಂದಾಗಿ ಅವನೇ ಶ್ರೀಮನ್ನಾರಾಯಣ ಸಿನಿಮಾ ಪ್ರದರ್ಶನ ಸ್ಥಗಿತಗೊಂಡಿದೆ. ಮಾತ್ರವಲ್ಲ ಯಾವುದೇ ಕನ್ನಡ ಸಿನಿಮಾಗಳನ್ನು ಪ್ರದರ್ಶನ ಮಾಡಬಾರದು ಎಂದು ಟಾಕೀಸ್ ಮಾಲೀಕನಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಗಾಂಧಿನಗರ ಏರಿಯಾದಲ್ಲಿ ಇದ್ದ ಕೆಲವು ಕನ್ನಡ ಬೋರ್ಡುಗಳಿಗೆ ಮಸಿ ಬಳಿದಿದ್ದಾರೆ. ಶಿವಸೇನೆ ಸಂಸದ ಧೈರ್ಯಶೀಲ್ ಮಾನೆ ಮತ್ತು ಮಾಜಿ ಕಾಂಗ್ರೆಸ್ ಶಾಸಕ ಸತೇಜ್ ಪಾಟಿಲ್ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದಾರೆ.

ಹಿಂದೆ ಬೆಳಗಾವಿ ಮಹಾರಾಷ್ಟ್ರದ ಭಾಗವಾಗಿತ್ತು. 1956ರಲ್ಲಿ ಇದನ್ನು ಮೈಸೂರು ರಾಜ್ಯ (ಈಗ ಕರ್ನಾಟಕ)ಕ್ಕೆ ವಿಲೀನಗೊಳಿಸಲಾಯಿತು. ಇಲ್ಲಿ ಮರಾಠಿ ಮಾತನಾಡುವ ಜನರು ಇದ್ದಾರೆ. ಆದರೆ ಇದು ಈಗ ಕರ್ನಾಟಕದ ಜಿಲ್ಲೆ. ಆದರೆ ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಅವರು ಬೆಳಗಾವಿಯನ್ನು ಕರ್ನಾಟಕ ಆಕ್ರಮಿತ ಮಹಾರಾಷ್ಟ್ರದ ಜಿಲ್ಲೆ ಎಂದು ಸಂಬೋಧಿಸಿದ ಹಿನ್ನೆಲೆಯಲ್ಲಿ ಮತ್ತೊಮ್ಮೆ ವಿವಾದ ಭುಗಿಲೆದ್ದಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಠಾಕ್ರೆ ಅವರು ನೀಡಿರುವ ಹೇಳಿಕೆಯು ಒಂದು ಪ್ರದೇಶ ಶಾಂತಿಯನ್ನು ಭಂಗ ಮಾಡಿದೆ. ಅವರದೇ ಪಕ್ಷದ ಕಾರ್ಯಕರ್ತರು ಗೂಂಡಾಗಳಂತೆ ವರ್ತಿಸಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ.

ಇತ್ತೀಚಿಗೆ ಉದ್ಧವ್ ಠಾಕ್ರೆ ಬಗ್ಗೆ ಫೇಸ್‌ಬುಕ್‌ನಲ್ಲಿ ತಮಾಷೆಯ ಮಾತುಗಳನ್ನಾಡಿದ ವ್ಯಕ್ತಿಯೊಬ್ಬನ ಮೇಲೆ ಮುಗಿಬಿದ್ದಿದ್ದ ಶಿವಸೇನೆ ಕಾರ್ಯಕರ್ತರು ಆ ವ್ಯಕ್ತಿಯ ಕೇಶಮುಂಡನ ಮಾಡಿದ್ದರು. ಮನೆಗೆ ನುಗ್ಗಿ ಆತನನ್ನು ಹೊರ ಬರುವಂತೆ ಹೇಳಿ ಈ ಕೃತ್ಯವನ್ನು ಎಸಗಿದ್ದರು. ಮಾತ್ರವಲ್ಲದೆ ತಾವು ಮಾಡಿದ ಘನಕಾರ್ಯವನ್ನು ಫೇಸ್ಬುಕ್ ಮೂಲಕ ಹಂಚಿಕೊಂಡಿದ್ದರು. ಉದ್ಧವ್ ಠಾಕ್ರೆ ನಮ್ಮ ದೇವರು, ಅವರ ಬಗ್ಗೆ ಒಂದೇ ಒಂದು ಮಾತನ್ನಾಡಬಾರದು ಎಂದು ಎಚ್ಚರಿಕೆ ನೀಡಿದ್ದರು. ಅಲ್ಲದೆ ಉತ್ತರ ಭಾರತೀಯರಿಗೆ ಉತ್ತರದವರ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಹೇಳಿದ್ದರು.

ಮಹಾರಾಷ್ಟ್ರದಾದ್ಯಂತ ಎಂಎನ್ಎಸ್ ಕಾರ್ಯಕರ್ತರು ಗೂಂಡಾಗಿರಿಯನ್ನು ಪ್ರದರ್ಶಿಸಿ ಅವರನ್ನು ದೌರ್ಜನ್ಯಕ್ಕೊಳಪಡಿಸುವುದು ಮಹಾರಾಷ್ಟ್ರದಲ್ಲಿ ನಡೆಯುವ ಸಾಮಾನ್ಯ ದುರಂತ. ಆದರೆ ಇದೀಗ ಶಿವಸೇನಾ ಕಾರ್ಯಕರ್ತರು ಅವರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಬೇರೆ ರಾಜ್ಯದಿಂದ ಬಂದವರನ್ನು ಟಾರ್ಗೆಟ್ ಮಾಡುವ ಹಂತಕ್ಕೆ ತಲುಪಿದ್ದಾರೆ. ಇದೀಗ ಬೆಳಗಾವಿ ವಿಚಾರವಾಗಿ ಮಹಾರಾಷ್ಟ್ರವು ಭಾಷಾ ಹಿಂಸಾಚಾರವನ್ನು ಸೃಷ್ಟಿಸಲು ಕುಮ್ಮಕ್ಕು ನೀಡುತ್ತಿದೆ.

ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಅವರು ಆಯ್ಕೆಯಾಗಿರುವುದು ಶಿವಸೇನೆ ಪುಂಡರ ಅಟ್ಟಹಾಸ ಮಿತಿಮೀರುವಂತೆ ಮಾಡಿದೆ. ಶಿವಸೇನೆಯ ಗೂಂಡಾಗಳು ಮಾಡುವ ದುಷ್ಕೃತ್ಯಕ್ಕೆ ಶಿಕ್ಷೆ ಆಗುತ್ತಿಲ್ಲ ಎಂಬುದು ವಿಪರ್ಯಾಸ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top